ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಜಿಲ್ಲಾ ಕಚೇರಿ ಉದ್ಘಾಟನೆ
ಉಪಕಾರ ಮಾಡಿದರಿಗೆ ಪ್ರತ್ಯುಪಕಾರ ಮಾಡದಿದ್ದರೆ ನಾವು ಅಪರಾಧಿಗಳಾಗುತ್ತೇವೆ. ಇದು ಜನ್ಮಾಂತರದಲ್ಲೂ ಕಷ್ಟಕ್ಕೆ ನಾಂದಿಯಾಗುತ್ತದೆ. ಸಂಗೊಳ್ಳಿ ರಾಯಣ್ಣನಂತಹ ತ್ಯಾಗಜೀವಿಗಳ ಸ್ಮರಣೆಯಿಂದ ಯುವಜನರಲ್ಲಿ ದೇಶಪ್ರೇಮ ಜಾಗೃತವಾಗಲು ಸಾಧ್ಯ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಆದಿಉಡುಪಿ ರೀಗಲ್ ನೆಕ್ಸ್ಟ್ ಕಟ್ಟಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಜಿಲ್ಲಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ(ರಿ) ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಅಧ್ಯಕ್ಷತೆ ವಹಿಸಿದ್ದರು.
ನಗರಸಭಾ ಅಧ್ಯಕ್ಷೆ ಸುಮಿತ್ರ ನಾಯಕ್ ಮಾತಾಡಿ ರಾಯಣ್ಣ ಅಭಿಮಾನಿ ಬಳಗ ನೀಡಿದ ಮನವಿಯನ್ನು ಅನುಮೋದನೆಗಾಗಿ ಮುಂದಿನ ಸಭೆಯಲ್ಲಿಟ್ಟು ಯಾವುದಾದರು ರಸ್ತೆಗೆ ಅಥವಾ ಸರ್ಕಲ್ ಗೆ ಸಂಗೊಳ್ಳಿ ರಾಯಣ್ಣ ಹೆಸರನ್ನು ಇಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ದೇಶಪ್ರೇಮಿಗಳ ಈ ಸಂಘಟನೆಯೊಂದಿಗೆ ನಾವು ಯಾವತ್ತೂ ಇರುತ್ತೇವೆ ಎಂದರು. ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಯಶ್ಪಾಲ್ ಸುವರ್ಣ, ಸುಮನಸಾ ಅಧ್ಯಕ್ಷ ಪ್ರಕಾಶ್ ಕೊಡವೂರು, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಹಾಲುಮತ ಮಹಾಸಭಾ ಅಧ್ಯಕ್ಷ ಸಿದ್ದಪ್ಪ ಎಚ್. ಐಹೊಳೆ, ಕನಕದಾಸ ಸಮಾಜ ಸೇವಾ ಸಂಘ ಅಧ್ಯಕ್ಷ ಹನುಮಂತ ಐಹೊಳೆ ಮೊದಲಾದವರು ಉಪಸ್ಥಿತರಿದ್ದರು.
ಜನಾರ್ದನ್ ಕೊಡವೂರು ಪ್ರಸ್ತಾವನೆ ಮಾಡಿದರು. ಸವಿತಾ ನೋಟಗಾರ ಸ್ವಾಗತಿಸಿ, ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್ ವಂದಿಸಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು