ಉಡುಪಿ: ಪ್ಲಾಸ್ಟಿಕ್ ಮುಕ್ತ ಪರಿಸರ ಪ್ರತಿಯೊಬ್ಬರ ಜವಾಬ್ದಾರಿಯಾಗಲು ಮೊದಲು ನಾವು ನಮ್ಮ ಮನೆಯಲ್ಲಿ ಪ್ಲಾಸ್ಟಿಕ್ ಉಪಯೋಗ ನಿಲ್ಲಿಸಿದಾಗ ಮಾತ್ರ ಸಾಧ್ಯ ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಮೇರಿ ಡಿʼಸೋಜಾ ಹೇಳಿದರು.
ಶನಿವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ, ಉಡುಪಿ ವಲಯ, ಉದ್ಯಾವರ ಘಟಕ ಹಾಗೂ ಇತರ ಸಹಭಾಗಿ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ನಿರ್ಮಲ ಪರಿಸರ ನಮ್ಮ ಕರ್ತವ್ಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಪ್ಲಾಸ್ಟಿಕ್ ನ ಅತಿಯಾದ ಬಳಕೆಯಿಂದ ನಮ್ಮ ಪರಿಸರ ಸಂಪೂರ್ಣವಾಗಿ ಕಲುಷಿತಗೊಂಡಿದ್ದು ಇದರಿಂದ ಎಲ್ಲಾ ರೀತಿಯ ಮಾಲಿನ್ಯಕ್ಕೆ ಅಹ್ವಾನ ಮಾಡಿಕೊಟ್ಟಂತಾಗಿದೆ. ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಸುವುದನ್ನು ಬಿಟ್ಟು ಮರು ಬಳಕೆಯಾಗುವಂತಹ ವಸ್ತುಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ಕೇವಲ ಹೇಳಿಕೆಗೆ ಸೀಮಿತವಾಗದೆ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಇದರನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಸ್ವಚ್ಚ ಪರಿಸರದ ಕನಸು ನನಸಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಆಧ್ಯಾತಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ವಲಯ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಕೇಂದ್ರಿಯ ಸಮಿತಿಯ ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಉಪಾಧ್ಯಕ್ಷ ರೊನಾಲ್ಡ್ ಡಿʼಆಲ್ಮೇಡಾ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ, ವಲಯ ಅಧ್ಯಕ್ಷರಾದ ಲವೀನಾ ಪಿರೇರಾ, ಘಟಕ ಅಧ್ಯಕ್ಷರಾದ ಆಲ್ವಿನ್ ಅಂದ್ರಾದೆ, ಸ್ಥಳೀಯ ಉದ್ಯಾವರ ಚರ್ಚಿನ ವಂ.ಝೇವಿಯರ್ ಪಿಂಟೊ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಗೋಡ್ ಫ್ರೀ ಡಿಸೋಜಾ, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಐರಿನ್ ಪಿರೇರಾ ಮತ್ತಿತ್ತರು ಉಪಸ್ಥಿತರಿದ್ದರು.