ಶ್ರೀ ಮಹಾವಿಷ್ಣುವಿನ ಅವತಾರ ಎಂದು ಗುರುತಿಸಲ್ಪಟ್ಟು ವೈದ್ಯವಿದ್ಯೆಗೆ ಅಧಿದೇವತೆಯಾದ ಶ್ರೀ ಧನ್ವಂತರಿಯ ಜಯಂತಿಯನ್ನು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ, ಕುತ್ಪಾಡಿ, ಉಡುಪಿಯಲ್ಲಿ ವಿಶಿಷ್ಟವಾಗಿ ಡಿಸೆಂಬರ್ ೧೨, ಕಾರ್ತಿಕ ಕೃಷ್ಣಪಕ್ಷದ ತ್ರಯೋದಶಿಯಂದು ಪ್ರಾಂಶುಪಾಲ ಪ್ರೊ. ಜಿ. ಶ್ರೀನಿವಾಸ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ವಿದ್ವಾನ್ ಪುರೋಹಿತ ಬಾಲಕೃಷ್ಣ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರ ಕುಮಾರ ಕೆ. ಹಾಗೂ ಅವರ ಧರ್ಮಪತ್ನಿ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಉಷಾ ಪಾರ್ವತಿ ಅವರು ಪೂಜಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.
ಸಂಹಿತಾ ಸಿದ್ಧಾಂತ ವಿಭಾಗದ ಸಹಪ್ರಾಧ್ಯಾಪಕ ಸುಬ್ರಹ್ಮಣ್ಯ ಭಟ್ ಪಿ ಹಾಗೂ ಮಾನಸರೋಗ ವಿಭಾಗದ ಸಹಪ್ರಾಧ್ಯಾಪಕ ಡಾ. ವಿಜಯೇಂದ್ರ ಭಟ್ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಂಕೀರ್ತನೆ ನೆರೆವೇರಿಸಿದರು . ವಿವಿಧ ಭಜನಾ ಅಭಂಗಗಳಿಂದ ದೇವರನ್ನು ಪ್ರಾರ್ಥಿಸಿದರು.
ಬಳಿಕ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಸ್ನಾತಕೋತ್ತರ ದ್ಯಾರ್ಥಿಗಳ ಡೀನ್ ಆದಂತಹ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ನಿರಂಜನ್ರಾವ್, ಸಹಾಯಕ ಡೀನ್ ಹಾಗೂ ರೋಗ ನಿಧಾನ ವಿಭಾಗದ ಪ್ರಾಧ್ಯಾಪಕ ಡಾ. ನಾಗರಾಜ್ ಎಸ್., ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಮತಾ ಕೆ.ವಿ., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಇವರುಗಳು ಪಾರಿತೋಷಕವನ್ನು ವಿತರಿಸಿದರು.
ವಿವಿಧ ಕ್ರೀಡೆ, ಸಾಂಸ್ಕೃತಿಕ ಹಾಗೂ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಸಾಧನೆಯನ್ನು ಮಾಡಿರುವಂತಹ ವಿದ್ಯಾರ್ಥಿಗಳಿಗೆ ನೈಪುಣ್ಯತೆಯ ಪಾರಿತೋಷಕಗಳನ್ನು ಪ್ರದಾನ ಮಾಡಲಾಯಿತು. ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನುದ್ದೇಶಿಸಿ ಎರಡು ಹಿತನುಡಿಗಳನ್ನಾಡಿದರು. ಡಾ. ರವಿ ಕೆ.ವಿ. ವಂದನಾರ್ಪಣೆಯನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಗಿಸಲಾಯಿತು.