ಜ್ಞಾನದೀವಿಗೆ ಯೋಜನೆಯಡಿ ಉಡುಪಿಯಲ್ಲಿ ಮಲಬಾರ್ ಗೋಲ್ಡ್ ನಿಂದ 100 ಟ್ಯಾಬ್ ವಿತರಣೆ

ಪಬ್ಲಿಕ್ ಟಿವಿ ಸುದ್ದಿವಾಹಿನಿ ಮತ್ತು ರೋಟರಿ ಇಂಟರ್ನ್ಯಾಷನಲ್ ಸಹಯೋಗದ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣಾ ಅಭಿಯಾನಕ್ಕೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆ ಕೈಜೋಡಿಸಿದೆ. ಉಡುಪಿ ಜಿಲ್ಲೆಯ ಎರಡು ಸರಕಾರಿ ಶಾಲೆಗಳಿಗೆ 100 ಟ್ಯಾಬ್ ಗಳನ್ನು ವಿತರಣೆ ಮಾಡಿದೆ.

ಸರಕಾರಿ ಪ್ರೌಢಶಾಲೆ ಸಿದ್ದಾಪುರದ 100 ಮಕ್ಕಳಿಗೆ, ಸರಕಾರಿ ಪ್ರೌಢಶಾಲೆ ಹೆಬ್ರಿಯ 100 ಮಕ್ಕಳಿಗೆ ಉಪಯೋಗವಾಗುವ ಟ್ಯೂಬ್ ಗಳನ್ನು ಮಲಬಾರ್ ಗೋಲ್ಡ್ ಸಂಸ್ಥೆ ನೀಡಿದೆ.

3,45,000 ರೂಪಾಯಿ ಮೊತ್ತದ ಟ್ಯೂಬ್ ಗಳನ್ನು ಸರಕಾರಿ ಶಾಲೆಯ ಮಕ್ಕಳಿಗೆ ವಿತರಣೆ ಮಾಡಲಾಯಿತು. ಮಲಬಾರ್ ಗೋಲ್ಡ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಭಾಗವಹಿಸಿದರು.

ಮಲಬಾರ್ ಗೋಲ್ಡ್ ಮತ್ತುವಡೈಮಂಡ್ಸ್ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ. ಮಕ್ಕಳ ಶಿಕ್ಷಣಕ್ಕೆ ದೇಣಿಗೆ ದೊಡ್ಡ ಮಟ್ಟದ ನೀಡಿದ್ದು, ತಂತ್ರಜ್ಞಾನ ಕೈಗೆಟುಕದ ಮಕ್ಕಳಿಗೆ ಬಹಳ ಉಪಯೋಗ ಆಗಲಿದೆ. ಹಳ್ಳಿಯ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ, ಮಕ್ಕಳ ಏಳಿಗೆಗಾಗಿ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಟ್ಯಾಬ್ ಗಳು ಪೂರಕವಾಗಲಿ. ಸಮಾಜದಲ್ಲಿ ಯಾರಿಗೆಲ್ಲಾ ಕೊಡುಗೆ ನೀಡಲು ಸಾಧ್ಯವೋ ಅವರು ಈ ಅಭಿಯಾನಕ್ಕೆ ಕೈಜೋಡಿಸಬೇಕು. ವಿದ್ಯಾದಾನ ಕೆಲಸ ಬಹಳ ಪುಣ್ಯದ ಕಾರ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕೊರೋನಾ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹಳ್ಳಿಯ ಸರಕಾರಿ ಬಡಮಕ್ಕಳಿಗೆ ಆನ್ ಲೈನ್ ತರಗತಿಗಳು ಕೈಗೆಟುಕಲಿಲ್ಲ. ಮೊಬೈಲ್, ಟಿವಿ ಇಲ್ಲದ ಸಾಕಷ್ಟು ಕುಟುಂಬಗಳು ನಮ್ಮ ಜಿಲ್ಲೆಯಲ್ಲಿವೆ.

ಸಂಕಷ್ಟದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆ ಸಹಯೋಗದ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಮಲಬಾರ್ ಗೋಲ್ಡ್ ಸಂಸ್ಥೆ ಕೈಜೋಡಿಸಿರುವುದು ನಮಗೆ ಸಂತಸ ಮತ್ತು ಹೆಮ್ಮೆಯ ವಿಷಯ. ನಮ್ಮ ಲಾಭಾಂಶದ ಐದು ಶೇಕಡಾವನ್ನು ಸಾಮಾಜಿಕ ಚಟುವಟಿಕೆಗಳಿಗೆ ನಾವು ಆರಂಭದಿಂದಲೂ ನೀಡುತ್ತಾ ಬಂದಿದ್ದೇವೆ.

ಶೈಕ್ಷಣಿಕ , ವೈದ್ಯಕೀಯ, ಪರಿಸರ, ಹೆಣ್ಣುಮಕ್ಕಳಿಗೆ ಚಿನ್ನ ಕೊಟ್ಟು ಮದುವೆ ಮಾಡಿಸುವ ಕೆಲಸದಲ್ಲಿ ಮಲಬಾರ್ ಗೋಲ್ಡ್ ತೊಡಗಿಸಿಕೊಂಡಿದೆ. ಈವರೆಗೆ ಮಲಬಾರ್ ಗೋಲ್ಡ್ ಸಂಸ್ಥೆ ಭಾರತದಲ್ಲಿ130 ಕೋಟಿರುಪಾಯಿಯಷ್ಟು ಸಹಾಯ ಮಾಡಿದ್ದೇವೆ. ಮುಂದೆಯೂ ಸಮಾಜಮುಖಿ ಕಾರ್ಯ ವಿಸ್ತರಿಸುತ್ತೇವೆ ಎಂದು ಸಂಸ್ಥೆಯ ಉಡುಪಿ ಹೆಡ್ ಹಫೀಜ್ ರೆಹಮಾನ್ ಹೇಳಿದರು.

ಡಿಡಿಪಿಐ ಹೆಚ್ಎನ್ ನಾಗೂರ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಉಡುಪಿಯ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಈ ಸಂದರ್ಭದಲ್ಲಿ ಮಾತನಾಡಿದರು. ಪಬ್ಲಿಕ್‌ ಟಿವಿ ಜಿಲ್ಲಾ ವರದಿಗಾರ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply