ಕಿರಿಯರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಹಿರಿಯ ಚೇತನ…
ಹಿರಿಯರಲ್ಲಿ ಮಾತುಮಾತಿಗೆ ನಗು ಉಕ್ಕಿಸುವ ಮಗುವಿನ ಮನ…
ನಾಲ್ಕು ಗೆರೆ ಗೀಚಿದವರಿಗೂ ನೀನು ಮುಂದೆ ದೊಡ್ಡ ಸಾಹಿತಿ ಆಗುವೆ ಎಂಬ ಆಶೀರ್ವಾದ …
ಆ ಅಕ್ಕರೆ ಆ ಪ್ರೋತ್ಸಾಹವೇ ನಮ್ಮಂತಹ ಪುಟ್ಟಪುಟ್ಟ ಬರಹಗಾರರಿಗೆ ಪ್ರೇರಣೆಯಾಗಿದೆ ಸದಾ …
ಬೆಳಿಗ್ಗೆ ಬೇಗ ಅವರಿಂದ ದೂರವಾಣಿ ಕರೆ ಬಂತೆಂದರೆ ನಮ್ಮ ಮುಖ ದಿನಪತ್ರಿಕೆಯಲ್ಲೋ, ಇಲ್ಲ ನಮ್ಮ ಬರಹ ಎಲ್ಲೋ ಅಚ್ಚಾಗಿದೆ ಎಂಬುದು ಖಾತ್ರಿ ..
ಎಲ್ಲರಲ್ಲೂ ನಗುನಗುತ್ತ ಮಾತನಾಡುವ, ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವ ನೀವು ನಮಗೊಂದು ಅಚ್ಚರಿ …
ಸಿಕ್ಕವರಲ್ಲಿ ಕನ್ನಡ ಪುಸ್ತಕ ಓದುವಿರಾ ಎಂದೆನ್ನುತ್ತಾ ಹೌದು ಎಂದರೆ ಖುಷಿಯಾಗಿ ಅವರಿಗೊಂದು ಪುಸ್ತಕದ ಉಡುಗೊರೆ..
ಇಲ್ಲ ಅಂದರೂ ಅವರಿಗೂ ಒಂದು ಹೊತ್ತಗೆ ಕೊಟ್ಟು ಒಮ್ಮೆ ಓದಿ ಎಂಬ ಬೇಡಿಕೆಯ ಕರೆ …
ಅಷ್ಟು ಉದ್ದದ ಶರೀರವನ್ನು ಬಾಗಿಸಿಕೊಂಡು ಓಡಾಡಿದರೂ,ಈ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಹುಮ್ಮಸ್ಸು…
ತನ್ನ ಜೋಳಿಗೆಯಲ್ಲಿ ಸಾಲದೆಂಬಂತೆ ರಿಕ್ಷಾದಲ್ಲಿ ಅಂಚೆ ಕಚೇರಿಗೆ ಹೊತ್ತು ತಂದು ಪುಸ್ತಕ ಪ್ರೇಮಿಗಳಿಗೆ ಪುಸ್ತಕ ರವಾನಿಸುವ ದೊಡ್ಡ ಮನಸ್ಸು.,
ನಿಮ್ಮಿಂದ ಉಪಕೃತರಾದವರು, ಸಾಹಿತ್ಯಾಸಕ್ತಿ ಹೊಂದಿದವರು ಎಷ್ಟು ಮಂದಿಯೋ ನನ್ನ ಎಣಿಕೆಗೆ ಸಿಗದು ..
ಆದರೆ ನಾನು ನಿಮ್ಮನ್ನು ನನ್ನ ಸಾಹಿತ್ಯದ ಗುರುಗಳೆಂದು ಸ್ವೀಕರಿಸಿರುವೆ ಎಂದೆಂದು…
ಹಲವರ ಗೃಹದಲ್ಲಿ ರೂಪುಗೊಂಡಿದೆ ಪುಟ್ಟ ಪುಟ್ಟ ಗ್ರಂಥಾಲಯ ನಿಮ್ಮ ಪ್ರೋತ್ಸಾಹದಿಂದ…
ನಮ್ಮಂತಹ ನಡು ಹರೆಯದವರನ್ನು ಪುಟ್ಟಾ ಬಾಬು ಮಗು ಎಂದು ನೀವು ಕರೆಯುವುದನ್ನು ಕೇಳುವುದೇ ಚೆಂದ …
ನಮ್ಮ ಪ್ರೀತಿಯ ಕೂಗೋ ನಿಮ್ಮ ಈ ಎಂಭತ್ತನಾಲ್ಕರ ಸಂಭ್ರಮ ಶತಕವಾಗಲಿ..
ಇನ್ನಷ್ಟು ಪ್ರತಿಭಾವಂತರಿಗೆ ನಿಮ್ಮ ಸಲಹೆ ಸಹಕಾರ ಆಶೀರ್ವಾದ ಸಿಗಲಿ…
ಅಕ್ಷರಮಾತೆ ಸರಸ್ವತಿ, ಆರೋಗ್ಯ ನೀಡುವ ಧನ್ವಂತರಿ ಸದಾ ಅನುಗ್ರಹಿಸಲಿ ..
ಇನ್ನಷ್ಟು ಆರೋಗ್ಯ ಆಯಸ್ಸು ಆನಂದ ನೀಡಿ ನಿಮ್ಮನ್ನು ಸಲಹಲಿ….
~ಪೂರ್ಣಿಮಾ ಜನಾರ್ದನ್ ಕೊಡವೂರು