ಜನವರಿ 01 ರಂದು 6 ರಿಂದ 9 ನೇ ತರಗತಿಯ ವಿಧ್ಯಾರ್ಥಿಗಳಿಗೆ ವಿದ್ಯಾಗಮ ಪುನರಾರಂಭ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುವ ಕುರಿತು ಉಡುಪಿ ವಲಯ ಪ್ರಾಥಮಿಕ ಹಾಗು ಪ್ರೌಢಶಾಲಾ ಮುಖ್ಯ ಶಿಕ್ಷಕರ ಪೂರ್ವಭಾವಿ ಸಭೆಯು ಉಡುಪಿ ಬಾಲಕಿಯರ ಪ ಪೂ ಕಾಲೇಜಿನಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಸಾ.ಶಿ ಇಲಾಖೆಯ ಉಪನಿರ್ದೇಶಕ ಎನ್ ಎಚ್ ನಾಗೂರು ಮಾತನಾಡಿ ‘ಮಕ್ಕಳ ವಿದ್ಯಾಭ್ಯಾಸ ನಿಂತ ನೀರಾಗಬಾರದು. ಕೊವಿಡ್ ವೈರಸ್ ಹರಡುವಿಕೆಯ ಈ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯಾ ದೇಗುಲವು ರೋಗ ಹರಡುವ ಕೇಂದ್ರ ಆಗಬಾರದು. ಶಿಕ್ಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು’ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಬಿ ಇ ಒ ಮಂಜುಳಾ ಕೆ ಮಾತನಾಡಿ ‘ಶಿಕ್ಷಕರು ತಮ್ಮ ಆರೋಗ್ಯದೊಂದಿಗೆ ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಗಮನಹರಿಸಬೇಕು. ಈ ಮೂಲಕ ಪೋಷಕರಿಗೆ ಹಾಗೂ ಸಮಾಜಕ್ಕೆ ಅತ್ಮಸ್ಥೈರ್ಯ ತುಂಬುವ ಕಾರ್ಯ ಶಿಕ್ಷಕರಿಂದ ಆಗಬೇಕಾಗಿದೆ’ ಎಂದರು.
ಸಭೆಯಲ್ಲಿ ಶಾಲಾ ಪ್ರಾರಂಭೋತ್ಸವ ಅಚರಿಸುವುದಕ್ಕಿಂತ ಮೊದಲು ಹಾಗೂ ಶಾಲಾ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ವೇದಿಕೆಯಲ್ಲಿ ಒಳಕಾಡು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿದರು, ಸಹ ಶಿಕ್ಷಕಿ ನಾಗರತ್ನ ಭಾಗವತ್ ವಂದಿಸಿದರು.