ಆದರೆ ಸರಳವಾಗಿ ಚಿಂತಿಸೋಣ. ನಮ್ಮ ಮನೆಯ ಮಾತು ಕನ್ನಡ. ನಮ್ಮ ಮಗು ಹುಟ್ಟಿದ ಕ್ಷಣದಿಂದ, ಅದನ್ನುದ್ದೇಶಿಸಿ ನಾವು ಆಡುವ ಮುದ್ದಿನ ನುಡಿಗಳು, ಹಾಡುವ ಲಾಲಿ ಹಾಡುಗಳು ಕನ್ನಡದಲ್ಲಿಯೇ ಇರುತ್ತವೆ. ನಾವು ಅದರೊಡನೆ ಸಂಭಾಷಿಸುವುದು ಕೂಡಾ ಕನ್ನಡದಲ್ಲಿ. ಇನ್ನು ಹುಟ್ಟಿದ ಪುಟ್ಟ ಮಗುವಿಗೆ ಯಾವುದೇ ವಿಷಯ ಅರ್ಥವಾಗುವುದು… ನೋಡುವುದರಿಂದ, ನೋಡಿದ್ದನ್ನು ಕೇಳುವುದರಿಂದ, ಕೇಳಿದ್ದನ್ನು ಅನುಕರಿಸುವುದರಿಂದ. ಹೀಗಾಗಿ, ದಿನನಿತ್ಯ ತಾನು ಕೇಳುವ ಮಾತೃಭಾಷೆಯ ಮೂಲಕ ತನ್ನ ಸುತ್ತ ಮುತ್ತಲಿನ ಪ್ರಪಂಚವನ್ನು ಮಗು ಅರ್ಥೈಸಿಕೊಳ್ಳುತ್ತಾ ಬೆಳೆಯುತ್ತದೆ.
ಮನೆಯೆ ತಾನೇ ಮೊದಲ ಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಮಗು, ತಾಯಿ ತಂದೆಯರನ್ನು, ಮನೆಯ ಇತರೆ ಸದಸ್ಯರನ್ನೂ, ಅವರ ನಡವಳಿಕೆಯನ್ನು ಗಮನಿಸುತ್ತಾ, ಅನುಕರಿಸುತ್ತಾ, ಅವರ ನಿರ್ದೇಶನಗಳನ್ನು ಪಾಲಿಸುತ್ತಾ ಕಲಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಭಾಷೆಯೇ ಮಾತೃಭಾಷೆ. ಇನ್ನು ಮುಂದಿನ ಹಂತದಲ್ಲಿ ಮಗು, ತನ್ನ ಸುತ್ತಲಿನ ಪರಿಸರ-ಸಮಾಜ, ಇವುಗಳನ್ನು ನೋಡುತ್ತಾ, ಅಕ್ಕಪಕ್ಕದ ಜನರ, ನೆಂಟರಿಷ್ಟರ ನಡವಳಿಕೆಗಳನ್ನು ಗಮನಿಸುತ್ತಾ ಕಲಿಯುತ್ತದೆ. ಈ ಹಂತದಲ್ಲಿ ಮಗು ಬೆಳೆಯುವ ಪರಿಸರದ ಭಾಷೆ ಪ್ರಮುಖ ಸ್ಥಾನ ಪಡೆಯುತ್ತದೆ. ಅಂದರೆ ಕಲಿಕೆಯ ಮೊದಲ ಹಂತದಲ್ಲಿ ಮಗುವಿಗೆ, ಪ್ರಪಂಚ ಪರಿಚಯ – ಮಾತೃಭಾಷೆ ಮತ್ತು ಪಾರಿಸಾರಿಕ ಭಾಷೆಯಲ್ಲಿ ಆಗುತ್ತದೆ. ನಂತರದ ಹಂತವೇ ಶಾಲಾ ಪ್ರವೇಶ ಮತ್ತು ವ್ಯವಸ್ಥಿತ ವಾದ ಶಿಕ್ಷಣ ಪದ್ಧತಿಯ ಕಲಿಕಾ ಪ್ರಕ್ರಿಯೆಗೆ ಮಗು ಒಳಗಾಗುತ್ತದೆ.
1. ಮಕ್ಕಳಿಗೆ ಪ್ರಪಂಚದ ಪರಿಚಯ ಬಾಲ್ಯದಲ್ಲಿ ಆಗುವುದು ಅದರ ಮಾತೃಭಾಷೆಯಲ್ಲಿಯೆ. ಹೀಗಾಗಿ, ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡುವುದು ಅತ್ಯಂತ ಉತ್ತಮ ವಿಧಾನ. 2. ಪ್ರಾಥಮಿಕ ಹಂತದ ಶಿಕ್ಷಣ – ಪ್ರಪಂಚದ, ಪದಗಳ, ವಸ್ತುಗಳ ಪರಿಚಯವನ್ನು ನೀಡುವುದೇ ಆಗಿರುತ್ತದೆ. ಮಗು, ಈ ಎಲ್ಲವನ್ನೂ ಮೊದಲಬಾರಿಗೆ ತಿಳಿದು ಕೊಳ್ಳುತ್ತಿರುವುದರಿಂದ, ಅದು ಈಗಾಗಲೆ ಸ್ವಲ್ಪವಾದರೂ ತಿಳಿದಿರುವ ಭಾಷೆಯಲ್ಲಿ ತಿಳಿಸುವುದು ಸೂಕ್ತ. 3. ಮಗುವಿನ ಕಲಿಕೆ, ಪರಭಾಷೆಯಲ್ಲಾದರೆ, ಅದಕ್ಕೆ ಮಾತೃ ಭಾಷೆಯಲ್ಲಿ ಕಲಿಯಲು ಬೇಕಾಗುವ ಸಮಯದ ಸುಮಾರು ಏಳು ಪಟ್ಟು ಹೆಚ್ಚು ಸಮಯ ವ್ಯಯವಾಗುತ್ತದೆ.ಅಂದರೆ ವಾಸ್ತವದಲ್ಲಿ, ಮಾತೃಭಾಷೆಯಲ್ಲಿ ಚಿಂತಿಸಲು, ಯೋಚಿಸಲು ಆಗದ ಮಗು, ತನ್ನ ಕ್ರಿಯಾತ್ಮಕತೆಯನ್ನು ಕಳೆದುಕೊಳ್ಳುತ್ತದೆ.
ಕನ್ನಡ ಮಾಧ್ಯಮದಲ್ಲಿ ಕಲಿತ ಅನೇಕ ಸ್ನೇಹಿತರ ಒಂದು ಆತಂಕವೆಂದರೆ – ನಮಗೆ ಯೋಗ್ಯತೆ, ಜಾಣತನ ಎಲ್ಲಾ ಇದ್ದೂ ಕೇವಲ ಇಂಗ್ಲಿಷ್ ಭಾಷೆ ಬಾರದೆ ಹೋಗಿದ್ದಕ್ಕಾಗಿ ಅವಕಾಶವಂಚಿತರಾಗಬೇಕಾಯ್ತು. ನಮ್ಮ ಮಕ್ಕಳಿಗೂ ಕನ್ನಡ ಮಾಧ್ಯಮದಲ್ಲಿ ಕಲಿಸಿದರೆ ಹೀಗೆಯೇ ಕಷ್ಟ ಆಗಬಹುದು ಎಂಬ ಭಯ. ಆದರೆ ನೆನಪಿರಲಿ ಭಾಷೆ ಒಂದು – ಸಂವಹನ ಮಾಧ್ಯಮ. ಭಾಷೆಯೇ ಜ್ಞಾನವಲ್ಲ. ಭಾಷೆ ಕಲಿಸುವ ವ್ಯಾಮೋಹದಲ್ಲಿ, ಜ್ಞಾನ ಕಲಿಕೆಗೆ ಪೆಟ್ಟು ನೀಡುವುದು ಸರಿಯೇ? ಮೊದಲಿಗೆ ವಿಷಯ ಗ್ರಹಿಕೆ, ಕಲಿಕೆ ಮುಖ್ಯವಾದಲ್ಲಿ ,ಮಗು ಅದನ್ನು ಅತ್ಯುತ್ತಮವಾಗಿ ಯಾವ ಮಾಧ್ಯಮದ ಮೂಲಕ ಕಲಿಯಲು ಸಾಧ್ಯವೋ ಆ ಮಧ್ಯಮದ ಮುಖೇನ ಕಲಿಸುವುದು ಸೂಕ್ತ.
ಇನ್ನು ಕಲಿಕೆ ಎಂದರೆ ಒಂದು ಜೀವಿ ಪಡೆದುಕೊಳ್ಳುವ ಎಲ್ಲ ಬಗೆಯ ತಿಳಿವು, ನೈಪುಣ್ಯ ಅಥವಾ ವರ್ತನೆಯ ರೀತಿಯ ಸಂಪಾ ದನೆ.ಇನ್ನು ಮಕ್ಕಳ ಐಕ್ಯೂ 12 ವರ್ಷದ ಒಳಗೆ ಬೆಳೆಯುತ್ತದೆ ಆದುದರಿಂದಮಕ್ಕಳು ಬುದ್ಧಿವಂತರಾಗಲು ಈ ಅವಧಿಯಲ್ಲಿ ತೊಡ ಕಿಲ್ಲದ ಮಾಧ್ಯಮದ ಮೂಲಕ ಕಲಿಯಬೇಕು. ಪ್ರಾಥಮಿಕ ಮತ್ತು ಮಾಧ್ಯಮಿಕ ಕಲಿಕೆ ಮಾತೃ ಭಾಷೆಯಲ್ಲಾದರೆ, ಮಗು ವಿಷಯ ಗ್ರಹಿಸುವುದು, ಅಭಿವ್ಯಕ್ತಪಡಿಸುವುದು ಸುಲಭವಾಗುತ್ತದೆ. ಈ ಹಂತದಲ್ಲಿ, ಮಗುವನ್ನು ಇತರ ಭಾಷೆಗಳಿಗೆ ಒಡ್ಡಬಹುದು. ಆದರೆ, ಅವನ್ನೂ ಕಲಿಯುವುದು ಮಾತೃಭಾಷೆಯ ಮೂಲಕವೇ ಆಗಿರಬೇಕು. ಒಂದು ಭಾಷೆಯನ್ನು ಜೀರ್ಣಿಸಿಕೊಂಡ ಮಗು, ಅದರ ತಳಹದಿಯ ಮೇಲೆ ಇತರ ಭಾಷೆಗಳನ್ನು ಸುಲಭವಾಗಿ ಕಲಿಯುತ್ತದೆ. ಅದುದರಿಂದ ಕನಿಷ್ಠ ಪ್ರೌಢಶಾಲೆಯವರೆಗೆ ಭಾರತೀಯ ಭಾಷೆಗಳ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳಲ್ಲಿ ವಿಷಯಗ್ರಹಣೆ, ಅವುಗಳನ್ನು ಕುರಿತ ಚಿಂತನೆ, ಸಮರ್ಥವಾದ ಸಂವಹನೆ ಮುಂತಾದ ಬಹುಮುಖ್ಯವಾದ ನಿಜವಾದ ಹಾಗೂ ಆಳವಾದ ಬುದ್ಧಿವಂತಿಕೆಯ ಅಂಶಗಳು ಹೆಚ್ಚಾಗಿ ಬೆಳೆದಿರುವುದು ಕಂಡುಬಂದಿದೆ.
ಸುಪ್ರಸಿದ್ಧ ಬಾಹ್ಯಾಂತರಿಕ್ಷ ವಿಜ್ಞಾನಿ ಪ್ರೊ. ಯು.ಆರ್. ರಾವ್, ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಕಲಿತಿದ್ದು ಕನ್ನಡ ಮಾಧ್ಯಮ ದಲ್ಲಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎನ್.ಆರ್. ನಾರಾಯಣಮೂರ್ತಿ ಕೂಡ ಕಲಿತ ಮಾಧ್ಯಮ ಕನ್ನಡ. ಇಂಥ ಬೇಕಾ ದಷ್ಟು ಉದಾಹರಣೆಗಳನ್ನು ಕೊಡಬಹುದು. ಜ್ಞಾನಕ್ಕೆ ಭಾಷೆಯ ಹಂಗಿರುವುದಿಲ್ಲ. ಅಭಿವ್ಯಕ್ತಿ ಮಾಧ್ಯಮಕ್ಕೆ ಮಾತ್ರ ಆ ಸಮಸ್ಯೆ. ತನ್ನ ಪರಿಸರದ ಭಾಷೆಯಲ್ಲಿ ಅರ್ಥ ಮಾಡಿಕೊಂಡ ಸಾಮಾನ್ಯ ಮಗುವೂ ಅಸಾಮಾನ್ಯ ಕೊಡುಗೆ ನೀಡಬಲ್ಲುದು.