ಉಡುಪಿ: ಅಮೃತ್ ಗಾರ್ಡನ್ನಲ್ಲಿ ನಡೆದ ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಸಮ್ಮೇಳನ ‘ರಾಜಪರ್ವ’ದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಉಡುಪಿ ರೋಟರಿಯ ಮೂಲಕ ನೀಡಲ್ಪಟ್ಟ ಗೌರವಾನ್ವಿತ ಪಿಎಚ್ಎಫ್ ಗೌರವ ನೀಡಿ ಸನ್ಮಾನಿಸಲಾಯಿತು.
ತನ್ನ ಸೇವಾ ಕಾರ್ಯದೊಂದಿಗೆ ವಿಶ್ವದ ಸೇವೆಯ ಕೈಂಕರ್ಯವನ್ನು ನಡೆಸುತ್ತಿರುವ ರೋಟರಿ ದತ್ತಿನಿಧಿಗೆ ವಿಶೇಷ ಮೊತ್ತವನ್ನು ಮಠದ ಮೂಲಕ ದೇಣಿಗೆ ನೀಡಿರುವ ಶ್ರೀಪಾದರಿಗೆ ರೋಟರಿ ಜಿಲ್ಲಾ ಗವರ್ನರ್ ಬಿ. ರಾಜಾರಾಮ್ ಭಟ್ ಇವರು ಸ್ವಾಗತಿಸಿ ರೋಟರಿ ಗೌರವವನ್ನು ಸಮರ್ಪಿಸಿದರು.
ಜಿಲ್ಲಾ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಗಳು ಯಾರ ಬದುಕು ಹತ್ತು ಮಂದಿಯ ಬದುಕಿಗೆ ದಾರಿಯಾಗುತ್ತದೆಯೇ ಅವರದ್ದು ನಿಜವಾದ ಬದುಕು. ರೋಟರಿ ಈ ನಿಟ್ಟಿನಲ್ಲಿ ಜಗತ್ತಿಗೆ ಮಾದರಿವಾಗಿದೆ. ರೋಟರಿ ಮೂಖಾಂತರ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವಾ ಚಟುವಟಿಕೆಗಳು ಹರಿದು ಬರಲಿ ಎಂದು ಆಶೀರ್ವಚಿಸಿದರು.
ರೋಟರಿ ಜಿಲ್ಲಾ ಪ್ರಥಮ ಮಹಿಳೆ ವರದಾಂಭ ಆರ್. ಭಟ್, ರೋಟರಿ ಉಡುಪಿಯ ಅಧ್ಯಕ್ಷೆ ರಾಧಿಕಾ ಲಕ್ಷ್ಮಿನಾರಾಯಣ, ಮಾಜಿ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ಜನಾರ್ದನ ಭಟ್, ಬಿ.ವಿ. ಲಕ್ಷ್ಮಿನಾರಾಯಣ್, ಕಾರ್ಯದರ್ಶಿ ದೀಪಾ ಭಂಡಾರಿ, ಸಮ್ಮೇಳನದಕ್ಷ ಆನಂದ ಶೆಟ್ಟಿ, ರೋಟರಿ ಜಿಲ್ಲಾಡಳಿತ ಕಾರ್ಯದರ್ಶಿ ಅಲೆನ್ ವಿನಯ್ ಲೂವಿಸ್ ಉಪಸ್ಥಿತರಿದ್ದರು.