ಹನುಮಜ್ಜಯಂತಿಯ ವಿಶೇಷ

ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ
ಸ್ವಾಸೀನಮಸ್ಯ ನುತಿನಿತ್ಯವಚಃಪ್ರವೃತ್ತಿಮ್ |
ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ
ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ||

ಚೈತ್ರಾ ಪೂರ್ಣಿಮೆಯಂದು ಧರೆಯಲ್ಲಿ ಅವತರಿಸಿದ ಶ್ರೀಹನುಮಂತ ದೇವರು ನಮಗೆಲ್ಲರಿಗೂ ಸುಖ, ಸಂತೋಷದ ಜತೆ ಸಕಲೈಶ್ವರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರೀರಾಮನೇ ಜೀಯಾ ಎಂದು, ಶ್ರೀರಾಮ ನಾಮವೇ ಜೀವನ ವೆಂದು ನಿರಂತರ ಸೇವೆಗೈಯ್ಯಲು ಶ್ರೀಮುಖ್ಯಪ್ರಾಣದೇವರು ಹನುಮಂತ ದೇವರಾಗಿ ಧರೆಯಲ್ಲಿ ಅವತರಿಸಿದ‌ ದಿನ.

ಹಿಂದೆ ಪುಂಜಿಕಸ್ಥಲೆಯೆಂಬ ಅಪ್ಸರೆ ಬ್ರಹ್ಮದೇವರ ಶಾಪಕ್ಕೆ ಗುರಿಯಾಗಿ ಭೂಲೋಕದಲ್ಲಿ ಹುಟ್ಟಬೇಕಾಯಿತು. ತಪ್ಪಿನ ಅರಿವಾಗಿ ಪರಿಹಾರ ಕೇಳಿದಾಗ, ವಾನರರೂಪದ ಮಗು ನಿನ್ನ ಮಗನಾಗಿ ಹುಟ್ಟಿದಾಗ ನಿನಗೆ ಶಾಪ ವಿಮೋಚನೆಯಾಗುತ್ತದೆ ಎಂದು ಉಪಸಂಹಾರವನ್ನು ಬ್ರಹ್ಮ ದೇವರು ಹೇಳಿದರು.

ನಂತರ ಭೂಲೋಕದಲ್ಲಿ ಅವತರಿಸಿದ ಅಂಜನಾದೇವಿ ಕೇಸರಿಯೆಂಬ ವಾನರ ರಾಜನನ್ನು ವರಿಸಿದಳು. ಕೆಲ ಕಾಲಾನಂತರ ಋಷಿಗಳ ಅಣತಿಯಂತೆ ತಪಗೈದಳು. ಆಗ ವಾಯುವಿನ ಅನುಗ್ರಹವಾಯಿತು, ನಂತರ ಸುಂದರ ದೃಢಕಾಯದ ಮಗುವಿಗೆ ಜನ್ಮ ನೀಡಿದಳು. ಅಂಜನೆಯ ಮಗನಾದ್ದರಿಂದ ಆಂಜನೇಯ ನಾದ.

ಒಮ್ಮೆ ಬಾಲಕನಾಗಿದ್ದ ಆಂಜನೇಯ ಪೂರ್ವದತ್ತ ನೋಡಿದ, ಆಗತಾನೆ ಉದಯಿಸುತ್ತಿದ್ದ ಸೂರ್ಯ ಕೆಂಪನೆ ಹಣ್ಣಿನಂತೆ ಕಂಡುಬಂದ. ಸೂರ್ಯನನ್ನೇ ಹಣ್ಣೆಂದು ಭಾವಿಸಿದ ಆಂಜನೇಯ, ತಿನ್ನಲೆಂದು ಆಗಸಕ್ಕೆ ಹಾರಿದ. ಇದನ್ನು ಕಂಡ ಇಂದ್ರನಿಗೆ ರೋಷ ಬಂದು, ತನ್ನ ವಜ್ರಾಯುಧದಿಂದ ಪ್ರಹಾರ ಮಾಡಿದ. ಅದು ಆಂಜನೇಯನ ದವಡೆ(ಹನು)ಗೆ ತಾಕಿತು, ಹನು (ದವಡೆ) ದೊಡ್ಡದಾಯಿತು. ಹೀಗಾಗಿ ಅವನಿಗೆ ಹನುಮಂತ ಎಂಬ ಹೆಸರು ಬಂತು. ಮತ್ತೊಂದು ವಿಶೇಷವೆಂದರೆ ಹನುಮನೆಂದರೆ ಜ್ಞಾನ. ಜಗತ್ತಿನಲ್ಲಿ ಹನುಮಂತದೇವರಿಗಿಂತ ಪಂಡಿತರಿಲ್ಲವೆಂಬುದು ಸರ್ವ‌ವಿಧಿತ.

ಕೂಸಿನ ಕಂಡಿರಾ ಮುಖ್ಯಪ್ರಾಣನ ಕಂಡಿರಾ, ಬಾಲನ ಕಂಡಿರಾ ಬಲವಂತನ ಕಂಡಿರಾ ಎಂಬ ದಾಸರ ವಾಣಿಯಂತೆ ಹನುಮಂತ ದೇವರು ಬಾಲ್ಯದಲ್ಲೇ ಅಸಾಮಾನ್ಯ ಸಾಹಸ ತೋರಿದ ಧೀರನೀತ.
ಹನುಮಂತ ದೇವರ ಸಾಹಸ ಹಾಗೂ ಗುಣಗಳನ್ನು ಎಷ್ಟು ವರ್ಣಿಸಿದರೂ ಸಾಲದು. ರಾಮಾಯಣದಲ್ಲಿ ಈ ಮಹಾಮಹಿಮ ತೋರಿದ ಸಾಹಸ, ಸಹನೆ, ಜಾಣ್ಮೆ, ಧೈರ್ಯವನ್ನು ಸುಂದರಕಾಂಡ ದಲ್ಲಿ ವಾಲ್ಮೀಕಿ ಮಹರ್ಷಿಗಳು ಸುಂದರವಾಗಿ ವರ್ಣಿಸಿದ್ದಾರೆ.
ಸುಗ್ರೀವ ಸಚಿವನಾಗಿ, ಸೀತಾದೇವಿಯನ್ನು ಹುಡುಕಲು ಸಾಗರ ಲಂಘಿಸಿದ ಮಹಾಮಹಿಮ. ಅಕ್ಷಯ ಕುಮಾರನನ್ನು ಕ್ಷಯ ಮಾಡಿ, ಶ್ರೀಹರಿಗೆ ಎದುರಾದ ಮತ್ತವನ ಪರಿವಾರಕ್ಜೆ ಉಳಿಗಾಲವಿಲ್ಲವೆಂದು ನಿರೂಪಿಸಲು ಸ್ವರ್ಣಲಂಕೆಗೆ ಅಗ್ನಿಸ್ಪರ್ಶ ಮಾಡಿದ ಶೂರನೀತ.

ಶ್ರೀರಾಮನ ಭಕ್ತರನು ಕಾಯುವುದೇ ಕಾಯಕವೆಂದರಿತು ಸಂಜೀವಿನಿ ತಂದು ಲಕ್ಷ್ಮಣನನು ಉದ್ಧರಿಸಿದ ಮಹಾಭೂಪ.

ಕಿರ್ಮೀರ ಕುಲದವನಾದರೂ ಅತಿ ಸುಂದರನೆಂಬ ಖ್ಯಾತಿ ಪಡೆದು ಸುಂದರಕಾಂಡವೆಂಬ ಅಧ್ಯಾಯವನ್ನೇ ಸಂದಾಯ ಮಾಡಿಸಿಕೊಂಡ ಮಹಾಧೀರ.

ತಾಯಿ(ಸೀತೆ)ಯನ್ನು ನೋಡದ ಹೊರತು ಹನಿ ತೀರ್ಥ ಸೇವಿಸೆನೆಂಬ ಶಪಥಗೈದು ಮಹಾತ್ಕಾರ್ಯ ಸಾಧಿಸಿದ ನಂತರ ಮಧುವನ ಧ್ವಂಸಗೈದು ಮಧುಪಾನ ಮಾಡಿ, ಕಲಿಯುಗದಲಿ ಮಧುವಿನಂತೆ ಮಧುರ ಮಾತುಗಳನ್ನಾಡಲು ಶ್ರೀಮದಾನಂದತೀರ್ಥರಾಗಿ ಬಂದ ದುಷ್ಟಮದ ಧ್ವಂಸಿ.

ಒಡಹುಟ್ಟಿದ ಸಹೋದರರಿಗೂ ಸಿಗದ ಅಪ್ಪುಗೆಯ ಸುಖವನ್ನು ಒಡೆಯ ರಾಮನಿಂದ ಪಡೆದು ಚಿರಂಜೀವಿಯಾಗಿ ಜಾತಿಗಿಂತ ರೀತಿ ಮೇಲೆಂದು ನಿರೂಪಿಸಿದ ಕಪಿ ಕುಲೋತ್ತಮ.

ಇಷ್ಟೆಲ್ಲಾ ಕಾರ್ಯಸಾಧನೆ ಮಾಡಿ ಧರೆಯಲ್ಲಿ ದೀನರನುದ್ಧರಿಸಲು ಹನುಮನ ಮತವೇ ಹರಿಯ ಮತವೋ, ಹರಿಯ ಮತವೇ ಹನುಮನ ಮತವೋ ಎಂದು ಸಾಕ್ಷೀಕರಿಸಲು ಶ್ರೀಮೂಲರಾಮದೇವರಿಗೆ ನಿತ್ಯ ಭೃತ್ಯುವಾಗಿ ರಾಯರಲಿ ವಾಯು ಅಂಶದಿ ನೆಲೆನಿಂತ ಧೀಮಂತ ನಮ್ಮ ಶ್ರೀಹನುಮಂತ.

ಇಂತಹ ಮಹಾಮಹಿನಾದ ಹನುಮದೇವರು ಅವತರಿಸಿದ ದಿನ.

ಹನುಮನಲ್ಲಿ ಶ್ರೀಹರಿ ನಿರಂತರ ವಾಸವಿರುತ್ತಾನೆ. ಅಂತಹ ಹನುಮ ನಮ್ಮಲ್ಲಿ ಶ್ವಾಸರೂಪದಲ್ಲಿ ನೆಲೆ ನಿಂತಿದ್ದಾನೆ. ಹಾಗಾಗಿ †ಭೃತ್ಯಸ್ಯ ಭೃತ್ಯು* ಎಂಬಂತೆ ರಾಮನ ಸೇವಕನಾದ ಹನುಮನ ಸೇವಕರಾದರೆ ನೇರ ಶ್ರೀಹರಿಯ ಸೇವಕರಾಗುತ್ತೇವೆ.

ಸಕಲಜೀವಿಗಳಲ್ಲಿ ಸೂಕ್ಷ್ಮರೂಪದಲಿ ನೆಲೆಸಿ ಜಗದ ವ್ಯಾಪಾರ ನಡೆಸುವ ಶ್ರೀ ಹನುಮಂತ ದೇವರನ್ನು ಅನವರತ ಸ್ಮರಿಸೋಣ, ನಿರಂತರ ಭಜಿಸೋಣ, ಸದಾ ಶಿರಸಾ ನಮಿಸೋಣ.

ಜನರ ಸಂಕಟ ದೂರವಾಗಿ ಜನರೆಲ್ಲಾ ಸಂತಸದಿಂದಿರುವಂತೆ ಸಲಹಲಿ ಎಂದು ಎಲ್ಲರೂ ಪ್ರಾರ್ಥಿಸೋಣ.

ವಂದೇ ತಂ ತ್ವಾ ಸುಪೂರ್ಣ ಪ್ರಮತಿಮನುದಿನಾಸೇವಿತಂ ದೇವ ವೃಂದೈಃ
ವಂದೇ ವಂದಾರುಮೀಶೇ ಶ್ರಿಯ ಉತ ನಿಯತಂ ಶ್ರೀಮದಾನಂದತೀರ್ಥಮ್ |
ವಂದೇ ಮಂದಾಕಿನೀಸತ್ ಸರಿದಮಲಜಲಾಸೇಕಸಾಧಿಕ್ಯಸಂಗಂ
ವಂದೇಽಹಂ ದೇವ ಭಕ್ತ್ಯಾ ಭವ ಭಯ ದಹನಂ ಸಜ್ಜನಾನ್ ಮೋದಯಂತಮ್ ||

ಮಾತರ್ಮೇ ಮಾತರಿಶ್ವನ್ ಪಿತರತುಲ ಗುರೋ ಭ್ರಾತರಿಷ್ಟಾಪ್ತ ಬಂಧೋ
ಸ್ವಾಮಿನ್ ಸರ್ವಾಂತರಾತ್ಮನ್ನಜರ ಜರಯಿತರ್ಜನ್ಮ ಮೃತ್ಯಾಮಯಾನಾಮ್ |
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂ ನಿರ್ನಿಮಿತ್ತಾಂ
ನಿರ್ವ್ಯಾಜಾಂ ನಿಶ್ಚಲಾಂ ಸದ್ ಗುಣ ಗಣ ಬೃಹತೀಂ ಶಾಶ್ವತೀಮಾಶು ದೇವ || ೧೪ ||

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾಂ |
ಅಜಾಡ್ಯಂ ವಾಕ್ಪಟತ್ವಂಚ ಹನೂಮತ್ ಸ್ಮರಣಾತ್ ಭವೇತ್ |
ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ |
ವಾತಾತ್ಮಜಂ ವಾನರ ಯೂಥಮುಖ್ಯಂ
ಶ್ರೀರಾಮದೂತಂ ಸ್ಮರಣಂ ಪ್ರಪದ್ಯೇ ||

ಹನುಮಂತನಂತಹ ಧೀರನಿಲ್ಲ, ಹನುಮಂತನಂತಹ ಶೂರನಿಲ್ಲ, ಹನುಮಂತನಂತಹ ಬುದ್ಧಿವಂತನಿಲ್ಲ, ಹನುಮಂತನಂತಹ ಮನೋಬಲವುಳ್ಳವನಿಲ್ಲ, ಹನುಮಂತನಂತಹ ನಿಷ್ಠಾವಂತನಿಲ್ಲ, ಹನುಮಂತನಂತಹ ಶ್ರೇಷ್ಠ ಸೇವಕನಿಲ್ಲ, ಹನುಮಂತನಂತಹ ಭಕ್ತ ಮತ್ತೊಬ್ಬನಿಲ್ಲ, ಹನುಮಂತನಂತಹ ವ್ಯಕ್ತಿತ್ವ ವಿಶ್ವದಲ್ಲಿಯೇ ಇಲ್ಲ.

ಹನುಮಂತ ತನ್ನ ಸ್ವಾಮಿನಿಷ್ಠೆಯಿಂದಾಗಿ ಶ್ರೀರಾಮದೇವರಿಗಿಂತಲೂ ಹೆಚ್ಚಾಗಿ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾನೆ. ವಿಶ್ವದಲ್ಲಿ ಶ್ರೀರಾಮದೇವರ ದೇವಾಲಯಗಳಿಗಿಂತ ಹನುಮಂತ ದೇವರ ದೇವಾಲಯಗಳ ಸಂಖ್ಯೆಯೇ ಹೆಚ್ಚು. ಸೇವೆ ಹಾಗೂ ಸ್ವಾಮಿನಿಷ್ಠೆಯಿದ್ದರೇ ವ್ಯಕ್ತಿ ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದೆಂಬುದು ಆಂಜನೇಯ ದೇವರೇ ನಮಗೆ ನಿದರ್ಶನ. ಅಂತಹ ಶ್ರೀಹನುಮಂತ ಸದಾ ನಮ್ಮಲ್ಲಿ ನೆಲೆಸಿ, ಶ್ರೀರಾಮ ದೇವರಲ್ಲಿ ಭಕ್ತಿಯ ಜತೆ ಅನುರಕ್ತಿ ಮೂಡಿಸಲಿ..

ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನು ಕಾಯಲಿ…

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

 
 
 
 
 
 
 
 
 
 
 

Leave a Reply