ರಕ್ಷಾಬಂಧನ‌:ಭ್ರಾತೃ-ಭಗಿನಿ ಬಾಂಧವ್ಯ ಬಂಧನ/ಉಪಾಕರ್ಮ:ಜ್ಞಾನ ಪೂರಕ        

 ಸಹೋದರ – ಸಹೋದರಿ‌ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ ‘ರಕ್ಷಾಬಂಧನ’ . ‘ಸಹಭವ’ರಲ್ಲಿ ಬದ್ದವಾಗಿರುವ ಬಂಧವೇ ಸಾರ್ವತ್ರಿಕವಾಗುತ್ತಾ ಸಮಾಜದಲ್ಲಿ ಸರ್ವವ್ಯಾಪಿಯಾಗುವಷ್ಟು ಅರಳುವ , ದೇಶದಾದ್ಯಂತ ವ್ಯಾಪಿಸುವ  ಆಚರಣೆಯೇ ‘ರಕ್ಷಾಬಂಧನ”, ಇದು ಭಾರತೀಯ ಸಂಸ್ಕೃತಿಯ ಸೊಗಸು.  ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ  “ರಾಖಿ” ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯತೆ. ಇದೇ ‘ಭ್ರಾತೃ – ಭಗಿನಿ ಬಾಂಧವ್ಯ ಬಂಧನ’.
“ಪರನಾರಿ ಸೋದರ” ಇದೊಂದು ಪ್ರತಿಜ್ಞೆಯಾಗಿ ಪುರಾಣಗಳಲ್ಲಿ ದೇಶದ ಇತಿಹಾಸದಲ್ಲಿ ಕಾಣಸಿಗುವ ಒಂದು ರೋಚಕ ಸ್ವೀಕಾರ . ಇದು ಒಂದು “ಮೌಲ್ಯ”ವಾಗಿ ಆಚರಿಸಲ್ಪಟ್ಟು ‘ಸಂದೇಶ’ವಾಗುವ ಶೈಲಿ ನಮ್ಮ ನೆಲದ ವ್ಯಕ್ತಿತ್ವಗಳ ಹೃದಯಶ್ರೀಮಂತಿಕೆ . ನಡೆದುಹೋದ ಸಂಗತಿ, ವರ್ತ ಮಾನದ ಆಚಾರ – ವಿಚಾರ ,ಭವಿಷ್ಯಕ್ಕೆ ಮುಂದುವರಿಯುವ “ಬಾಂಧವ್ಯ ಬಂಧನ‌” . ಇಂತಹ ಸಂಸ್ಕಾರಗಳು ನಮ್ಮ ಬದುಕಿನ ಕ್ರಮಕ್ಕೆ , ಮನಸ್ಸಿನ ಆಲೋಚನೆಗಳಿಗೆ ಪ್ರತ್ಯಕ್ಷ ಸಾಕ್ಷಿ . ಇಂತಹ ನೂರಾರು ಮೌಲ್ಯಗಳಲ್ಲಿ ‘ರಕ್ಷಾಬಂಧನ’ ಒಂದು. ದೇಶದಲ್ಲಿ ನೆರವೇರುವ “ರಾಖೀ” ಅತ್ಯಂತ ಜನಪ್ರಿಯ ನಡವಳಿಕೆ .
ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ತಮ್ಮ ಸಹೋದರರಿಗೆ ಸಹೋದರಿಯರು ರಾಖೀ ಕಟ್ಟುವ ಮೂಲಕ ‘ನಮ್ಮ ಮಾನ – ಪ್ರಾಣ ಉಳಿಸುವ ಹೊಣೆ ನಿಮ್ಮದು’ ಎಂದು ನೆನಪಿಸುತ್ತಾರೆ. ಉಡುಗೊರೆ ಪಡೆ ಯುತ್ತಾರೆ . ರಾಖೀ ಕಟ್ಟುವ  ಸಿಹಿ ತಿನ್ನಿಸಿ – ತಿನ್ನುವ ,ಉಡುಗೊರೆ ಪಡೆಯುವ ಈ ಭಾವನಾತ್ಮಕ ಪರ್ವದಿನವು ಮನೆಯೊಳಗೆ ಒಡಹುಟ್ಟಿದ ಸಹೋದರ – ಸಹೋದರಿಯರ ನಡುವೆ ಸಂಭ್ರಮಿಸುವುದಿಲ್ಲ ಬದಲಿಗೆ ದೇಶ ದಾದ್ಯಂತ ವಿಜೃಂಭಿಸುತ್ತಿದೆ . ಸಹಭವರಾಗ ಬೇಕಿಲ್ಲ,  ಅಂತಹ ‘ಪವಿತ್ರ ಭಾವಸ್ಪುರಣೆ’ ಸಾರ್ವತ್ರಿಕವಾಗುತ್ತಿ ರುವುದು ನಮ್ಮ ಸಾಂಸ್ಕೃತಿಕ ಭವ್ಯತೆ .
   
‌‌‌‌| ಸಹೋದರ ಭಾವದ ವೈಶಾಲ್ಯತೆ |
‌‌ಒಡಹುಟ್ಟಿದವರೊಂದಿಗೆ ಸಮಾಜದ ‘ಸ್ತ್ರೀ’ಯರೆಲ್ಲ  ತನ್ನ ಸೋದರಿಯರು ಎಂಬ‌ ಉದಾತ್ತ ಭಾವ ದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ “ರಾಖೀಬಂಧನ” ಇಂಬು ಕೊಡುತ್ತದೆ . ಅನಿವಾರ್ಯ ಆಪತ್ಕಾಲದಲ್ಲಿ ಯಾವಳೇ ಸ್ತ್ರೀಯ ಮಾನ – ಪ್ರಾಣಗಳ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವ  ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಃಸ್ಥಿತಿ ಏರ್ಪಡಲು ರಕ್ಷಾಬಂಧನ – ರಾಖೀಬಂಧನ ಆಚರಿಸಲ್ಪಡುತ್ತದೆ. ‘ರಕ್ಷಾ ಬಂಧನ’ಕ್ಕೆ ಮೀಸಲಾದ ದಿನ ಶ್ರಾವಣದ ಹುಣ್ಣಿಮೆ . ಪ್ರತಿ ಹುಣ್ಣಿಮೆಯೂ ಚಂದ್ರ ಪೂರ್ಣ ವೃದ್ಧಿಯೊಂದಿಗೆ ರಾರಾ ಜಿಸುವ ದಿನ. ಚಂದ್ರ ಮನಃಕಾರಕ ನಾದುದರಿಂದ, ಹುಣ್ಣಿಮೆಯೇ ಮನಸ್ಸಿನ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುವ ಕಾಲವಾಗಿರುವುದರಿಂದ  ಮನಸ್ಸಿನ ಭಾವ ಸಂಬಂಧಿಯಾದ ನಿರ್ಧಾರಕ್ಕೆ ಸಕಾಲವೆಂದು ತಿಳಿಯ ಬಹುದಲ್ಲ. ಶ್ರಾವಣ ಮಾಸವೂ ಒಂದು ಪ್ರೇರಣೆ ಸಹಜವಾಗಿ ಒದಗುವ ಶ್ರಾಯ. ನಾಡಿಗೆ ,ಬೀಡಿಗೆ ಬರುವ ಶ್ರಾವಣ ಮನಸ್ಸಿಗೆ ಬಾರದೆ ಇದ್ದೀತೆ ?,  ಅದೇ ಶ್ರಾವಣದ ಕವಿ ಬೇಂದ್ರೆಯವರ  “ಬಂತು ಶ್ರಾವಣ…” ಲವಲವಿಕೆ ತುಂಬಿದ ಉದ್ಗಾರ. ಇದೇ ಭಾವಗಳು ಬಿರಿಯುವ ,ಸುಗಂಧ ಬೀರುವ ಸುಸಮಯ.

ರಾಖೀ ಎಷ್ಟೇ ವೈವಿಧ್ಯದ್ದಾದರೂ ರಂಗುರಂಗಿನದ್ದಾದರೂ ಇದರ ಬಂಧನ ಪ್ರಕ್ರಿಯೆ ದಾರದ ಮೂಲಕ ತಾನೇ ? ಈ ದಾರ ಒಂದು ಕರ್ತವ್ಯಕ್ಕೆ, ಜವಾಬ್ದಾರಿಗೆ‌ ನಿಯೋಜಿಸಲ್ಪಟ್ಟ ಭಾವವನ್ನು ಮೂಡಿಸಿದರೆ ಆಚರಣೆಯ ಆಶಯ ನೆರ ವೇರಿದಂತೆ. ವ್ರತ , ಪೂಜೆ , ಮಹೋತ್ಸವ- ಮಹಾಯಾಗ ,ಮದುವೆ ಮುಂತಾದ ಉತ್ಸವಗಳು ನಿರ್ವಿಘ್ನ ವಾಗಿ ನೆರವೇರಲೆಂದು  ದೇವರಲ್ಲಿ ಪ್ರಾರ್ಥಿಸಿ ‘ಕಂಕಣಬಂಧ’ದಿಂದ ದೀಕ್ಷೆ ಸ್ವೀಕರಿಸುವ ವಿಧಿಯೊಂದು  ದೇಶದಲ್ಲಿ ರೂಢಿಯಲ್ಲಿದೆ. ದುಷ್ಟ ಶಕ್ತಿಗಳು ಸತ್ಕರ್ಮಗಳಿಗೆ ಆತಂಕ ಒಡ್ಡದಿರಲಿ ಎಂಬುದು ಇಲ್ಲಿಯ ‘ನಾಂದೀ’. ಸತ್ಕಾರ್ಯ ಆರಂಭದಿಂದ ಸಮಾರೋಪ ಪರ್ಯಂತ ಕಂಕಣಬಂಧ ಕಟ್ಟಿಸಿಕೊಳ್ಳುವವರು ದೀಕ್ಷಾಬದ್ಧರೆಂದು ಅರ್ಥ. ಅನ್ಯ ಕಾರ್ಯಗಳ ಬಗ್ಗೆ ಆಲೋಚಿಸದೆ ಸಂಪೂರ್ಣ ಸಂಕಲ್ಪಿತ ಸತ್ಕಾರ್ಯದಲ್ಲೇ ನಿರತರಾಗಿಬೇಕೆಂಬುದು ಉದ್ದೇಶ. 

ಜ್ಞಾನ ಪೂರಕ ಉಪಾಕರ್ಮ

‘ರಕ್ಷಾಬಂಧನ’ ಹಾಗೂ ‘ಉಪಾಕರ್ಮ’ ವಿಧಿಗಳಲ್ಲಿ ಒಂದು ಭಾವ ಸಂಬಂಧಿಯಾದರೆ ಮತ್ತೊಂದು ಜ್ಞಾನ ಶುದ್ಧಿ ಯನ್ನು ಎಚ್ಚರಿಸುವ ವಿಶಿಷ್ಟ ಆಚರಣೆಗಳು. ಸಿದ್ಧತೆ,ಯಜ್ಞೋಪವೀತ ಬದಲಾಯಿಸಿ ಹಾಕಿಕೊಳ್ಳುವುದು ಮುಂತಾದ ಅರ್ಥ ನಿಷ್ಪತ್ತಿಯ ಉಪಾಕರ್ಮವು ವಾರ್ಷಿಕ ಧಾರ್ಮಿಕ ವಿಧಿಯಾಗಿ ,ಕಟ್ಟುಪಾಡಾಗಿ ಯಜ್ಞೋಪವೀತ ಧರಿಸುವ ವರ್ಗಕ್ಕೆ ವಿಶಿಷ್ಟ ಆಚರಣೆ. ಶ್ರಾವಣ ಮಾಸದ ಹುಣ್ಣಿಮೆಯಂದು ಹಾಗೂ ಶ್ರಾವಣಮಾಸದಲ್ಲಿ ಸನ್ನಿಹಿತ ವಾಗುವ ಶ್ರವಣ ನಕ್ಷತ್ರ ದಂದು ಉಪಾಕರ್ಮ ನಡೆಯುತ್ತದೆ . ಋಗ್ವೇದ ,ಯಜುರ್ವೇದ ,ಸಾಮವೇದ ಶಾಖೆ ಗಳವರಿಗೆ ಪ್ರತ್ಯೇಕ ದಿನ ಗಳಲ್ಲಿ ಉಪಾಕರ್ಮ ಆಚರಿಸಲ್ಪಡುತ್ತದೆ .ಆದರೆ ಉಪಾಕರ್ಮದ ಉದ್ದೇಶ ಹಾಗೂ ನಿರ್ವಹಣೆಯು ಬಹುತೇಕ ಸಮಾನವಾಗಿಯೇ ಇದೆ . 

ಉಪನಯನ ಸಂಸ್ಕಾರದೊಂದಿಗೆ ವೇದಾಧ್ಯಯನದ ಅಧಿಕಾರವನ್ನು ಪಡೆಯುವ ವಟು ಗುರು ಕುಲಗಳಲ್ಲಿ ಮಾಘ ಮಾಸದಿಂದ ಆರುತಿಂಗಳು ವ್ಯಾಕರಣ , ಜ್ಯೋತಿಷ್ಯ ಮುಂತಾದುವುಗಳ ಅಧ್ಯಯನದಲ್ಲಿ ನಿರತನಿರುತ್ತಾನೆ. ಶ್ರಾವಣದಿಂದ ಮುಂದಿನ ಆರುತಿಂಗಳು ವೇದಾಧ್ಯಯನಕ್ಕೆ ಮೀಸಲಾಗಿರುತ್ತದೆ.ಆರು ತಿಂಗಳು ವೇದಾಧ್ಯಯನ ಮಾಡದಿರುವ ಕಾರಣಕ್ಕೆ ಪುನಃ ‘ವೇದಾಧ್ಯಯನದ ಅಧಿಕಾರ ಸಿದ್ಧಿ’ಗಾಗಿ ಉಪಾಕರ್ಮ ವಿಧಿ ನೆರವೇರುತ್ತದೆ. ಮತ್ತೊಂದು ತಿಳಿವಳಿಕೆಯಂತೆ ಕೃಷಿ ಸಂಬಂಧಿಯಾದ ಕೆಲಸಕಾರ್ಯಗಳಿಗಾಗಿ‌ ವೇದ ಅಧ್ಯಯನ -ಅಧ್ಯಾಪನ ಸ್ಥಗಿತಗೊಳ್ಳುತ್ತದೆ , ಕೃಷಿಕಾರ್ಯ ಮುಗಿದ ಬಳಿಕ ವೇದಾಧ್ಯಯನ ಮುಂದುವರಿಸಲು ಅಧಿಕಾರ ಸಿದ್ಧಿ ಗಾಗಿ ಉಪಾಕರ್ಮ.  ಬಹುಶಃ ಋಷಿಪರಂಪರೆ – ಗುರುಕುಲ ಪದ್ಧತಿಯಿದ್ದ ಕಾಲದಲ್ಲಿ ಇಂತಹ ಕ್ರಮ  ಇದ್ದಿರ ಬಹುದಾದುದನ್ನು ಒಪ್ಪಬಹುದು.
ಪುಣ್ಯಾಹ ,ಸಪ್ತ ಋಷಿಗಳ ಪೂಜೆ, ಉಪಾಕರ್ಮ ಹೋಮವನ್ನು ‘ದಧಿ’ ಮತ್ತು ‘ಸತ್ತು'(ಅರಳು)ಗಳ ಮಿಶ್ರಣದ ದ್ರವ್ಯದಿಂದ ಹಾಗೂ ಉತ್ಸರ್ಜನ ಹೋಮವನ್ನು ಚರು ದ್ರವ್ಯದಿಂದಲೂ ನಡೆಸಲಾಗುತ್ತದೆ. ಪ್ರಧಾನ ಹೋಮದ ಬಳಿಕ ಹೋಮದ್ರವ್ಯದ ಶೇಷ ಭಾಗವಾದ ‘ದಧಿ – ಸತ್ತು’ ಸ್ವೀಕರಿಸಿ ನೂತನ ಯಜ್ಞೋಪವೀತ ಧಾರಣೆ. ಬಳಿಕ ಬ್ರಹ್ಮಯಜ್ಞ ,ದೇವ, ಋಷಿ ,ಆಚಾರ್ಯ‌, ಪಿತೃ ತರ್ಪಣ (ಅಧಿಕಾರವುಳ್ಳವರು ಮಾತ್ರ)ಕೊಡುವುದು . ಹೀಗೆ ಉತ್ಸರ್ಜನೆಯಿಂದ ಮರಳಿ ವೇದಾಧ್ಯಯನ ಆರಂಭಿಸುವುದಕ್ಕೆ ಸಿದ್ಧತೆಯಾಗಿಯೂ, ಮಾನಸಿಕ , ದೈಹಿಕ ಶುದ್ಧಿ  ಗಾಗಿಯೂ ಈ ಕ್ರಿಯೆ ನಡೆಯುತ್ತದೆ ( ಋಗ್ವೇದ ಕ್ರಮ ). ವೇದ ಶಾಖೆಯನ್ನು ಆಧರಿಸಿ ಉಪಾಕರ್ಮ ವಿಧಿ ನಿರ್ವಹಣೆಯಲ್ಲಿ ವ್ಯತ್ಯಾಸ ಸಾಮಾನ್ಯವಾದುದು .ಪಾಠಾಂತರಗಳು ಬೇಕಾದಷ್ಟು ಇವೆ . ಆಕ್ಷೇಪ ಮತ್ತು ವಾದಕ್ಕೆ ಇದಕ್ಕಿಂತ ಪ್ರಶಸ್ತವಾದ ಕ್ಷೇತ್ರ ಬೇರೆ ಇಲ್ಲ. ಪುರೋಹಿತ ಪುರೋಹಿತರಲ್ಲಿ ಅನುಸಂಧಾನ ವ್ಯತ್ಯಾಸಗಳನ್ನು ಗಮನಿಸಲಾಗಿದೆ.
ಋಷಿ ಪೂಜೆ ಪ್ರಧಾನ .ಏಕೆಂದರೆ ವೇದ ಮಂತ್ರಗಳೆಲ್ಲವೂ ಋಷಿ ದ್ರಷ್ಟವಾದುದು . ಋಷಿದ್ರಷ್ಟವಾದ ಮಂತ್ರಗಳ ಅಧ್ಯಯನ – ಅಧ್ಯಾಪನಕ್ಕೆ ಋಷಿಗಳ ಅನುಗ್ರಹ ಪ್ರಾಪ್ತಿಗಾಗಿ ಋಷಿಪೂಜೆ . ಯಜ್ಞೋಪವೀತದ ಬದಲಾವಣೆ ಎಂಬುದು ಸಾಂಕೇತಿಕ.ಆದರೆ ಜ್ಞಾನದ ತಿಳಿವಳಿಕೆಗೆ ನಿರಂತರ ಜಾಗೃತಿ ಮೂಡಿಸುವ ಧಾರ್ಮಿಕ ವಿಧಿಯಾಗಿ ಉಪಾಕರ್ಮ. ಈ ವಿಧಿಯನ್ನು ಮತ್ತು ಯಜ್ಞೋಪವೀತವನ್ನು ಗಮನಿಸಿದರೆ ಯಜ್ಞೋಪವೀತದ ಉದ್ದ, ಎಳೆಗಳು ,ಇವುಗಳಿಗಿರುವ ಶಾಸ್ತ್ರಾಧಾರ ಮತ್ತು ಮಂತ್ರಗಳು , ಕರ್ಮಾಂಗಗಳು ಭವ್ಯ ಅಷ್ಟೇ ದಿವ್ಯ. ಉಪಾ ಕರ್ಮವು ಜ್ಞಾನದ ಉತ್ಕರ್ಷಕ್ಕಾಗಿ ಉಪಶ್ರುತವಾದ ವಿಧಿ .ಉಪಗ್ರಹಣದಿಂದ ಉತ್ಪನ್ನವಾಗುವ ಜ್ಞಾನವು ಸಮಾಜಕ್ಕೆ, ವಿಶ್ವಕ್ಕೆ ಕೊಡುಗೆಯಾದರೆ ಉಪಾಕರ್ಮ ಸಂಕುಚಿತವಾಗದೆ ವಿಶಾಲ ಅರ್ಥ ವ್ಯಾಪ್ತಿಯನ್ನು ಪಡೆದು ಮತ್ತಷ್ಟು ಗೌರವಾರ್ಹವಾದೀತು .
 
 
 
 
 
 
 
 
 
 
 

Leave a Reply