ಹಿಜಾಬ್ ವಿವಾದದ ಮೂಲಕ ತಾಳ್ಮೆ ಪರೀಕ್ಷೆಯ ಯತ್ನ ಬೇಡ : ಯಶ್ ಪಾಲ್ ಸುವರ್ಣ

ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ  ಬೆರಳೆಣಿಕೆಯ ವಿದ್ಯಾರ್ಥಿನಿಯರು ಮತೀಯವಾದಿ ಸಂಘಟನೆಗಳ ಕುಮ್ಮಕ್ಕಿನಿಂದ ತರಗತಿಯಲ್ಲಿ ಹಿಜಾಬ್ ಧರಿಸಿ ವಿವಾದ ಸೃಷ್ಟಿಸಿ ಕಾಲೇಜಿನ ಶೈಕ್ಷಣಿಕ ವಾತಾವರಣ ಹದಗೆಡಿಸಲು ಯತ್ನಿಸುತ್ತಾ ನಮ್ಮ ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದು ಮುಂದಿನ ದಿನದಲ್ಲಿ ಈ ಬಗ್ಗೆ ದಿಟ್ಟ ಉತ್ತರ ನೀಡಲು ಬದ್ಧ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
 ಕಾಲೇಜಿನ ಅಭಿವೃದ್ಧಿ ಸಮಿತಿ ಕಾಲೇಜಿನ ಹಿತದೃಷ್ಟಿಯಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ  ಸಂಯಮದಿಂದ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದು, ಇದನ್ನೇ ನಮ್ಮ ದೌರ್ಬಲ್ಯ ವೆಂದು   ಭಾವಿಸಿರುವ ಮತೀಯವಾದಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಘಟನೆಯನ್ನು ವೈಭವೀಕರಿಸಿ ಕಾಲೇಜಿನ ಘನತೆಗೆ ಧಕ್ಕೆ ಪಡಿಸಲು ಯತ್ನಿಸುತ್ತಿದ್ದಾರೆ.
 ಈಗಾಗಲೇ ಶಿಕ್ಷಣ ಇಲಾಖೆ ಕಾಲೇಜಿನ ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿಯನ್ನು  ಮುಂದುವರೆಸುವಂತೆ ಆದೇಶ ನೀಡಿದರೂ ವಿದ್ಯಾರ್ಥಿಗಳು ಹಿಜಾಬ್ ಬಗ್ಗೆ ಗೊಂದಲ ಸೃಷಿಸಲು ಯತ್ನಿಸುತ್ತಿರುವುದು ದುರದೃಷ್ಟಕರ. 
ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ರಘುಪತಿ ಭಟ್ ರವರು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಆನ್ ಲೈನ್ ಮೂಲಕ ತರಗತಿಯಲ್ಲಿ ಭಾಗವಹಿಸಲು ಅವಕಾಶ ನೀಡಿದರೂ ಈ ವಿದ್ಯಾರ್ಥಿನಿಯರು ತಮ್ಮ ಪಟ್ಟು ಬಿಡದೇ ಉದ್ಧಟತನ ಮೆರೆದಿದ್ದಾರೆ.
 ಡಿಸೆಂಬರ್ 30ರಂದು ಕಾಪು ಪುರಸಭಾ ಚುನಾವಣೆಯಲ್ಲಿ ಎಸ್ ಡಿ ಪಿ ಐ ಪಕ್ಷ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಮರುದಿನದಿಂದಲೇ ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭಗೊಂಡಿದ್ದು, ತಮ್ಮ ರಾಷ್ಟ್ರವಿರೋಧಿ ಚಟುವಟಿಕೆಯನ್ನು ಈ ವಿವಾದದ ಮೂಲಕ ಕಾರ್ಯಗತಗೊಳಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಪಂಚ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಈ ಘಟನೆಯನ್ನು  ವ್ಯವಸ್ಥಿತವಾಗಿ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರಗೊಳಿಸಿ ರಾಜಕೀಯ ಲಾಭ ಪಡೆಯಲು ಈ ಸಂಘಟನೆಗಳು ಯತ್ನಿಸುತ್ತಿದ್ದಾರೆ.
ಕಾಲೇಜಿನ ಉಪನ್ಯಾಸಕರಿಗೆ ಅಗೌರವ ತೋರುತ್ತಾ, ಅಶಿಸ್ತಿನಿಂದ ವರ್ತಿಸುತ್ತಿರುವ ಈ ವಿದ್ಯಾರ್ಥಿನಿಯರಿಂದಾಗಿ ಕಾಲೇಜಿನ ಸಾವಿರಾರು  ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಮಸ್ಯೆ ಉಂಟಾಗಿದೆ.
ಕಾಲೇಜಿನಲ್ಲಿ ಪುರುಷ ಶಿಕ್ಷಕರು ಪಾಠ ಮಾಡುವುದರಿಂದ ತಮಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿರುವ ವಿದ್ಯಾರ್ಥಿನಿಯರ ಮನಸ್ಥಿತಿಯೇ ಸಮಾಜಕ್ಕೆ ಆತಂಕಕಾರಿ ಯಾಗಿದ್ದು, ವಿದ್ಯೆ ಕಲಿಸುವ ಗುರುಗಳ ಬಗ್ಗೆ ಅಗೌರವ ತೋರುವವರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುವುದು ಅಸಾಧ್ಯ.
ಹಿಜಾಬ್ ವಿಚಾರದಲ್ಲಿ ಸರಕಾರಿ ಕಾಲೇಜಿನ ಈ ಘಟನೆ ಮುಂದಿನ ದಿನಗಳಲ್ಲಿ ಇತರ ಕಾಲೇಜಿ ನಲ್ಲೂ ಸಮಸ್ಯೆ ಸೃಷ್ಟಿಸಲಿದ್ದು, ಈ ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಮತೀಯ ವಾದಿಗಳಿಗೆ  ಕಾಲೇಜಿನ ಶಿಕ್ಷಣದ ವಿಚಾರದಲ್ಲಿ ಗೊಂದಲ ಸೃಷ್ಟಿಸಲು ಅವಕಾಶ ನೀಡುವುದಿಲ್ಲ ಹಾಗೂ ಕಾಲೇಜಿನ ಶಿಸ್ತು ಕಾಪಾಡುವ ವಿಚಾರದಲ್ಲಿ ರಾಜೀ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply