ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳು ರೋಟರಿ ಸಂಸ್ಥೆಯಲ್ಲಿ ಇರುವುದರಿಂದ ರೋಟರಿ ಸಂಸ್ಥೆ ಕೋವಿಡ್ – 19 ಬಗ್ಗೆ ಜನ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಉಡುಪಿಯ ಅಂಬಾಗಿಲು ಅಮೃತ್ ಗಾರ್ಡನ್ ನಲ್ಲಿ ನಡೆಯುತ್ತಿರುವ “ರೋಟರಿ ರಾಜ ಪರ್ವ 2021” ಜಿಲ್ಲಾ ಕಾನ್ಫರೆನ್ಸ್ ನಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.
ದೇಶವನ್ನ ಕಾಡುತ್ತಿದ್ದ ಪೋಲಿಯೋ ನಿರ್ಮೂಲನೆಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ ರೋಟರಿ ಸಂಸ್ಥೆಯ ಕೊಡುಗೆ ದೊಡ್ಡದು. ಅದರಂತೆ ಪ್ರಸ್ತುತ ಕೋವಿಡ್ -19 ನಿರ್ಮೂಲನೆಗೆ ಜನಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ಜೊತೆ ರೋಟರಿ ಸಂಸ್ಥೆ ಕೈಜೋಡಿಸಬೇಕು. ಇದಕ್ಕೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದ ಅವರು ನನ್ನ ನೇತೃತ್ವದಲ್ಲಿ ಉಡುಪಿ ಕ್ಷೇತ್ರದಾದ್ಯಂತ ಹಡಿಲು ಬಿದ್ದಿರುವ ಕೃಷಿ ಭೂಮಿಯನ್ನು ಸಾವಯವ ಪದ್ಧತಿಯಲ್ಲಿ ಸಾಗುವಳಿ ಮಾಡುವಂತಹ ಅಭಿಯಾನವನ್ನು ಆರಂಭಿಸಿದ್ದು, ಈ ಬಾರಿ 50 ಎಕ್ರೆ ಹಡಿಲು ಕೃಷಿ ಭೂಮಿಯನ್ನು ಸ್ಥಳೀಯರ, ಕೃಷಿ ಆಸಕ್ತರ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಸಾವಯವ ಪದ್ಧತಿಯಲ್ಲಿ ಸಾಗುವಳಿ ಮಾಡಿ ಯಶಸ್ವಿಯಾಗಿದ್ದೇವೆ.