ಕೋವಿಡ್ ನಿಯಂತ್ರಣದ ಬಗ್ಗೆ ಡಾ. ಶಶಿಕಿರಣ್ ಜೊತೆ ಮುಖ್ಯಮಂತ್ರಿ ಸಂವಾದ

ಉಡುಪಿ: ಶನಿವಾರ ವೀಡಿಯೊ ಸಂವಾದ ಮೂಲಕ ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮ ಹಾಗೂ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ಕುರಿತಂತೆ ರಾಜ್ಯದ ವಿವಿಧ ಜಿಲ್ಲೆಗಳ 11 ಮಂದಿ ಪರಿಣಿತ ವೈದ್ಯರೊಂದಿಗೆ ಸಲಹೆ ಆಲಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಡಾ. ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ ಅವರಿಂದ ಸಲಹೆ ಕೋರಿದರು.

ಭಾರತದ ಪ್ರಪ್ರಥಮ ಖಾಸಗಿ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಿದ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಆರಂಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ, ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಕೋವಿಡ್ ನಿಯಂತ್ರಣ ಕುರಿತಂತೆ ಡಾ. ಶಶಿಕಿರಣ್ ನೀಡಿದ ಸಲಹೆ ಮತ್ತು ತರಬೇತಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ ಕೊರೋನಾ ಕುರಿತು ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ವಿವಿಧೆಡೆಗಳಿಂದ ಮಾಹಿತಿ ಸಂಗ್ರಹಿಸಿ ಚಿಕಿತ್ಸೆ, ಕೆ.ಪಿ.ಎಂ.ಇ ಅಡಿ ಬರುವ ಎಲ್ಲಾ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗೆ ಮಾಸ್ಕ್ ಧಾರಣೆ, ವ್ಯಕ್ತಿಗತ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಬಗ್ಗೆ ತರಬೇತಿ ನೀಡಲಾಯಿತು. ಪಿಪಿಇ ಕಿಟ್ ಬಳಕೆ ಬಗ್ಗೆಯೂ ವೀಡಿಯೊ ತಯಾರಿಸಿ ಎಲ್ಲಾ ವೈದ್ಯರಿಗೆ ಕಳುಹಿಸಲಾಯಿತು. ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಸ್ಪತ್ರೆಯ ಪ್ರತಿಯೊಂದು ಸಿಬ್ಬಂದಿಯೂ ಯಾವ ರೀತಿಯ ಸುರಕ್ಷಾ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಆನ್ ಲೈನ್ ಹಾಗೂ ಆಸ್ಪತ್ರೆಗಳಿಗೆ ತೆರಳಿ ತರಬೇತಿ ನೀಡಲಾಯಿತು ಎಂದು ಡಾ. ಶಶಿಕಿರಣ್ ವಿವರಣೆ ಕೊಟ್ಟರು.

ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತಂಡವಾಗಿ ಎಲ್ಲರೂ ಕಾರ್ಯನಿರ್ವಹಿದ್ದೇವೆ. ಆಸ್ಪತ್ರೆಯಲ್ಲಿ ಇದುವರೆಗೆ ಒಟ್ಟು 1,800ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಆರಂಭದಲ್ಲಿ ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದ್ದು, ನಂತರ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗೆ ರೆಮಿಡಿಸಿವರ್ ಮತ್ತು ಅಕ್ಸಿಜನ್ ಸರಬರಾಜು ಕುರಿತಂತೆ ಮುಖ್ಯಮಂತ್ರಿ ಕೇಳಿದ ಮಾಹಿತಿಗೆ ಉತ್ತರಿಸಿದ ಡಾ. ಶಶಿಕಿರಣ್, ಏಪ್ರಿಲ್ ಹಾಗೂ ಮೇ ಆರಂಭದಲ್ಲಿ ಸ್ವಲ್ಪ ವ್ಯತ್ಯಯವಾಗಿದ್ದು, ಪ್ರಸ್ತುತ ಪರಿಸ್ಥಿತಿ ಸುಧಾರಣೆಯಾಗಿದೆ. ಸದ್ಯಕ್ಕೆ ಜಿಲ್ಲೆಗೆ ನಿಯಮಿತವಾಗಿ ರೆಮಿಡಿಸಿವರ್ ಸಾಕಷ್ಟು ಸರಬರಾಜು ಆಗುತ್ತಿದೆ. ಆಕ್ಸಿಜನ್ ನ್ನು ಹೆಚ್ಚು ಕಾಳಜಿಯಿಂದ ಬಳಸಲಾಗುತ್ತಿದ್ದು, ಆಕ್ಸಿಜನ್ ಆಡಿಟ್ ಮತ್ತು ಆಕ್ಸಿಜನ್ ರೌಂಡ್ಸ್ ನಡೆಸಲಾಗುತ್ತಿದ್ದು, ಅನಗತ್ಯ ಪೋಲಾಗದಂತೆ ಎಚ್ಚರ ವಹಿಸಲಾಗಿದೆ. ಉಡುಪಿ ಜಿಲ್ಲೆಗೂ ಇತರ ಜಿಲ್ಲೆಗಳಂತೆ ಆಕ್ಸಿಜನ್ ನಿರಂತರವಾಗಿ ಸರಬರಾಜು ಮಾಡುವಂತೆ ವಿನಂತಿಸಿಕೊಂಡರು.

ಕೋವಿಡ್ ಚಿಕಿತ್ಸೆಗೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಬಗ್ಗೆ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಶಶಿಕಿರಣ್, ಪ್ರಸ್ತುತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಯ ಕೊರತೆ ಇದ್ದು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಉತ್ತಮ ಬೆಳವಣಿಗೆಯಾಗುತ್ತದೆ. ಆದರೆ, ಈ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ, ಅಗತ್ಯ ತರಬೇತಿ ನೀಡುವ ಮೂಲಕ, ಹಿರಿಯ ವೈದ್ಯರ ನಿಗಾವಣೆಯಡಿ ಬಳಸಿಕೊಳ್ಳಬಹುದು ಎಂದರು.ಈ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

 
 
 
 
 
 
 
 
 
 
 

Leave a Reply