ಮಾರ್ಗದರ್ಶನ ನೀಡುವವರು ಇಲ್ಲದಿದ್ದರೆ ಏನಂತೆ? ಹೊಸ ದಾರಿಯನ್ನು ಹುಡುಕುತ್ತಾ ಧೈರ್ಯದಿಂದ ಮುನ್ನುಗ್ಗು, ದಾರಿ ತಾನಾಗೇ ಹುಟ್ಟಿಕೊಳ್ಳುತ್ತದೆ.. ಸ್ವಾಮಿ ವಿವೇಕಾನಂದರ ಅರ್ಥಪೂರ್ಣ ಸಾಲುಗಳಿವು.
ಕಷ್ಟಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತದೆಯೇ ಇವು ನಮ್ಮ ಹಿರಿಯರಿಂದ ಕೇಳಿ ಬರುತ್ತಿದ್ದ ಮಾತುಗಳು. ಅದೇ ಸತ್ಯ. ಬರುವ ಕಷ್ಟಗಳಿಗೆ ಮುಖಮಾಡಿ ಜೀವಿಸುವುದನ್ನು ಕಲಿತುಕೊಳ್ಳಿ. ಆಗ ಉತ್ಸಾಹ ಹೆಚ್ಚಿ ಆತ್ಮ ವಿಶ್ವಾಸ ಮೂಡುತ್ತದೆ. ಅದೆ ಕಷ್ಟಗಳಿಗೆ ಬೆನ್ನು ಮಾಡಿ ಓಡಿದರೆ ಕಿನ್ನತೆ, ಅನಾರೋಗ್ಯ ತಲೆಯೆತ್ತಿ ಆತ್ಮಹತ್ಯೆ ಅಂತಹ ಆಲೋಚನೆ ಬರುವ ಸಾಧ್ಯತೆ ಬಹಳ ಹೆಚ್ಚು.
ರೋಗ( ಮಾರಿ ) ಊರು ಪ್ರವೇಶ ಮಾಡಿ ಆಗಿದೆ. ಇನ್ನು ಉಳಿದಿರುವ ಒಂದೇ ಉಪಾಯ ಅದನ್ನು ಜಾಣ್ಮೆ ಹಾಗು ಧೈರ್ಯದಿಂದ ಎದುರಿಸುವುದು. ಸಾಂಕ್ರಾಮಿಕ ರೋಗಗಳು ತಲೆದೋರಿದಾಗ ರೋಗದ ಎದುರು ಗೆಲ್ಲುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ. ರೋಗದ ನಿರ್ಮೂಲನೆ ಹಾಗು ತಡೆಗಟ್ಟುವ ಮಾರ್ಗೋಪಾಯಗಳು ಕಂಡು ಕೊಳ್ಳೋಣ. ಜೊತೆಗೆ ಅಲ್ಲಿ ರೋಗಿಯ ವಿರುದ್ಧ ಮಾನವೀಯತೆ ಮರೆತು ಹೋಗದಿರಲಿ.
ರೋಗದ ಸಂದರ್ಭ ಮನಸುಗಳ ನಡುವೆ ಭಾವನೆಗಳ ನಡುವೆ ಅಂತರ / ಬೇದ ಬೇಕಾಗಿಲ್ಲ. ದೇಹಗಳ ನಡುವೆ ಅಂತರವಿಡೋಣ. ಅತಿ ಆತಂಕ ಬೇಡ . ಇಲ್ಲಿ ಊರಿಗೆ ಬಂದ ಮಾರಿ ಮನೆಗೆ ಬರದ ಹಾಗೆ ನೋಡಿಕೊಳ್ಳುವ ಅತಿ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ವಿದ್ಯಾವಂತರು, ಅವಿದ್ಯಾವಂತರು ಎಂಬ ಬೇಧ ಇಲ್ಲಿ ಇಲ್ಲ. ಎಲ್ಲರೂ ಸಮಾನ ಮನಸ್ಕ ರಾಗಿ ಒಳಗೂ-ಹೊರಗೂ ಇಲ್ಲಿ ಹೋರಾಟ ಮಾಡಬೇಕಾಗಿದೆ.
ನಿಮ್ಮ ಆರೋಗ್ಯ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ. ಆರೋಗ್ಯದ ರಕ್ಷಣೆ ನಮ್ಮ ಜವಾಬ್ದಾರಿಯೂ ಹೌದು. ಅದನ್ನು ಕಾಪಾಡಿಕೊಳ್ಳಿ ಅಂತೆ-ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವಂತೆ ನಡೆದುಕೊಳ್ಳಬೇಡಿ. ಅದಕ್ಕೆ ಬೆಲೆ ತರಬೇಕಾಗಿ ಬರಬಹುದು ಎಚ್ಚರ.
ಗಾಳಿಗೆ ಆರುವುದೆಂದು ದೇವರಿಗೆ ದೀಪ ಹಚ್ಚಿದೆ ಬಿಡುತ್ತೇವೆಯೇ? ಇಲ್ಲ ತಾನೇ, ಅದೇ ರೀತಿ ವಿಶ್ವಾಸವೆಂಬುದು ದೇವರ ಮೇಲೆ ಮಾತ್ರವಲ್ಲ, ದೇವರೆಂಬ ಈ ನಮ್ಮ ದೇಹ ಹಾಗೂ ಮನಸ್ಸಿನ ಮೇಲೆಯು ಇಡಿ. ಕಷ್ಟದ ಹಿಂದೆ ಸುಖ ಎಂದು ತಿಳಿದಿದೆ. ಆಪತ್ತು ಬಂದಕೂಡಲೇ ವಿಚಲಿತರಾಗದೆ ಆತ್ಮವಿಶ್ವಾಸದಿಂದ ಎದುರಿಸಿ. ಧೈರ್ಯ ದಿಂದ ಮನಸ್ಸು ಹೃದಯ ಪರಿಪಕ್ವಗೊಳಿಸಿ. ಶಾಂತತೆಯಿಂದ ಬಂದದ್ದನ್ನು ಬಂದಹಾಗೆ ಎದುರಿಸಿ ಗೆಲ್ಲೋಣ. ಸರ್ವೇ ಜನಃ ಸುಖಿನೋ ಭವಂತು.
~ ಪ್ರೀತಿ ಸನಿಲ್, ಕುತ್ಪಾಡಿ, ಉಡುಪಿ