ಆಕಾಶವೇ ಕಳಚಿ ಬಿದ್ದಂತೆ ಸುರಿಯುತ್ತಿದೆ ವರ್ಷಧಾರೆ,ಮಕ್ಕಳ ಮುಖದಲ್ಲೋ ನಗುವಿನ ಹರ್ಷಧಾರೆ,
ಕಾರಣವಿಷ್ಟೇ ಅತಿವೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ನೀಡಲಾಗಿದೆ ರಜೆ.
ಮಳೆರಾಯನಿಗೂ ತಿಳಿಯಿತು ಮಕ್ಕಳ ಮನಸ್ಸು, ತಾನು ಮುಗಿಲ ಮುಸುಕೊದ್ದು ತಣ್ಣಗೆ ಮಲಗಿಬಿಟ್ಟನು.
ಆಗಸದಿ ರವಿಯು ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಲು ಬಂದೇ ಬಿಟ್ಟನು,
ಇದರೊಟ್ಟಿಗೆ ಹೆಂಗಳೆಯರ ಜೂಟಾಟವು ಆರಂಭವಾಗುವುದು,
ಮನೆಯ ಅಂಗಳದಿ ಬಟ್ಟೆಗಳು ತಳಿರು ತೋರಣಗಳಂತೆ ಸಿಂಗಾರಗೊಳ್ಳುವವು.
ಮಕ್ಕಳ ಪ್ರೀತಿಯ ಮಳೆರಾಯ ಹೆಂಗಳೆಯರ ಪಾಲಿಗೆ ಶತ್ರುವಾಗುವುದು ಇದೇ ಸಂದರ್ಭದಲ್ಲಿ,
ಮನೆಯ ಮುಂದಿನ ಸಿಂಗಾರವನ್ನು ನೋಡಿಯೇ ಮುಸುಗೊಳಗಿಂದ ಆಕಳಿಸುತ್ತಾ ನಿಧಾನವಾಗಿ ಮೇಲೆದ್ದು ಬರುವನು, ಅಂಗನೆಯರ ಹಿಡಿಶಾಪಕ್ಕೆ ಗುರಿಯಾಗುವನು.
– ಮಲ್ಲಿಕಾ ಶ್ರೀಶ ಬಲ್ಲಾಳ್