ವಿಶ್ವದ ಎಲ್ಲಾ ಭಾಷೆಗಳ ತಾಯಿ ಸ್ಥಾನದಲ್ಲಿದೆ ಸಂಸ್ಕೃತ ಭಾಷೆ – ಪಿ. ಶ್ರೀಧರ ಆಚಾರ್

ಕಾರ್ಕಳ : ‘ಅತ್ಯಪರೂಪದ ಭಾಷಾಸಂಪತ್ತು, ಶುದ್ಧ ವ್ಯಾಕರಣ, ಸಾಹಿತ್ಯ, ಪುರಾಣ, ನೀತಿಸೂಕ್ತ, ಸುಭಾಷಿತ, ವಿಜ್ಞಾನ, ರಾಜನೀತಿಗಳನ್ನೊಳಗೊಂಡ ಸಂಸ್ಕೃತ ಭಾಷೆಯು ಜಗತ್ತಿನ ಉಳಿದೆಲ್ಲಾ ಭಾಷೆಗಳಿಗೆ ತಾಯಿಯ ಸ್ಥಾನದಲ್ಲಿದ್ದು ಪ್ರತಿಯೊಬ್ಬ ಭಾರತೀಯನೂ ಸಂಸ್ಕೃತ ಕಲಿಕೆಗೆ ಮುಂದಾಗಬೇಕು. ಅಪೂರ್ವ ಜ್ಞಾನನಿಧಿ ದೇವವಾಣಿಯ ಅಧ್ಯಯನದಿಂದ ಭಾರತವು ತನ್ನ ಸಾಂಸ್ಕೃತಿಕ ಉತ್ಕೃಷ್ಟ ದಿನಗಳತ್ತ ಹೊರಳಲಿದೆ’ ಎಂದು ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷ ಪಿ. ಶ್ರೀಧರ ಆಚಾರ್ ಹೇಳಿದ್ದಾರೆ. 

ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಸಂಸ್ಕೃತ ಭಾರತಿಯ ಕಾರ್ಕಳ ಘಟಕದ ಉದ್ಘಾಟನೆ ಹಾಗೂ ಸಂಸ್ಕೃತೋತ್ಸವ ಸಮಾರಂಭದಲ್ಲಿ ಶಿಖರೋಪನ್ಯಾಸಗೈದು, ‘ಭಾಷಾಸಾಮರಸ್ಯತೆ ಹಾಗೂ ರಾಷ್ಟ್ರೀಯ ಏಕತೆಯ ಸಾಧನೆಗೆ ಸಂಸ್ಕೃತವೊಂದೇ ಪರಿಹಾರ’ ಎಂದು ಕರೆಯಿತ್ತರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕ ಉದಯಕುಮಾರ ಶೆಣೈ, ‘ವಿದೇಶದ ಅನೇಕೆಡೆಯ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತದ ಮೂಲಕ ಜೀವನಶಿಕ್ಷಣ ಕಲಿಸಲು ಹಾತೊರೆಯುತ್ತಿದ್ದರೆ ನಾವು ಭಾಷೆಯ ಸೊಗಡನ್ನರಿಯದೆ ಕಲಿಕೆಯಿಂದ ಹಿಂದುಳಿಯುವುದು ಸರಿಯಲ್ಲ. ಪ್ರತಿ ವಿದ್ಯಾಸಂಸ್ಥೆಯಲ್ಲೂ ಸಂಸ್ಕೃತದ ಕಲಿಕೆಗೆ ಅವಕಾಶ ಲಭ್ಯವಾಗಬೇಕು’ ಎಂದರು. 

ನಿಟ್ಟೆ ಗಾಜ್ರಿಯಾ ವೈದ್ಯಕೀಯ ಸಂಸ್ಥೆಯ ಡಾ. ಕಾರ್ತಿಕ್ ರಾವ್ ಮಾತನಾಡಿ, ‘ಆಧುನಿಕ ಕಾಲಘಟ್ಟದ ಅನೇಕ ಕ್ಲಿಷ್ಟಕರ ಪ್ರಶ್ನೆಗಳಿಗೆ ಹಾಗೂ ಒತ್ತಡಮಯ ಬದುಕಿನ ನಿವಾರಣೆಗೆ ವೇದೋಪನಿಷತ್ತುಗಳಲ್ಲಿ ಇದಮಿತ್ಥಂ ಉತ್ತರ ಲಭ್ಯವಿದೆ’ ಎಂದರು. 

ನೂತನ ಸಮಿತಿಯ ಅಧ್ಯಕ್ಷರಾಗಿ ಕೆ. ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷರಾಗಿ ಡಾ. ಕಾರ್ತಿಕ್ ರಾವ್, ಸಂಯೋಜಕರಾಗಿ ಡಾ. ಸುಮಂತ್ ಜೋಶಿ,ಸಹ ಸಂಯೋಜಕರಾಗಿ ಪೂರ್ಣಿಮಾ ಶೆಣೈ, ಕೋಶ ಪ್ರಮುಖರಾಗಿ ಗಜಾನನ ಮರಾಠೆ, ಶಿಕ್ಷಣ ಪ್ರಮುಖರಾಗಿ ಡಾ. ಪದ್ಮನಾಭ ಮರಾಠೆ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಆರ್. ಸುರೇಂದ್ರ ಶೆಣೈ ಹಾಗೂ ನಿವೃತ್ತ ಎವಿಎಂ ರಮೇಶ ಕಾರ್ಣಿಕ್ ನಿಯೋಜಿತರಾದರು. ಸಾಮಾಜಿಕ ಕಾರ್ಯಕರ್ತೆ ಶೈಲಜಾ ಸ್ವಾಗತಿಸಿ ನಿರೂಪಿಸಿದರು. ಪೂರ್ಣಿಮಾ ಶೆಣೈ ವಂದಿಸಿದರು.

 
 
 
 
 
 
 
 
 

Leave a Reply