ಶಿಕ್ಷಣ ಇಲಾಖೆಯ ಐದು ವಲಯಗಳ ಅಕ್ಷರ ದಾಸೋಹ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ವಿಷಯ ಪರಿವೀಕ್ಷಣಾಧಿಕಾರಿಗಳು ಹಾಗೂ ಸಿ ಅರ್ ಪಿ ಗಳ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರವು ಉಡುಪಿ ಸರಕಾರಿ ಪ ಪೂ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಾ ಶಿ ಇಲಾಖಾ ಉಪನಿರ್ದೇಶಕ ಎನ್ ಎಚ್ ನಾಗೂರು ಮಾತನಾಡಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಗೌರವಿಸಬೇಕು. ಕೆಲಸ ಕಾರ್ಯದಲ್ಲಿ ಸ್ಪಷ್ಟತೆ ಮತ್ತು ನಿಖರತೆ ಹೊಂದಿರಬೇಕು.
ಶಿಕ್ಷಕರು- ವಿದ್ಯಾಸಂಸ್ಥೆ-ಇಲಾಖೆಯೊಂದಿಗೆ ಕೊಂಡಿಯಂತೆ ಕಾರ್ಯನಿರ್ವಹಿಸಿದರೆ ಶಿಕ್ಷಣ ಕ್ಷೇತ್ರ ಸದೃಢವಾಗಲಿದೆ ಎಂದರು.ಕಾರ್ಯಗಾರದಲ್ಲಿ ಕಾರ್ಕಳ ಬಿ ಇ ಒ ಜಿ ಎಸ್ ಶಶಿಧರ್ ಮಾತನಾಡಿ ಎಲ್ಲಾ ಹಂತದ ಅಧಿಕಾರಿಗಳು ಸಂಘಟಿತ ಪ್ರಯತ್ನದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದೆಂದರು.
ಉಡುಪಿ ವಲಯ ಬಿ ಇ ಒ ಮಂಜುಳ ಕೆ,ಡಯಟ್ ನ ಹಿರಿಯ ಉಪನ್ಯಾಸಕ ಅಶೋಕ್ ಕಾಮತ್,ಡಿವೈಪಿಸಿ ಪ್ರಭಾಕರ ಮಿತ್ತಂತಾಯ, ಅಕ್ಷರ ದಾಸೋಹ ಅಧಿಕಾರಿ ನಾಗೇಂದ್ರಪ್ಪ, ಜಿಲ್ಲಾ ದೈ ಶಿ ಅಧಿಕಾರಿ ರವಿ ಕೆ, ವಿಷಯ ಪರಿವೀಕ್ಷಕ ನಾಗರಾಜ್ ಮೈರುಕೋಮೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉಡುಪಿ ಬಿ ಅರ್ ಸಿ ಕೋರ್ಡಿನೇಟರ್ ಉಮಾ ಪಿ ಸ್ವಾಗತಿಸಿದರು. ತಾಲೂಕು ದೈ.ಶಿ ಅಧಿಕಾರಿ ವಿಶ್ವನಾಥ ಬಾಯರಿ ವಂದಿಸಿದರು.