ಜಿಲ್ಲೆಯಲ್ಲಿ ಕೋವಿಡ್-19 ಪರಿಷ್ಕೃತ ನಿಯಮಗಳ ಜಾರಿ – ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ:ಕೋವಿಡ್ -19 ಸೋಂಕಿನ ತೀವ್ರತೆಯು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಿಟ್ಟಿನಲ್ಲಿ, ವಿವಿಧ ಸಾಮಾಜಿಕ/ ಧಾರ್ಮಿಕ ಸಮಾರಂಭ ಹಾಗೂ ರಾಜಕೀಯ ಸಭೆ/ ರ‍್ಯಾಲಿಗಳ ಸಂದರ್ಭದಲ್ಲಿ ಸೇರಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಿತಿಗೊಳಿಸಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸಲಾಗಿರುವ ಆಚರಣೆ/ ಸಮಾರಂಭ ಇತ್ಯಾದಿಗಳ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ನಿಯಮಗಳನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ವಿದ್ಯಾಗಮ ಸೇರಿದಂತೆ 1 ರಿಂದ 9 ನೇ ತರಗತಿ ವರೆಗೆಯಾವುದೇತರಗತಿ ನಡೆಸದಂತೆ ಸರ್ಕಾರ ಸೂಚಿಸಿದ್ದು, 10, 11 ಮತ್ತು 12 ನೇ ತರಗತಿಗಳು ಯಥಾಸ್ಥಿತಿಯಲ್ಲಿ ನಡೆಯಲಿದೆ. ಪದವಿ ಕಾಲೇಜುಗಳ ಪರೀಕ್ಷೆಗಳಿಗೆ ಮಾತ್ರ ಅವಕಾಶ ನೀಡಿದ್ದು, ಮೆಡಿಕಲ್ ಹೊರತುಪಡಿಸಿ, ಬೇರೆಯಾವುದೇ ಕಾಲೇಜುಗಳು ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕ ಪ್ರಾರ್ಥನೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಗುಂಪು ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಜಿಮ್, ಈಜುಕೊಳ ಮತ್ತು ಕ್ಲಬ್ ಹೌಸ್‌ಗಳನ್ನು ಮುಚ್ಚುವಂತೆ ಸರ್ಕಾರ ಸೂಚನೆ ನೀಡಿದ್ದು, ಯಾವುದೇ ತರಹದ ಧರಣಿ, ಮುಷ್ಕರ ಹಾಗೂ ರ‍್ಯಾಲಿಗಳನ್ನು ನಡೆಸಲು ಅವಕಾಶವಿಲ್ಲ. ಸಾರ್ವಜನಿಕ ಸಾರಿಗೆಗಳಲ್ಲಿ ನಿಗಧಿತ ಆಸನವಿರುವಷ್ಟು ಮಾತ್ರ ಜನರನ್ನು ಹಾಕುವಂತೆ ನೋಡಿಕೊಳ್ಳಲು ಆರ್.ಟಿ.ಒ ಗಳಿಗೆ ಸೂಚನೆ ನೀಡಲಾಗಿದೆ. 
ಸರ್ಕಾರದ ಆದೇಶದನ್ವಯ ಸಿನಿಮಾ ಮಂದಿರ, ಪಾರ್ಟಿ ಹಾಲ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ.50 ರಷ್ಟು ಮಾತ್ರ ಭರ್ತಿಗೆ ಅವಕಾಶವಿದ್ದು, ಇದರ ಕುರಿತು ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾಸ್ಕ್ಧಾರಣೆ, ಸಾಮಾಜಿಕ ಅಂತರ ಮತ್ತು ಕೈಗಳ ಸ್ವಚ್ಛತೆಗೆ ಸಂಬಂಧಿಸಿದಂತೆ  ನಿಯಮ ಪಾಲಿಸದ ಶಾಪಿಂಗ್ ಮಾಲ್ ಗಳು, ಮುಚ್ಚಿದ ಪ್ರದೇಶದಲ್ಲಿನ ಮಾರ್ಕೆಟ್ ಗಳು, ಡಿಪಾರ್ಟ್ ಮೆಂಟಲ್ ಸ್ಟೋರ್ ಗಳು, ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ಗಳನ್ನು ಕೊರೊನಾ ಮುಕ್ತಾಯದವರೆಗೂ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
ಜಿಲ್ಲೆಯಲ್ಲಿ ಜಾತ್ರೆ ಮತ್ತು ಮೇಳಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಈ ಎಲ್ಲಾ ಆದೇಶಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಈ ನಿಯಮ ಹಾಗೂ ನಿರ್ಬಂದಗಳು ಏಪ್ರಿಲ್ 20 ರವರೆಗೂ ಅನ್ವಯವಾಗಲಿದ್ದು, ಸಾರ್ವಜನಿಕರು ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply