ಸಂಕ್ರಾಂತಿಯ ಬಗ್ಗೆ ನಾವು ನಮ್ಮ ಮಕ್ಕಳಿಗೆ ಹೇಳಬಹುದಾದದ್ದೇನು?~ರೋಹಿತ ಚಕ್ರತೀರ್ಥ

ಮೊದಲನೆಯದಾಗಿ ಇದೊಂದು ಹಿಂದೂ ಹಬ್ಬ ಮಾತ್ರವಲ್ಲ, ಅತ್ಯಂತ ವೈಜ್ಞಾನಿಕ (ಈಗಿನ “ಸೈಂಟಿಫಿಕ್” ಎಂಬ ಅರ್ಥದಲ್ಲಿ) ತಳಹದಿಯ ಮೇಲೆ ಬೆಳೆದುಬಂದಿರುವ ಒಂದು ಹಿಂದೂ ಹಬ್ಬ ಕೂಡ (ಹಾಗೆ ನೋಡಿದರೆ ನಾವು ಆಚರಿಸುವ ಬಹುತೇಕ ಎಲ್ಲ ಹಬ್ಬಗಳ ಹಿಂದೆಯೂ ಒಂದಲ್ಲ ಒಂದು ಸೈಂಟಿಫಿಕ್ ಥಿಂಕಿಂಗ್ ಇದೆ, ಆ ವಿಷಯವನ್ನು ಮತ್ಯಾವಾಗಾದರೂ ಚರ್ಚೆ ಮಾಡೋಣ).

#ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ವಿಶೇಷವಾದ ಚಲನೆ, ದಾಟುವುದು ಎಂದರ್ಥ. ವರ್ಷದಲ್ಲಿ ಹನ್ನೆರಡು ಸಂಕ್ರಾಂತಿ ಇವೆ; ಪ್ರತಿ ತಿಂಗಳೂ ಒಂದು ಸಂಕ್ರಾಂತಿ ಬರುತ್ತದೆ. ಮಕರದ್ದಕ್ಕೇಕೆ ಅಷ್ಟು ಮಹತ್ವ? ಯಾಕೆಂದರೆ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವ ಸಮಯಕ್ಕೆ ಸರಿಯಾಗಿ ಆತನ ಉತ್ತರಮುಖೀ ಚಲನೆ ಕೂಡ ಪ್ರಾರಂಭವಾಗುತ್ತಿತ್ತು.

ಸೂರ್ಯ ತನ್ನ ದಕ್ಷಿಣ ದಿಕ್ಕಿನೆಡೆಗಿನ ಪಯಣವನ್ನು ಕೊನೆಗೊಳಿಸಿ, ಮತ್ತೆ ಉತ್ತರದ ಕಡೆ ತಿರುಗುವ ದಿನವನ್ನೇ ನಾವು ಉತ್ತರಾಯಣ ಪ್ರಾರಂಭ ಎಂದು ಗುರುತಿಸುವುದು. ಅದಾಗುವು ದಕ್ಕೂ, ಆಕಾಶದಲ್ಲಿ ಆತ ಮಕರ ಎಂಬ ರಾಶಿಗೆ ಪ್ರವೇಶ ಮಾಡುವುದಕ್ಕೂ ಸರಿಹೋಗುತ್ತಿದ್ದು ದರಿಂದ ಮಕರ ಸಂಕ್ರಾಂತಿ ವಿಶೇಷ ಗೌರವ ಪಡೆದುಕೊಂಡಿತು (ಹಾಗಾಗಿಯೇ ಆತ ಮುಟ್ಟುವ – ಭೂಮಿಯ ಮೇಲಿನ – ಕಾಲ್ಪನಿಕ ವೃತ್ತಕ್ಕೂ ಮಕರವೃತ್ತ ಎಂಬ ಹೆಸರು ಬಂತು.

ಈ ವೃತ್ತ ಲ್ಯಾಟಿನ್ ಅಮೆರಿಕ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯಗಳನ್ನು ಹಾದುಹೋಗುತ್ತದೆ. ಈ ವೃತ್ತದಾಚೆಗೆ ಸೂರ್ಯನ ಕಿರಣಗಳು ಭೂಮಿಯ ಮೇಲೆ ನೇರವಾಗಿ ಬೀಳುವುದಿಲ್ಲ. ವಾರೆಕಿರಣ ಗಳಷ್ಟೇ ಬೀಳುತ್ತವೆ).

ಆದರೆ ಇಂದು ಈ ಎರಡೂ ಘಟನೆಗಳು ಜರುಗುತ್ತಿರುವುದು ಬೇರೆ ಬೇರೆ ದಿನಗಳಲ್ಲಿ. ಉತ್ತರಾಯಣದ ಪ್ರಾರಂಭ ಡಿಸೆಂಬರ್ 22ರಂದು. ಅಂದಿನಿಂದಲೇ ಸೂರ್ಯ ಉತ್ತರಮುಖಿ. ಮಕರರಾಶಿಪ್ರವೇಶ ಮಾತ್ರ ಎಂದಿನಂತೆ ಜನವರಿ 14ರಂದು ಸಂಭವಿಸುತ್ತಿದೆ. ಹಾಗಾಗಿ ನಾವು ಇಂದು ಜನವರಿ 14ರಂದು ಆಚರಿಸುತ್ತಿರುವುದು ಸೂರ್ಯನ ಮಕರ ಪ್ರವೇಶದ ಉತ್ಸವವನ್ನೇ ಹೊರತು ಉತ್ತರಾಯಣದ ಸಂದರ್ಭವನ್ನು ಅಲ್ಲ. ಈ ಸಂಗತಿ ಹೇಳಿದರೆ ಯಾರೊಬ್ಬ ಸಂಪ್ರದಾಯವಾದಿಯೂ ನನ್ನ ಮೇಲೆ ಕೋಪಿಸಿಕೊಳ್ಳಬಾರದು.

“ಮಕರ ಸಂಕ್ರಾಂತಿಯ ದಿನ ಪ್ರಥಮ ಸೂರ್ಯರಶ್ಮಿ ಗರ್ಭಗುಡಿಯ ಮೂಲವಿಗ್ರಹದ ಮೇಲೆ ಬೀಳುತ್ತದೆ” ಎಂದು ಯಾವೆಲ್ಲ ದೇವಸ್ಥಾನಗಳಲ್ಲಿ ಹೇಳಲಾಗುತ್ತದೋ ಆ ಎಲ್ಲ ದೇವಸ್ಥಾನಗಳೂ ಕಳೆದ ಐವತ್ತು ವರ್ಷಗಳಿಂದೀಚೆಗೆ ಕಟ್ಟಲ್ಪಟ್ಟದ್ದಿರಬೇಕು. “ಈ ದೇವಸ್ಥಾನ ಕಟ್ಟಲ್ಪಟ್ಟು ಸಾವಿರ ವರ್ಷ ಆಗಿದೆ, ಎರಡು ಸಾವಿರ ವರ್ಷ ಆಗಿದೆ…” ಎಂದೆಲ್ಲ ಹೇಳಿಕೊಳ್ಳುವ ಯಾವ ದೇವಸ್ಥಾನ ದಲ್ಲೂ ಈ ಪವಾಡ ನಡೆಯಲು ಸಾಧ್ಯವಿಲ್ಲ.

ಯಾಕೆಂದರೆ ಉತ್ತರಾಯಣದ ಮೊದಲ ಸೂರ್ಯಕಿರಣ ಗರ್ಭಗುಡಿಯ ವಿಗ್ರಹದ ಮೇಲೆ ಬೀಳು ವಂತೆ ರಚನೆ ಮಾಡಲ್ಪಟ್ಟಿರುವ, ಸಾವಿರ ವರ್ಷ ಹಳೆಯ ದೇವಸ್ಥಾನದಲ್ಲಿ ಈಗ ಆ ಪವಾಡ/ಅದ್ಭುತ ಡಿಸೆಂಬರ್ ಕೊನೆಯ ವಾರದಲ್ಲೆಲ್ಲ ನಡೆದುಹೋಗುತ್ತದೆ.

ಹೆಚ್ಚುಕಡಿಮೆ ಪ್ರತಿ 70 ವರ್ಷಗಳಿಗೆ ಉತ್ತರಾಯಣ ನಮ್ಮ “ಕ್ಯಾಲೆಂಡರ್” ಅಥವಾ “ಪಂಚಾಂಗ” ಗಳಲ್ಲಿ ಒಂದೊಂದು ದಿನ ಹಿಂದಕ್ಕೆ ಹೋಗುತ್ತಿರುತ್ತದೆ (ಕ್ಯಾಲೆಂಡರಿನಲ್ಲಿ ಓಕೆ, ಪಂಚಾಂಗ ದಲ್ಲೂ??  ಹೌದು. ಪಂಚಾಂಗಗಳಲ್ಲಿ ದೃಗ್ಗಣಿತ ಕೈಬಿಟ್ಟು, ಬೀಜಪರಿಷ್ಕರಣೆ ಮಾಡದೆ, ಹಳೆಯ ಗಣಿತದ ಮೂಲಕವೇ ಲೆಕ್ಕಾಚಾರ ನಡೆಯುತ್ತಿರುವುದರಿಂದ ಈ ದುರಂತ. ಪಂಚಾಂಗಗಳು ಕಾಲಕಾಲಕ್ಕೆ ಪರಿಷ್ಕಾರವಾಗಬೇಕು; ಲೆಕ್ಕ ಸರಿಪಡಿಸಿಕೊಳ್ಳಬೇಕು ಎಂದು ವರಾಹಮಿಹಿರರು ಹೇಳಿದ್ದಾರೆ, ನಾವು ಮರೆತಿದ್ದೇವೆ).

ಇನ್ನು 30 ವರ್ಷಗಳಾದ ಮೇಲೆ ಉತ್ತರಾಯಣ ಗ್ರಿಗೊರಿಯನ್ ಕ್ಯಾಲೆಂಡರಿನ ಡಿಸೆಂಬರ್ 21ಕ್ಕೇ ನಡೆದುಹೋಗುತ್ತದೆ. (ಇದು ಯಾಕೆ ಹೀಗೆ? ಉತ್ತರಾಯಣ ಯಾಕೆ ಹಾಗೆ ಹಿಂದೆ ಹಿಂದೆ ಹೋಗ ಬೇಕು? ಮಕರ ಸಂಕ್ರಾಂತಿ ಮಾತ್ರ ಯಾಕೆ “ಸ್ಥಿರ”ವಾಗಿದೆ? ಇದನ್ನೆಲ್ಲ ವಿವರಿಸಲು ಒಂದು ಉಪನ್ಯಾಸವೇ ಬೇಕಾದೀತು. ಅಸಲಿಗೆ ಮಕರ ಸಂಕ್ರಾಂತಿ ಕೂಡ ಸ್ಥಿರವಲ್ಲ.

ಇನ್ನು ಕೆಲವು ಸಾವಿರ ವರ್ಷಗಳು ಕಳೆವಷ್ಟರಲ್ಲಿ ಅದೂ ಒಂದು ದಿನ ಆಚೀಚೆ ಆಗುತ್ತದೆ. ಇದಕ್ಕೆಲ್ಲ ಕಾರಣ ಭೂಮಿಯ ಒಂದು ವಿಚಿತ್ರವಾದ ಚಲನೆ ಎಂಬುದೇ ಸದ್ಯಕ್ಕೆ ಸಂಕ್ಷಿಪ್ತ ಉತ್ತರ.)

ಭಾರತದ ಎಲ್ಲ ದೇವಾಲಯಗಳ ರಚನೆಗೂ ಸೂರ್ಯನಿಗೂ ಅವಿನಾಭಾವ ಸಂಬಂಧವಿದೆ. ಕೆಲವು ದೇವಸ್ಥಾನಗಳಲ್ಲಿ ಉತ್ತರಾಯಣದ ಪ್ರಥಮರಶ್ಮಿ ಗರ್ಭಗುಡಿಯ ಮೇಲೆ ಬೀಳುವಂತೆ ಅಣಿ ಗೊಳಿಸಿದರೆ ಇನ್ನು ಕೆಲ ದೇವಾಲಯಗಳಲ್ಲಿ ವರ್ಷದ ಬೇರೆ ಬೇರೆ ವಿಶೇಷ ದಿನಗಳಂದು ಪ್ರಥಮ ಸೂರ್ಯರಶ್ಮಿ ಗರ್ಭಗುಡಿಯ ಮೇಲೆ ಬೀಳುವಂತೆ ರಚನೆ ಮಾಡಿದರು (ಶಿಲ್ಪಶಾಸ್ತ್ರದಲ್ಲಿ ಹೀಗೊಂದು ವಿಧಿಯೇ ಇದೆ. ದೇವಸ್ಥಾನವನ್ನು ಸಾಂಪ್ರದಾಯಿಕವಾಗಿ ಶಿಲ್ಪಶಾಸ್ತ್ರರೀತ್ಯಾ ನಿರ್ಮಿಸುವಾಗ ಈ ನಿಯಮ/ವಿಧಿಯನ್ನು ಮೀರುವಂತಿಲ್ಲ).

ಸಂಕ್ರಾಂತಿಯ ಸಮಯದಲ್ಲಿ ನಮ್ಮ ಮಕ್ಕಳಿಗೆ, ಸಾಧ್ಯವಾದರೆ, ಹಿಂದೂ ಧರ್ಮದ ಪ್ರಾಚೀನತೆಯ ಬಗ್ಗೆ ಹೇಳಿ. ಪ್ರಾಚೀನದಲ್ಲೇ ನಮ್ಮವರು ಹೇಗೆ ಸೂರ್ಯನ ಉತ್ತರ-ದಕ್ಷಿಣ ಚಲನೆಯನ್ನೂ ಲೆಕ್ಕಹಾಕಿದ್ದರೆಂಬುದರ ಬಗ್ಗೆ ಹೇಳಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗೆ ಬೀಜಕ್ಷೇಪ ಮಾಡಿ. ನಮ್ಮ ದೇವಸ್ಥಾನಗಳ ವಾಸ್ತುವಿನ್ಯಾಸದ ಬಗ್ಗೆ ಮಕ್ಕಳಿಗೆ ಸರಿಯಾದ ತಿಳಿವಳಿಕೆ ಕೊಡಿ.

ಹೇಗೆ ಒಂದೊಂದು ದೇವಸ್ಥಾನ ಕೂಡ ಗಣಿತ-ವಿಜ್ಞಾನ-ತಂತ್ರಜ್ಞಾನದ ಸಂಗಮವಾಗಿತ್ತೆಂಬುದನ್ನು ಸಾಧ್ಯವಾದಷ್ಟು ಸ್ಪಷ್ಟವಾಗಿ, ಕೇವಲ ಭ್ರಮೆ-ವಿಸ್ಮಯಗಳಿಗೆ ಅವಕಾಶವಿಲ್ಲದಂತೆ ಹೇಳಿಕೊಡಿ. ನಮ್ಮ ಹಬ್ಬಗಳು ಕೇವಲ ವಾಟ್ಸಾಪಿನ ಫಾರ್ವರ್ಡ್ ಸಂದೇಶಗಳಿಗೆ, ಕಡುಬು-ಒಬ್ಬಟ್ಟುಗಳಿಗೆ, ಸೀರೆ-ಧೋತಿ ಸೆಲ್ಫಿಗಳಿಗೆ, ಸೆನ್ಸೇಶನಲ್ ಟಿವಿ ನ್ಯೂಸುಗಳಿಗೆ ಸೀಮಿತವಾಗದಿರಲಿ. ಒಂದೊಂದು ಹಬ್ಬವೂ ನಮ್ಮ ಸನಾತನ ಕಣ್ಣುಗಳನ್ನು ಇಷ್ಟಿಷ್ಟು ಹೆಚ್ಚು ತೆರೆಯಲಿ.

 
 
 
 
 
 
 
 
 
 
 

Leave a Reply