ಬ್ರಾಹ್ಮಣ ಮಹಾ ಸಭಾ ಕೊಡವೂರು ವತಿಯಿಂದ ಸಾಮೂಹಿಕ ಬ್ರಹ್ಮೋಪದೇಶ
ಬ್ರಹ್ಮ ವರ್ಚಸ್ಸು ಬ್ರಾಹ್ಮಣರ ಆಸ್ತಿ. ಅಂತಹ ವರ್ಚಸ್ಸು ವಿಪ್ರ ರಿಗೆ ಬರುವುದು ದೈವೀ ಮಂತ್ರ ಗಾಯತ್ರಿಯ ಪಠಣದಿಂದ. ಆದ್ದರಿಂದ ಪ್ರತಿಯೋರ್ವ ವಿಪ್ರರು ನಿತ್ಯ ಗಾಯತ್ರಿ ಮಂತ್ರ ಪಠಣ ಮಾಡುವುದು ಧರ್ಮ ಎಂದು ಪೂರ್ಣ ಪ್ರಜ್ಞ ಸಂಶೋಧನಾ ಮಂದಿರ ಬೆಂಗಳೂರು, ಇಲ್ಲಿನ ಸಂಶೋಧಕ ಡಾ. ಶ್ರೀಕಾಂತ ಆಚಾರ್ಯ ಅಭಿಪ್ರಾಯ ಪಟ್ಟರು.
ಅವರು ಕೊಡವೂರು ಬ್ರಾಹ್ಮಣ ಮಹಾ ಸಭಾ ವತಿಯಿಂದ ರಜತ ಮಹೋತ್ಸವದ ಅಂಗವಾಗಿ ನಡೆದ ಸರಣಿ ಮೂವತ್ತಮೂರನೇ ಕಾರ್ಯಕ್ರಮ ಸಾಮೂಹಿಕ ಉಪನಯನ ಸಮಾರಂಭದಲ್ಲಿ ಪ್ರವಚನ ನೀಡುತ್ತಾ ಸಾಕ್ಷಾತ್ ಲಕ್ಷ್ಮೀ ದೇವಿಯ ಉದರ ದಿಂದ ಜನಿಸಿದ ವೇದ ಮಾತೆಯ ಆರಾಧನೆ ಸಕಲ ಪಾಪಗಳಿಗೆ ಮುಕ್ತಿ.
ಸುಮುಹೂರ್ತದಲ್ಲಿ ನಡೆಸಿದ ಬ್ರಹ್ಮೋಪದೇಶ ಸಂಸ್ಕಾರದಿಂದಾಗಿ ಜನನ ಸಂದರ್ಭದಲ್ಲಿ ಜಾತಕದಲ್ಲಿ ತೋರಿ ಬರುವ ಹತ್ತು ಹಲವು ದೋಷಗಳು ದೂರವಾಗಿ ವಟುಗಳ ಆತ್ಮ ಶುದ್ಧಿಗೆ ಕಾರಣವಾಗುತ್ತದೆ ಎಂದರು. ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಪಂಚ ವಟುಗಳಾದ ಚಿ . ಶಾರದಾ ಪ್ರಸಾದ್, ಚಿ.ವೇದಾಂತ ರಾವ್, ಚಿ. ಸುಬ್ರಹ್ಮಣ್ಯ ,ಚಿ. ತನುಷ್, ಚಿ. ಸುಧೀರ್ ಇವರಿಗೆ ಶುಭ ಹಾರೈಸಿದರು.
ಕೊಡವೂರು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್, ಕಾರ್ಯದರ್ಶಿ ಶ್ರೀನಿವಾಸ ಬಾಯರಿ, ರಜತಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಗೌರವಾಧ್ಯಕ್ಷ ಪಿ.ಗುರುರಾಜ್ ರಾವ್ ಹಾಗು ಸದಸ್ಯ ಶ್ರೀಪತಿ ಬಾಯರಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.