ಮುಖ್ಯ ಅತಿಥಿಗಳಾಗಿದ್ದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್ನ ಮುಖ್ಯಸ್ಥರಾದ ಪ್ರೊ. ವರದೇಶ್ ಹಿರೇಗಂಗೆಯವರು ಹಾವಂಜೆಯ೦ತಹ ಗ್ರಾಮೀಣ ಭಾಗದಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಬೆಳೆಸುತ್ತಿರುವ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರಗಳಲ್ಲಿ ಭಾರತದ ತುಂಬೆಲ್ಲ ಹರಡಿಕೊಂಡಿರುವ ನಾನಾ ವಿಧದ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವುದರ ಮೂಲಕ ಕಲಾಸಕ್ತರು ಅದನ್ನು ರಚಿಸುವಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕಲಾಪ್ರದರ್ಶನ ಮತ್ತು ಮಾರಾಟಗಳಿಂದ ಅಳಿವಿನಂಚಿನಲ್ಲಿರುವ ದೇಶೀಯ ಕಲೆಗಳ ಪ್ರಚಾರ ಮತ್ತು ಪ್ರೋತ್ಸಾಹದ ಉದ್ದೇಶವಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಅಭಿಪ್ರಾಯವಿತ್ತರು.
ಒರಿಸ್ಸಾದ ಪಟಚಿತ್ರ ಕಲಾವಿದೆ ಗೀತಾಂಜಲಿ ದಾಸ್, ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ ರಾದ ಆರ್ಕಿಟೆಕ್ಟ್ ಸುಭಾಶ್ಚಂದ್ರ ಬಸು ಹಾಗೂ ಭಾವನಾ ಪೌಂಡೇಶನ್ನ ನಿರ್ದೇಶಕರಾದ ಯಕ್ಷಗುರು ಹಾವಂಜೆ ಮಂಜುನಾಥಯ್ಯನವರು ಉಪಸ್ಥಿತರಿದ್ದರು. ಪಟಚಿತ್ರಗಳ ಪಾರಂಪರಿಕ ರಚನಾಕ್ರಮ, ತಾಂತ್ರಿಕತೆಗಳನ್ನೆಲ್ಲ ಕಾರ್ಯಾಗಾರದಲ್ಲಿ ತಿಳಿಸಿ ಕೊಡುತ್ತ, ಪಟಚಿತ್ರ ಮತ್ತು ತಾಳೆಯೋಲೆಗಳ ಮೇಲೆ ಗೀರಿ ರಚಿಸಲ್ಪಡುವ ಚಿತ್ರಗಳನ್ನು ಇಲ್ಲಿ ಕಲಿಸಿ ಕೊಡಲಾಗುತ್ತಿದೆ ಎಂಬುದಾಗಿ ಕಾರ್ಯಕ್ರಮದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ವಿವರಿಸುತ್ತ ಪ್ರಾಸ್ತಾವಿಕ ಮಾತನ್ನಾಡಿ ನಿರೂಪಿಸಿದರು.