“ಮಾತಿನಮಲ್ಲಿ” ಸಂಧ್ಯಾ ಶೆಣೈಗೆ ಅರುವತ್ತರ ಸಂಭ್ರಮದ ಸಡಗರ~ರವಿರಾಜ್ ಹೆಚ್ ಪಿ 

ನವರಸಗಳಲ್ಲಿ ಹಾಸ್ಯರಸಕ್ಕೆ ಅದರದ್ದೇ ಆದ ಮಹತ್ವವಿದೆ. ಮನುಷ್ಯನು ತನ್ನ ಮನಸ್ಸನ್ನು ಲವಲವಿಕೆಯಿಂದ ಆರೋಗ್ಯವಾಗಿಟ್ಟು ಕೊಳ್ಳಲು ನಗು ಎಂಬುವುದು ಅತ್ಯಗತ್ಯ. ಅಸಹಜವಾದ ಹಾಸ್ಯ ಸಂಗತಿಗಳನ್ನು ಕಂಡರೆ, ಕೇಳಿದರೆ ಮಗುವಿಂದ ಹಿಡಿದು ಮುತ್ತ ಮುದುಕರವರೆಗೂ ಖುಶಿ, ನಗು. ನಗುವು ದೇಹದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಯಕ್ಷಗಾನ, ನಾಟಕ ಮುಂತಾದ ಕಲೆಗಳಲ್ಲಿ ವಿದೂಷಕ ಪಾತ್ರ ಬಂದರೆ ಸಾಕು ಮುದವಾಗುತ್ತದೆ. ಬೀಚಿಯವರ ಹಾಸ್ಯ ಓದಿ ನಕ್ಕಿದ್ದೇವೆ, ಪ್ರಾಣೇಶ್, ಕೃಷ್ಣೇಗೌಡರ ಹಾಸ್ಯಮಾತು ಕೇಳಿ ಬಿದ್ದು ಬಿದ್ದು ನಗುತ್ತೇವೆ.ಅಂಥ ಹಾಸ್ಯ ಮಾತುಗಾರರ ಸಾಲಿನಲ್ಲಿ ನಮ್ಮ ಉಡುಪಿಯ ಸಂಧ್ಯಾ ಶೆಣೈ ಕೂಡ ಒಬ್ಬರು. ತಮ್ಮನ್ನು ತಾವೇ ಹಾಸ್ಯಕ್ಕೆ ವಸ್ತುವಾಗಿ ಒಡ್ಡಿಕೊಂಡು ಯಾರನ್ನೂ ನೋಯಿಸದ ಸಾತ್ವಿಕ ಹಾಸ್ಯದಿಂದ ನಗಿಸುತ್ತ ದೇಶ ವಿದೇಶಗಳ ಕನ್ನಡಿಗರನ್ನು ನಗಿಸಲೆಂದೇ ತಿರುಗಾಡಿ ಬರುವ ಸಂಧ್ಯಾ ಶೆಣೈ ಅವರ ಅರುವತ್ತನೇ ವಷ೯ವನ್ನು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಅವರ ಅಭಿಮಾನಿಗಳೆಲ್ಲರೂ ಒಟ್ಟು ಸೇರಿ ನಾಡಿದ್ದು 29ನೇ ತಾರೀಕು ಸಂಜೆ 5 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ದಲ್ಲಿ ನಡೆಸಲಿದ್ಧಾರೆ.ಸೋಮೇಶ್ವರದ ಮಂಜುನಾಥ ಭಕ್ತ ಹಾಗೂ ಸುಗಂಧ ಭಕ್ತ ದಂಪತಿಗಳ ಎರಡನೆಯ ಮಗಳಾಗಿರುವ ಸಂಧ್ಯಾ ಶೆಣೈ ಅವರು ಒಬ್ಬ ಸಹೋದರ ಹಾಗೂ ಮೂವರು ಸಹೋದರಿಯರ ನಡುವೆ ಹುಟ್ಟಿದವರು. ಮಲೆನಾಡ ತಪ್ಪಲಿನ ಸೋಮೇಶ್ವರದಲ್ಲಿ ಹುಟ್ಟಿ ಬೆಳೆದ ಇವರು ತಮ್ಮ ಬಾಲ್ಯವನ್ನು ಅತ್ಯಂತ ಸಂಭ್ರಮದಿಂದ ಸುಂದರ ವಾತಾವರಣದಲ್ಲಿ ಕಳೆದವರು. ಹಾಗಾಗಿ ಬಾಲ್ಯದ ಮಧುರ ಕ್ಷಣಗಳನ್ನು ಆಗಾಗ ನೆನಪಿಸಿಕೊಂಡು, ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುತ್ತ ಸಂತೋಷ ಪಡುವುದು ಇವರ ಅಭ್ಯಾಸ .

ಉಡುಪಿಯ ಶ್ರೀಯುತ ವಿಠಲದಾಸ ಶೆಣೈಯವರನ್ನು ಮದುವೆಯಾಗಿ ಪ್ರಾರಂಭಿಕ ಹಂತದಲ್ಲಿ ಮುಂಬೈ ಶಹರದಲ್ಲಿ ಜೀವನ ಮಾಡಿದ್ದರೂ ಬಳಿಕ ಇಬ್ಬರೂ ಸಾಂಸ್ಕೃತಿಕ ನಗರವಾದ ಉಡುಪಿಯಲ್ಲಿಯೇ ನೆಲೆಸಿದವರು. ಮಗಳು ಶ್ವೇತಾ.. ಅಳಿಯ ಅಜೇಯ.. ಮೊಮ್ಮಗ ಆಶ್ವೀಜ.. ಮಗ ಸಾತ್ವಿಕ ಹಾಗೂ ಸೊಸೆ ಬಿಯಾಂಕ ಇವರೊಂದಿಗಿನ ಸುಖೀ ಬಾಳು ಇವರದು .ಇವರು ಪ್ರಾರಂಭಿಕ ಹಂತದಲ್ಲಿ ಸೌಂದರ್ಯ ತಜ್ಞೆ ಯಾಗಿ ಕೆಲಸ ಮಾಡುತ್ತಾ ಉತ್ತಮ ಸೌಂದರ್ಯ ತಜ್ಞೆ ಎಂದೇ ಹೆಸರು ಪಡೆದಿದ್ದರು. ಬಳಿಕ ವ್ಯಕ್ತಿಗಳೊಳಗಿನ ಸುಪ್ತ ಪ್ರತಿಭೆಗಳನ್ನು ಹೊರಗೆಳೆಯುವ ಉದ್ದೇಶದಿಂದ ಆರಂಭಗೊಂಡ ನಡುಮನೆ ಸಾಹಿತ್ಯ ಸಂವಾದ ವೇದಿಕೆ ಹಾಗೂ ಸುಹಾಸಂ ಸಂಘಟನೆಯ ವೇದಿಕೆ ಇವೆರಡನ್ನೂ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ತಮ್ಮಲ್ಲಿ ಇದ್ದಂತಹ ಹಾಸ್ಯಪ್ರಜ್ಞೆಯನ್ನೂ ನಗಿಸುವ ಕಲೆಯನ್ನು ಬೆಳಕಿಗೆ ತಂದು, ಈಗ ಎಲ್ಲೆಡೆ ಜನಪ್ರಿಯ ಹಾಸ್ಯ ಭಾಷಣಕಾರ್ತಿಯಾಗಿ ಮೂಡಿಬಂದಿದ್ದಾರೆ.ಸಿಕ್ಕ ಅವಕಾಶಗಳಿಗೆ ನ್ಯಾಯವನ್ನು ಒದಗಿಸುತ್ತಾ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ.  ದೇಶ ವಿದೇಶಗಳಲ್ಲೂ ತಮ್ಮ ಮಾತಿನ ವರಸೆಯನ್ನು ಪರಿಚಯಿಸುತ್ತಾ, ಸುಮಾರು ಹದಿನೈದು ವರ್ಷಗಳಲ್ಲಿ ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡುತ್ತಾ ಯಶಸ್ವಿಯಾಗಿ ತಮ್ಮ ಹಾಸ್ಯಭಾಷಣ ದ ಪಯಣವನ್ನು ಮುನ್ನಡೆಸಿದ್ದಾರೆ. ಹಬ್ಬ ಹರಿದಿನಗಳ ಸಾರ್ವಜನಿಕ ಕಾರ್ಯಕ್ರಮಗಳು.. ರೋಟರಿ ಲಯನ್ಸ್ ಜೆಸಿ ಸಂಘಟನೆಗಳು ಹಾಗೂ ಅನೇಕ ಮಹಿಳಾ ಸಂಘಟನೆಗಳಂತಹ ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಪ್ರಮುಖ ಭಾಷಣಕಾರರಾಗಿ ಇವರ ಕಾರ್ಯಕ್ರಮಗಳು ಜನಪ್ರಿಯ ವಾಗಿವೆ.ಉಡುಪಿಯ ರಥಬೀದಿ ಗೆಳೆಯರು ಸಂಘಟನೆ, ತುಳುಕೂಟ, ಸುಹಾಸಂ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ರಂಗಭೂಮಿ, ನಡುಮನೆ ಇಂಥ ಪ್ರತಿಷ್ಠಿತ ಸಂಘಟನೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಸುಹಾಸಂ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಲ್ಲಿ ಉಪಾಧ್ಯಕ್ಷೆಯೂ ಆಗಿರುತ್ತಾರೆ. ಈ ಸಮಯದಲ್ಲಿ ಅವರ ಲಲಿತ ಪ್ರಬಂಧ ‘ಮುಸ್ಸಂಜೆಯಲ್ಲೊಂದು ಮುಂಜಾವು’ ಪುಸ್ತಕ ಬಿಡುಗಡೆಗೊಳ್ಳಲಿದ್ದು, ತಾನು ಕಂಡ ವಿಷಯಗಳನ್ನು ಬರೆಯುವ ತುಡಿತವಿದ್ದು ಇವರ ಲಘುದಾಟಿಯ ಬರಹಗಳು ತಾವು ಹತ್ತಿರದಿಂದ ಕಂಡ ವ್ಯಕ್ತಿಗಳ ವಿಶೇಷಗಳು ಹಾಗೆ ತಮ್ಮ ಹುಟ್ಟೂರು, ಬಂಧು, ಬಳಗ, ಆತ್ಮೀಯರು, ಹುಟ್ಟೂರಿನ ವಿಶೇಷಗಳು ಹೀಗೆ ತಮ್ಮ ಮನಸ್ಸಿಗೆ ಮುದ ನೀಡಿದ ಅನೇಕ ವಿಚಾರಗಳನ್ನು ಬರವಣಿಗೆಗೆ ಇಳಿಸಿರುವುದೇ ಈ ಪುಸ್ತಕ ಮೂಡಿಬರಲು ಕಾರಣವಾಗಿದೆ.ಇದರಲ್ಲಿ ಬಂದಂತಹ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವೂ ಆಗಿವೆ.ಸಾಮಾಜಿಕ ಜಾಲ ತಾಣಗಳಲ್ಲೂ ಇವರ ಬರವಣಿಗೆಗಳು ಬಹಳ ಮೆಚ್ಚುಗೆಯನ್ನು ಪಡೆಯುತ್ತಿವೆ. ಒಟ್ಟಾರೆಯಾಗಿ ಇವರ ಯಶಸ್ಸಿಗೆ ಮುಖ್ಯ ಕಾರಣ ಪ್ರೊಫೆಶನಲಿಸಮ್. ನಿಂತ ನೀರಾಗದೆ ಏನಾದರೂ ಮಾಡುತ್ತಲೇ ಇರಬೇಕು. ಸದಾ ಕ್ರಿಯಾಶೀಲರಾಗಿ ಇರಬೇಕು ಎನ್ನುವ ತುಡಿತ ಹಾಗೂ ಹಠ.

ಅರವತ್ತರ ಸಡಗರದಲ್ಲಿರುವ ಸಂಧ್ಯಾ ಶೆಣೈ ಅವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರ ಸಹಕಾರದಲ್ಲಿ ನಾಡಿದ್ದು ಭಾನುವಾರ ಅಭಿನಂದಿಸಲಿರುವುದು ಶ್ಲಾಘನೀಯ. ಯಶಸ್ಸಿನ ಮೆಟ್ಟಿಲುಗಳನ್ನು ಅವರು ಏರುತ್ತಲೇ ಇರಲಿ ಎಂಬ ಶುಭ ಹಾರೈಕೆ ಅವರ ಅಭಿಮಾನಿಗಳದ್ದು.

~ರವಿರಾಜ್ ಹೆಚ್ ಪಿ, 9845240309

 
 
 
 
 
 
 
 
 
 
 

Leave a Reply