ಉಡುಪಿ: ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸ್ಪಂದನ ವಸತಿ ಗೃಹದ ಸಭಾಂಗಣದಲ್ಲಿ ಜಿಲ್ಲಾ ಮೋದಿ ಬ್ರಿಗೇಡ್ ಮಹಿಳಾ ಘಟಕದ ವತಿಯಿಂದ ಸ್ವ-ಉದ್ಯೋಗ ಮಾಹಿತಿ ಶಿಬಿರ ಏರ್ಪಡಿಸಲಾಗಿತ್ತು.ಶೈನಿ ಸಾಬೂನು ಬಿಡುಗಡೆ ಹಾಗೂ ಪ್ರಧಾನ ಮಂತ್ರಿ ಭಾರತೀಯ ಜನೌಷಧಿಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಜರುಗಿತು.
ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ಹಲವು ಉತ್ಪನ್ನಗಳ ಬಗ್ಗೆ ಪ್ರಭಾಕರ್ ಮತ್ತು ವೆಂಕಟೇಶ್ ಪ್ರಭು ವಿವರಿಸಿದರು. ಶೈನಿ ಸಾಬೂನಿನ ಉಪಯೋಗದ ಕುರಿತಾಗಿ ಸಂಪೂರ್ಣ ಮಾಹಿತಿ ಮತ್ತು ಅದರ ಗುಣಮಟ್ಟದ ಬಗ್ಗೆ ಈ ಜನರಿಗೆ ಗಣೇಶ್ ಶೆಟ್ಟಿಯವರು ವಿವರಿಸಿದರು. ಜನೌಷಧಿಯ ಬಗ್ಗೆ ಜನರಿಗಾಗುವ ಲಾಭ ಹಾಗೂ ಕಡಿಮೆ ಖರ್ಚಿನಲ್ಲಿ ದೊರಕುವ ಔಷಧಿಯ ಕುರಿತಾಗಿ ಮಧುಸೂದನ್ ಸುವರ್ಣ ತಿಳಿಸಿದರು. ಕಾನೂನು ಸಲಹೆಗಾರರಾಗಿ ಉಡುಪಿ ಜಿಲ್ಲಾ ಮಹಿಳಾ ಸಬ್ ಇನ್ಸ್ಪೆಕ್ಟರ್ ವಯಲೆಟ್ ಫೆಮಿನಾ ನೆರೆದ ಮಹಿಳೆಯರಿಗೆ ರಕ್ಷಣೆ ಹಾಗೂ ಜಾಗೃತಿ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ರಾಜ್ಯ ಮೋದಿ ಬ್ರಿಗೇಡ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ನೀತಾ ಪ್ರಭು, ರಾಜ್ಯ ಕಾರ್ಯದರ್ಶಿ ವೆಂಕಟೇಶ್ ಪ್ರಭು, ಜಿಲ್ಲಾಧ್ಯಕ್ಷ ಸುಭಾಷಿತ್ ಕುಮಾರ್, ಕಾರ್ಯದರ್ಶಿ ಗಣೇಶ್ ಪಾಟೀಲ್, ಜೊತೆ ಕಾರ್ಯದರ್ಶಿ ಮಾಬೆನ್ ಸುಂದರೇಶ್, ಮಹಿಳಾಧ್ಯಕ್ಷೆ ವೇದಾವತಿ ಹೆಗ್ಡೆ, ಕಾರ್ಯದರ್ಶಿ ಸುಮನಾ ಶೆಟ್ಟಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು,ಕಾರ್ಯದರ್ಶಿ ಗಣೇಶ್ ಪಾಟೀಲ್ ವಂದಿಸಿದರು.