ಉಡುಪಿ: ಭಾರತದಲ್ಲಿ ಐತಿಹಾಸಿಕವಾಗಿ ನೋಡುವುದಾದರೆ ವಿದ್ಯಾರ್ಥಿಗಳು ಸೂಕ್ತ ಗುರುಗಳನ್ನು ಹುಡುಕಿಕೊಂಡು ಹೋಗಿ ಅವರ ಬಳಿ ಶಿಕ್ಷಣ ಪಡೆಯುವ ಪರಂಪರೆ ಇತ್ತು. ಏಕಲವ್ಯನಿಗೆ ಗುರು ದ್ರೋಣಾಚಾರ್ಯರು ಶಿಕ್ಷಣ ನೀಡಲು ನಿರಾಕರಿಸಿದರೂ ಸಹ ಅವನ ಏಕಾಗ್ರತೆ, ಛಲ, ದೃಢತೆ ಹಾಗೂ ವಿಶ್ವಾಸದಿಂದ ಅವನೊಬ್ಬ ಮಾದರಿ ವಿದ್ಯಾರ್ಥಿಯಾಗಿ ನಿಲ್ಲುತ್ತಾನೆ, ಮಹಾಭಾರತದ ಈ ಪ್ರಸಂಗವು ಇಂದಿನ ಆನ್ ಲೈನ್ ಶಿಕ್ಷಣ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.(ಡಾ) ಪ್ರಕಾಶ್ ಕಣಿವೆಯವರು ಉಡುಪಿಯ ಕಾನೂನು ಕಾಲೇಜಿನಲ್ಲಿ ನಡೆದ ಶಿಕ್ಷಕ ದಿನಾಚರಣೆ ಸಂದಭ೯ದಲ್ಲಿ ಹೇಳಿದರು.
ವಿದ್ಯಾರ್ಥಿಯಾಗಿ ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿ ಅದನ್ನು ತಲುಪುವ ಬಗ್ಗೆ ಸರಿಯಾದ ಮಾರ್ಗದಲ್ಲಿ ನಡೆದರೆ ತಮ್ಮ ಗುರಿ ಸಾಧಿಸು ವಲ್ಲಿ ಯಾವುದೇ ಅನುಮಾನವಿಲ್ಲವೆಂದ ಕಣಿವೆಯವರು ಮಕ್ಕಳಿಗೆ ಮನೆಯಲ್ಲಿ ಪೋಷಕರು ಸಂಸ್ಕಾರ ಮತ್ತು ಶಾಲೆಯಲ್ಲಿ ಶಿಕ್ಷಕರು ನೀಡು ವಂತಹ ಮೌಲ್ಯಯುತ ಶಿಕ್ಷಣ ಸಮಾಜದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಾಗೂ ಮಕ್ಕಳು ಸಮಾಜದಲ್ಲಿ ಸುಶಿಕ್ಷಿತ ನಾಗರೀಕ ರಾಗಲು ಸಹಾಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾದ್ಯಾಪಕರಾದ ರೋಹಿತ್ ಎಸ್.ಅಮೀನ್ ಹಾಗೂ ಶಂಕರಮೂರ್ತಿ ಬಿ.ಜಿ.ಯವರು ಬದಲಾದ ಸಮಾಜದಲ್ಲಿ ಶಿಕ್ಷಣದ ಮಹತ್ವ ಹಾಗೂ ಕಲಿಕೆಯ ವಿಧಾನಗಳ ಬಗ್ಗೆ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ) ನಿರ್ಮಲಾ ಹರಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಮೊಂತೇರೊ ನಿರೂಪಿಸಿದರು, ಜಿತೇಂದ್ರ ವಂದಿಸಿದರು, ಕೀರ್ತನಾ ಸ್ವಾಗತಿಸಿದರು.