ದಿಗಂತಯಾನ ಕೃತಿ ಲೋಕಾರ್ಪಣೆ

ಉಡುಪಿ: ದಿಗಂತಯಾನ ಪುಸ್ತಕವು ಪತ್ರಕರ್ತರ ಪೀಳಿಗೆಗೆ ಕೈಪಿಡಿಯಾಗಲಿದೆ. ಪತ್ರಕರ್ತರ ಬದುಕು, ವರದಿಗಾರಿಕೆ, ವರದಿಗಾರ ಮತ್ತು ಸಂಪಾದಕೀಯದ ಸಂಬಂಧಗಳ ಬಗೆಗೆ ತಿಳಿಸಿಕೊಡುವ ಅಚ್ಚುಕಟ್ಟಾದ ಪುಸ್ತಕ ಇದಾಗಿದೆ ಎಂದು ಹೊಸದಿಗಂತ ಪತ್ರಿಕೆಯ ಸಿಇಓ ಪಿ.ಎಸ್. ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶನಿವಾರ, ನಗರದ ಕಿದಿಯೂರು ಹೋಟೆಲಿನ ಸಭಾಂಗಣದಲ್ಲಿ ಶ್ರೀ ನಂದಿ ಕೇಶ್ವರ ಟ್ರಸ್ಟ್(ರಿ.) ಕೋಡಂಗಲ್ಲು, ಮೂಡಬಿದಿರೆ ಆಶ್ರಯದಲ್ಲಿ ಸುಹಾಸಂ ಉಡುಪಿ ಸಹಯೋಗದಲ್ಲಿ ಈಶ್ವರ ಭಟ್ ಅವರ ಕೃತಿ ದಿಗಂತಯಾನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವೃತ್ತಿಯಲ್ಲಿ ಶಿಕ್ಷಕರಾದರೂ, ಪ್ರವೃತ್ತಿಯಲ್ಲಿ ಲೇಖಕ. ಶಾಲಾ ಕಾರ್ಯದ ನಂತರ ವರದಿಗಾರಿಕೆಯಲ್ಲಿ ತೊಡಗಿ, ವರದಿಗೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಇಂದಿಗೂ ಹೊಸದಿಗಂತಕ್ಕೆ ಏನಾದರೂ ಲೇಖನ ಬೇಕೆಂದಾಗ, ಕ್ಲಪ್ತ ಸಮಯಕ್ಕೆ ಕಳುಹಿಸಿ ಕೊಡುತ್ತಾರೆ. ಅವರ ಸಮಯಪ್ರಜ್ಞೆ ಮತ್ತು ಶಿಸ್ತಿನ ಜೀವನ ಅವರನ್ನು ಇಷ್ಟು ಎತ್ತರಕ್ಕೆ ಕೊಂಡಯ್ಯುದಿದೆ ಎಂದವರು ಹೇಳಿದರು.

ಕೃತಿ ಪರಿಚಯಿಸಿದ ಹಿರಿಯ ಲೇಖಕ ದು.ಗು ಲಕ್ಷ್ಮಣ್ ಮಾತನಾಡಿ, ರೈತ, ಸಾಮಾನ್ಯ ನಾಗರಿಕ ಅರ್ಥ ಮಾಡಿಕೊಳ್ಳುವಂತೆ ವರದಿ ಬರೆಯುವವನು,ನಿಜವಾದ ಪತ್ರಕರ್ತ. ಅಂತಹ ಗುಣ ಶಿಕಾರಿಪುರ ಈಶ್ವರ ಭಟ್ಟರಲ್ಲಿತ್ತು. ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ, ಅಕ್ಷರಗಳ ತಪ್ಪಿಲ್ಲದೇ ವರದಿಗಾರಿಕೆಯನ್ನು ಮಾಡುತ್ತಿದ್ದರು.

ಆ ಕಾಲಕ್ಕೆ ಪತ್ರಿಕಾಗೋಷ್ಠಿಗೆ ಹೊಸದಿಗಂತ ಪತ್ರಿನಿಧಿಯನ್ನು ಕರೆಯದಿದ್ದರೂ, ಇವರು ಹೋಗಿ ವರದಿ ಮಾಡಿ ಕಳುಹಿಸುತ್ತಿದ್ದರು. ಯಾರಿದಲೂ, ಯಾವ ಗೌರವವನ್ನು ನಿರೀಕ್ಷಿಸದೇ, ಬೇಸರಿಸಿಕೊಳ್ಳದೇ 13 ವರ್ಷ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ.

ಸಮಾಜದಿಂದ ಪತ್ರಕರ್ತ ಬೆಳೆಯುತ್ತಾನೆ. ಇಂದು ಅನೇಕರಲ್ಲಿ ಪತ್ರಕರ್ತರೆಂಬ ಅಹಂ ತುಂಬಿದೆ. ಅದು ಪತ್ರಕರ್ತನ ಅವನತಿಗೆ ಕಾರಣವಾಗುತ್ತದೆ. ಇಂದಿನ ಯುವ ಪೀಳಿಗೆಯ ಪತ್ರಕರ್ತರಿಗೆ ಕಾರ್ಯಗಾರದ ಅವಶ್ಯಕತೆಯೂ ಇದೆ ಎಂದು ತಿಳಿಸಿದರು.

ಹೆಚ್.ಶಾಂತಿರಾಜ್ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕು.ಗೋ ಉಪಸ್ಥಿತರಿದ್ದರು.

ಗಾಯಕ ಹೆಚ್.ಎನ್.ನಟರಾಜ್ ಪ್ರಾರ್ಥಿಸಿದರು. ಲೇಖಕ ಶಿಕಾರಿಪುರ ಈಶ್ವರ ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶ್ರೀನಿವಾಸ್ ಉಪಾಧ್ಯಾಯ ನಿರೂಪಿಸಿದರು.

ಇದೇ ವೇದಿಕೆಯಲ್ಲಿ ಹೊಸದಿಗಂತ ಪತ್ರಿಕೆಯ ವತಿಯಿಂದ ಸುಮಾರು 13 ವರ್ಷ ಹೊಸದಿಗಂತ ಪತ್ರಿಕೆಗೆ ಉಡುಪಿ ವರದಿಗಾರ ರಾಗಿ ಸೇವೆ ಸಲ್ಲಿಸಿದ ಶಿಕಾರಿಪುರ ಈಶ್ವರ ಭಟ್ ಅವರನ್ನು ಹೊಸದಿಗಂತ ಕನ್ನಡ ದೈನಿಕದ ಸಿಇಓ ಪಿ.ಎಸ್.ಪ್ರಕಾಶ್, ಹಿರಿಯ ಲೇಖಕ ದು.ಗು ಲಕ್ಷ್ಮಣ್ ಸನ್ಮಾನಿಸಿದರು.

 
 
 
 
 
 
 
 
 
 
 

Leave a Reply