ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಣ್ಯಂ~1

ಭಾರತದ ಯಾವ ರಾಜ್ಯದಲ್ಲೂ, ಯಾವ ಭಾಷೆಯಲ್ಲೂ ಒಬ್ಬ ಸಿನೆಮಾದ ಹಿನ್ನೆಲೆ ಗಾಯಕ ಇಷ್ಟೊಂದು ಜನರ ಪ್ರೀತಿ ಪಡೆದಿರುವ ಉದಾಹರಣೆಯೇ ಸಿಗುವುದಿಲ್ಲ! ಅದು ಕನ್ನಡಿಗರ ಪ್ರೀತಿಯ ಪರಾಕಾಷ್ಠೆ ಮತ್ತು ಆ ಗಾಯಕ ನಿಸ್ಸಂಶಯವಾಗಿಯೂ ಎಸ್ಪಿಬಿ!
ತೀವ್ರ ಅನಾರೋಗ್ಯದ ಕಾರಣಕ್ಕೆ ಬಾಲು ಸರ್ ಉಸಿರಿಗಾಗಿ ಚಡಪಡಿಸುತ್ತಿದ್ದ ಕ್ಷಣದಲ್ಲೂ ಕನ್ನಡಿಗರು ಉಸಿರು ಬಿಗಿ ಹಿಡಿದು ಅವರಿಗಾಗಿ ಪ್ರಾರ್ಥನೆ ಮಾಡಿದ್ದರು. ಹೋಮ ಹವನಗಳನ್ನು ಮಾಡಿದ್ದರು. ಎಲ್ಲಾ ಧರ್ಮದ ಅಭಿಮಾನಿಗಳೂ ಅವರಿಗಾಗಿ ಮಿಡಿದಿದ್ದರು. ಲಕ್ಷಾಂತರ ಜನ ಅವರ ಫೋಟೋ ಹಾಕಿ ನೋವಿನ ಸ್ಟೇಟಸ್ ಹಾಕಿದ್ದರು. ಆಸ್ಪತ್ರೆಯ ವೈದ್ಯಕೀಯ ವರದಿ ಮತ್ತು ಅವರ ಮಗ ಚರಣ್ ಹೇಳಿಕೆಗಳನ್ನು ದಿನವೂ ಫಾಲೋ ಮಾಡಿ ಹೃದಯ ಭಾರ ಮಾಡಿಕೊಳ್ಳುತ್ತಿದ್ದರು.
‘ಅವರು ಆರೋಗ್ಯ ಪೂರ್ಣವಾಗಿ ಮರಳಿ ಬರಬೇಕು. ಮತ್ತೆ ಹಾಡಬೇಕು’ ಎಂಬುದು ಎಲ್ಲರ ಒಕ್ಕೊರಲ ಪ್ರಾರ್ಥನೆ ಆಗಿತ್ತು. ಅದು ಎಸ್ಪಿಬಿ ಅವರ ಮೇಲಿನ ಕನ್ನಡಿಗರ ಪ್ರೀತಿ ಮತ್ತು ಎಸ್ಪಿಬಿ ಅವರ ಅಸದೃಶ ವ್ಯಕ್ತಿತ್ವ! ಅವರ ಸಂಗೀತದ ಅದ್ಬುತ ಪ್ರತಿಭೆಯ ಹೊರತಾಗಿಯೂ ಅವರ ಅಜಾತಶತ್ರುವಾದ ವ್ಯಕ್ತಿತ್ವ, ಎಲ್ಲರನ್ನೂ ಗೌರವಿಸುವ ರೀತಿ, ವಿನಯ ಸಂಪನ್ನತೆ, ಹಾಸ್ಯ ಪ್ರಜ್ಞೆ, ಹೃದಯ ಶ್ರೀಮಂತಿಕೆ, ಎಲ್ಲರೊಂದಿಗೆ ಬೆರೆಯುವ ಗುಣಗಳು ಬಾಲು ಸರ್ ಅವರನ್ನು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪನೆ ಮಾಡಿದ್ದವು. ಅದಕ್ಕೆ ಅವರು ಖಂಡಿತವಾಗಿಯೂ ಯೋಗ್ಯರಾಗಿದ್ದರು. 
ಬಾಲು 54 ವರ್ಷಗಳಿಂದ ಸಿನೆಮಾಗಳಿಗೆ ಹಾಡುತ್ತಾ ಬಂದಿದ್ದಾರೆ. 1956ರ ಡಿಸೆಂಬರ್ 15ರಂದು ಅವರ ಮೊದಲ ಹಾಡು ತೆಲುಗಿನಲ್ಲಿ ‘ಮರ್ಯಾದಾ ರಾಮಣ್ಣ’ ಸಿನೆಮಾಕ್ಕೆ ರೆಕಾರ್ಡ್ ಆಗಿತ್ತು. ಎರಡೇ ದಿನದಲ್ಲಿ ಅವರು ಕನ್ನಡದಲ್ಲಿ ‘ ನಕ್ಕರೆ ಅದೇ ಸ್ವರ್ಗ ‘ ಸಿನೆಮಾಕ್ಕೆ ಮೊದಲ ಹಾಡು ಹಾಡಿದರು. ಈ ಸುದೀರ್ಘ ಅವಧಿಯಲ್ಲಿ ಅವರು ಎಂದಿಗೂ ಬೇಡಿಕೆ ಕಳೆದುಕೊಳ್ಳಲಿಲ್ಲ. ಎಂತೆಂತಹ ಯುವ ಪ್ರತಿಭೆಗಳು ಬಂದರೂ ಬಾಲು ಸರ್ ಸ್ಥಾನವು ಒಂದಿಷ್ಟೂ ಅಲುಗಾಡಿಲ್ಲ ಎನ್ನುವುದು ಅವರ ದೈತ್ಯ ಪ್ರತಿಭೆಗೆ ಸಾಕ್ಷಿ! ಒಟ್ಟು ಹದಿನಾರು ಭಾಷೆಗಳಲ್ಲಿ 40,000 ಹಾಡುಗಳನ್ನು ಬಾಲು ಹಾಡಿದ್ದಾರೆ! ಅದರಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ತುಳುವಲ್ಲಿ ಕೂಡ ಅವರು ಹಾಡಿದ್ದಾರೆ.
(1972ರ ಪಗೆತ್ತ ಪುಗೆ ಸಿನೆಮಾದ ಮೋಕೆದ ಸಿಂಗಾರಿ ಹಾಡನ್ನು ಅದ್ಭುತವಾಗಿ ಬಾಲು ಸರ್ ಹಾಡಿದ್ದಾರೆ). ಆರು ಬಾರಿ ಅವರು ಹಾಡಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಅದರಲ್ಲೂ ಕೂಡ ಅವರು ನಾಲ್ಕು ಬೇರೆ ಬೇರೆ ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದಲ್ಲಿ ‘ಗಾನಯೋಗಿ ಪಂಚಾಕ್ಷರ ಗವಾಯಿ’ (1995) ಸಿನೆಮಾದ ಹಾಡಿಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ದಕ್ಷಿಣ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಆರು ಬಾರಿ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿದೆ. ಹಿಂದಿಯಲ್ಲಿ ‘ಏಕ್ ದುಜೇ ಕೇಲೀಯೇ’ ಮತ್ತು ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಹಾಡುಗಳಿಗೆ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯಿತು. ಅದರೊಂದಿಗೆ ‘ಏಕ್ ದುಜೆ ಕೇಲೀಯೇ’ ಸಿನೆಮಾದ ‘ತೇರೆ ಮೇರೆ ಬೀಚ್ ಮೇ’ ಜನಪ್ರಿಯ ಹಾಡಿಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದರು. 
ಅವರ ದಾಖಲೆಗಳ ಬಗ್ಗೆ ಬರೆಯುತ್ತ ಹೋದಂತೆ ಅದೇ ಹತ್ತಾರು ಎಪಿಸೋಡಿಗೆ ಸಾಮಗ್ರಿ ಆಗಬಹುದು. ತೆಲುಗಿನಲ್ಲಿ 25 ಬಾರಿ ನಂದಿ ಪ್ರಶಸ್ತಿ ಪಡೆದ ಬೇರೆ ಕಲಾವಿದ ಸಿಗುವುದಿಲ್ಲ! 1981ರ ಫೆಬ್ರವರಿ 8ರಂದು ಒಂದೇ ದಿನ 21 ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡದ್ದು ದೊಡ್ಡ ದಾಖಲೆ. ತಮಿಳಲ್ಲಿ ಕೂಡ ಒಂದೇ ದಿನ 16 ಸಾಂಗ್ಸ್ ಹಾಡಿದ್ದಾರೆ. ಹಿಂದಿಯಲ್ಲಿ ಕೂಡ ಒಂದೇ ದಿನ 16 ಸಾಂಗ್ಸ್ ಹಾಡಿದ ದಾಖಲೆ ಅವರ ಹೆಸರಲ್ಲಿ ಇದೆ. ಅತೀ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ ವಿಶ್ವದಾಖಲೆ ಇಂದು ಬಾಲು ಮತ್ತು ಎಸ್. ಜಾನಕಿ ಅವರ ಹೆಸರಲ್ಲಿ ಇದೆ! ತಮಿಳಲ್ಲಿ ಬಾಲು ಸರ್, ಜಾನಕಿ ಅಮ್ಮ ಮತ್ತು ಸಂಗೀತ ಮಾಂತ್ರಿಕ ಇಳಯರಾಜ ಅವರದ್ದು ಮೋಸ್ಟ್ ಸಕ್ಸೆಸ್ಫುಲ್ ಕಾಂಬಿನೇಶನ್ ಎಂದು ನೂರಾರು ಬಾರಿ ಪ್ರೂವ್ ಆಗಿದೆ! ಕನ್ನಡದಲ್ಲಿ ಕೂಡ ಬಾಲು ಸರ್, ಜಾನಕಿ ಅಮ್ಮ ಅವರ ಯುಗಳ ಧ್ವನಿ, ಉದಯ ಶಂಕರ್ ಸಾಹಿತ್ಯ, ರಾಜನ್ ನಾಗೇಂದ್ರ ಸಂಗೀತ ನಿರ್ದೇಶನ ಸೃಷ್ಟಿ ಮಾಡಿದ ಸಂಚಲನವು ಬೆಲೆ ಕಟ್ಟಲು ಅಸಾಧ್ಯವಾದದ್ದು. 
ಅವರ ಹೃದಯ ಶ್ರೀಮಂತಿಕೆಯ ಬಗ್ಗೆ ಕೂಡ ನೂರಾರು ನಿದರ್ಶನಗಳು ಸಿಗುತ್ತವೆ. ಅದರಲ್ಲಿ ಒಂದನ್ನು ಇಂದು ನಿಮ್ಮ ಮುಂದೆ ಇಡಬೇಕು. ಎಂಬತ್ತರ ದಶಕದಲ್ಲಿ ಪ್ರತೀ ಒಂದು ಹಾಡನ್ನು ಕೂಡ ಒಬ್ಬ ಟ್ರಾಕ್ ಸಿಂಗರ್ ಮೂಲಕ ಮೊದಲು ಹಾಡಿಸಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ನಂತರ ಸ್ಟಾರ್ ಸಿಂಗರ್ ಬಂದು ಆ ಹಾಡನ್ನು ಒಮ್ಮೆ ಕೇಳಿದ ನಂತರ ಮುಂದಿನ ಕ್ಷಣದಲ್ಲಿ ಆ ಹಾಡನ್ನು ಹಾಡುತ್ತಿದ್ದರು. ಆಗ ‘ ಪ್ರೀತ್ಸೆ ‘ ಎಂಬ ಕನ್ನಡ ಸಿನೆಮಾಕ್ಕೆ ಹಂಸಲೇಖ ಸಂಗೀತ ನೀಡುತ್ತಿದ್ದರು. ಅದರ ಟೈಟಲ್ ಹಾಡನ್ನು ಹೇಮಂತ್ ಎಂಬ ಟೈಟಲ್ ಸಿಂಗರ್ ಮೂಲಕ ಹಾಡಿಸಿ ರೆಕಾರ್ಡ್ ಮಾಡಿದ್ದರು. ಅದೇ ಹಾಡನ್ನು ಹಾಡಲು ಬಾಲು ಸರ್ ಚೆನ್ನೈಯಿಂದ ಬೆಂಗಳೂರಿಗೆ ಬಂದಿದ್ದರು. ಆ ಹಾಡನ್ನು ಕೇಳಿ ತುಂಬಾ ಖುಷಿ ಪಟ್ಟು ‘ಹೇಮಂತ್ ಎಷ್ಟೊಂದು ಚೆನ್ನಾಗಿ ಹಾಡಿದ್ದಾರೆ. ದಯವಿಟ್ಟು ಅವರಿಂದಲೇ ಹಾಡಿಸಿ ‘ ಎಂದು ಹೇಮಂತ್ ಬೆನ್ನು ತಟ್ಟಿ ಸಂಭಾವನೆ ಪಡೆಯದೆ ಹಿಂದೆ ಹೋಗಿದ್ದರು! ಅದರಿಂದ ಕನ್ನಡಕ್ಕೆ ಹೇಮಂತ್ ಎಂಬ ಒಬ್ಬ ಒಳ್ಳೆಯ ಗಾಯಕ ಸಿಕ್ಕಿದ್ದ. ಇಂತಹ ಘಟನೆಗಳು ನೂರಾರು ದೊರೆಯುತ್ತವೆ. 
ಮೂಡಬಿದ್ರೆಯ ಆಳ್ವಾಸ್ ವಿರಾಸತ್ ಕಾರ್ಯಕ್ರಮದಲ್ಲಿ ಬಾಲು ಸರ್ ಹಾಡಲು ಬಂದಾಗ ಅವರ ಹಾಡುಗಳನ್ನು ಪ್ರತ್ಯಕ್ಷವಾಗಿ ಕೇಳಲು ಸಾವಿರಾರು ಮಂದಿ ಸೇರಿದ್ದರು. ಅಂದು “ನಿಮ್ಮ ಫೇವರೀಟ್ ಹಾಡು ಯಾವುದು ಬಾಲು ಸರ್” ಎಂದು ನಿರೂಪಣೆ ಮಾಡುತ್ತಿದ್ದ ಹುಡುಗಿ ಕೇಳಿದಾಗ ಒಂದು ಕ್ಷಣವೂ ಯೋಚನೆ ಮಾಡದೆ ಬಾಲು ಸರ್ ಮೈಕ್ ಹಿಡಿದು ಹಾಡಿದ್ದು ‘ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ‘….. ( ಮುಂದುವರೆಯುತ್ತದೆ).
 
 
 
 
 
 
 
 
 
 
 

Leave a Reply