ಮಕ್ಕಳಲ್ಲಿ, ಸ್ತ್ರೀಯರಲ್ಲಿ ದೇವರನ್ನು ಕಂಡು ಪೂಜಿಸುವ ಸಂಸ್ಕೃತಿ ನಮ್ಮದು. ನಮಗೆಲ್ಲರಿಗೂ ಕೊರೋನಾದ ಈ ಸಂದಿಗ್ಧತೆಯಲ್ಲಿ ನವರಾತ್ರಿಯ ಪರ್ವ ಕಾಲದಲ್ಲಿ ಬೇರೆ ಬೇರೇ ದೇವಿ ದೇಗುಲಗಳಿಗೆ ತೆರಳಿ ಪೂಜೆ ಮಾಡಿಸಿ ಬರಲು ಒಂದಷ್ಟು ಅಳುಕು. ಆದರೂ ಹಬ್ಬಗಳನ್ನು ಹೊಸತನದೊಂದಿಗೆ ಮಾಡಬೇಕೆಂಬ ತುಡಿತ ನಮ್ಮೆಲ್ಲರದು. ಜನ ಸಂದಣಿ ಇರುವಲ್ಲಿಗೆ ಹೋಗದೆ ನಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವ ಪರಿಪಾಠ ಆರಂಭವಾಗಿದೆ. ಮಕ್ಕಳಿಗೆ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಕೃಷ್ಣನ ವೇಷ, ರಾಧಾಕೃಷ್ಣ ವೇಷ ಹಾಕಿ ಸಂಭ್ರಮಿಸಿದರೆ ನವರಾತ್ರಿಯ ಈ ದಿನಗಳಲ್ಲಿ ಪುಟ್ಟ ಮಕ್ಕಳಿಗೆ ಇಲ್ಲವೇ ಯುವತಿಯರಿಗೆ ದೇವಿಯ ನಾನಾ ರೂಪಗಳನ್ನು ಹಾಕಿ ಸಂಭ್ರಮಿಸುವ ಸಮಯ.

ಮಗುವಿನ ಬಗ್ಗೆ ಪೂರಕ ಅಗತ್ಯತೆಗಳನ್ನು ಪೂರೈಸಿಕೊಂಡ ಬಳಿಕ ಆ ಮಗುವಿನ ತಂದೆ-ತಾಯಿ ಇಲ್ಲವೇ
ಬಂಧು ವರ್ಗದವರ ಸಹಕಾರದಿಂದ ನುರಿತ ಸೌಂದರ್ಯ ತಜ್ಞರು ಆ ಮಗುವಿನ ಮನಸ್ಥಿತಿ ಕೆಡದಂತೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಅಗತ್ಯ ಪರಿಕರಗಳನ್ನು ಉಪಯೋಗಿಸಿ ಸಿಂಗರಿಸುವ ಕಾಯಕ ಆರಂಭ. ಮಗುವಿಗೆ ಬೇಸರ ಬರದಂತೆ, ಮುಜುಗರ ಆಗದಂತೆ ಹಾಗೆ ತೊಂದರೆಯಾಗದೆ ಹಾಗೆ ಸುಮಾರು ಹೊತ್ತು ಹಿಡಿದಿಟ್ಟುಕೊಳ್ಳುವುದು, ಅಂತೆಯೇ ಸವಿ ಮಾತಿನಿಂದ ಆಕೆಯನ್ನು ಒಪ್ಪಿಸುವುದು ಕಷ್ಟಸಾಧ್ಯ. ಅದಕ್ಕೂ ನೈಪುಣ್ಯತೆಯೊಂದಿಗೆ ಮನೆಮಂದಿಯ ಸಹಕಾರ ಅಗತ್ಯವಾಗಿ ಬೇಕು.

ಇಷ್ಟೆಲ್ಲಾ ಶ್ರಮವಹಿಸಿ ಒಂದು ಪುಟ್ಟ ಮಗುವನ್ನು ದೇವತೆಯಂತೆ ಅಲಂಕರಿಸಿ ಮನೆ ಮಂದಿ ಮಾತ್ರ ಸಂತಸ ಪಟ್ಟರೆ ಸಾಕೇ.? ಆ ಸಂತಸದ ಕ್ಷಣಗಳನ್ನು ಇನ್ನಷ್ಟು ಮಂದಿಗೆ ಹಂಚಿಕೊಳ್ಳುವುದರೊಂದಿಗೆ ಅದನ್ನು ಸ್ಮರಣೀಯವಾಗಿಸಬೇಕು, ಅದಕ್ಕಾಗಿ ನುರಿತ ಛಾಯಾಗ್ರಾಹಕ ಜೊತೆಯಾಗಿರಬೇಕು. ಅಂತಹ ಛಾಯಾಗ್ರಾಹಕನಿಗೆ ಛಾಯಾಗ್ರಹಣ ಒಳಹೊರಗುಗಳು ಮಾತ್ರವಲ್ಲ ಒಂದು ಮಗುವನ್ನು ಪುಸಲಾಯಿಸುವ, ಮೋಡಿ ಮಾಡುವ ಕಲೆಯೂ ಗೊತ್ತಿರಬೇಕು. ತಾಳ್ಮೆ, ಆಸಕ್ತಿ, ಶ್ರದ್ಧೆ ಎಲ್ಲಿ ಹೇಗೆ ಛಾಯಾಚಿತ್ರ ತೆಗೆದರೆ ವಿಶಿಷ್ಟ ಪರಿಣಾಮ ಸಿಗಬಹುದೆಂಬ ಕಲ್ಪನೆ ಇರಬೇಕು. ಅದಕ್ಕಾಗಿ ಸುಂದರ ಹಿನ್ನೋಟದ ಆಯ್ಕೆ , ನೆರಳು ಬೆಳಕಿನ ಚಮತ್ಕಾರ ಜೋಡಣೆ ಹೀಗೆ ಒಂದು ವಿಶಿಷ್ಟ ಛಾಯಾಚಿತ್ರ ಹಲವು ವಿಶಿಷ್ಟತೆಗಳ ಸಂಗಮವಾಗಬೇಕು.

ಈಗಾಗಲೇ ಫೇಸ್ಬುಕ್ ವಾಟ್ಸಾಪ್ ಮುಂತಾದ ಜಾಲತಾಣಗಳಲ್ಲಿ ನಮ್ಮೀ ಪುಟ್ಟ ಮಗು ಶಾರದೆಯು ನಲಿದಾಡುತ್ತಿದ್ದಾಳೆ. ಸುರತ್ಕಲ್ ಪ್ರಶಾಂತ್ ಪೂಜಾರಿ ಹಾಗೂ ಜ್ಯೋತಿ ಪ್ರಶಾಂತ್ ಪೂಜಾರಿ ದಂಪತಿಗಳ ಐದು ವರುಷದ ಪುಟ್ಟ ಬಾಲೆ ಆರಾಧ್ಯ ಪಿ ಅಂಚನ್ ಶಾರದೆಯಾಗಿ ಕಣ್ಮನ ಸೆಳೆಯುತ್ತಿದ್ದಾಳೆ. ಒಮ್ಮೆ ಕಂಡರೆ ಕೈಮುಗಿಯ ಬೇಕೆಂಬ, ಮತ್ತೊಮ್ಮೆ ಕಂಡಾಗ ಎತ್ತಿ ಮುದ್ದಾಡಬೇಕು ಎಂದು ಅನಿಸುವ ಪುಟ್ಟ ಶಾರದೆಯ ರೂಪ ಲಾವಣ್ಯಕ್ಕೆ ಅವಳ ಭಾವಾಭಿನಯಕ್ಕೆ ಮನ ಸೋಲದವರಿಲ್ಲ.


ಅದಕ್ಕೆ ಪೂರಕವಾಗಿ ಬಪ್ಪನಾಡು ದೇವಳದ ಪರಿಸರ ಸಾಥ್ ನೀಡಿದರೆ ಒಟ್ಟಾರೆಯಾಗಿ ಎಲ್ಲರೂ ಮನಸೆಳೆಯುವ ಪುಟ್ಟ ಮಗುವಿನ ಭಾವಪೂರ್ಣ ಅಂದದ ಮೊಗದ ಚೆಂದದ ಭಾವವನ್ನು ಸೆರೆಹಿಡಿದು ನಮ್ಮೊಂದಿಗೆ ಹಂಚಿಕೊಂಡ ಛಾಯಾಗ್ರಾಹಕ ಅಭಿನಂದನಾರ್ಹ. ನಮ್ಮೆಲ್ಲರ ಪುಟ್ಟ ಶಾರದೆ ಹಾಗೂ ಶಾರದೆಯನ್ನು ಅಣಿಗೊಳಿಸುವಲ್ಲಿ ಸಹಕರಿಸಿದವರಿಗೆ ಎಲ್ಲರಿಗೂ ಅಕ್ಷರ ಮಾಲೆ ಧರಿಸಿದ ಅಕ್ಷರ ಮಾತೆ ಸರಸ್ವತಿ ಎಲ್ಲರಿಗೂ ಅಕ್ಷರ ಧಾರೆಯನ್ನಿತ್ತು ಸಲಹಲಿ. ಎಲ್ಲರ ಮನೆ-ಮನ ಅಕ್ಷರಧಾಮ ವಾಗಲಿ ಎಂದು ಹಾರೈಸುತ್ತಾ ನವರಾತ್ರಿಯ ಶುಭಾಶಯಗಳು.
