ಪ್ರಪಂಚದ ಸಕಲ ಜೀವರಾಶಿಗಳಿಗೆ ಮಾತೃ ಸ್ಥಾನದಲ್ಲಿರುವ . ಎಲ್ಲಾ ತಂದೆ – ತಾಯಂದಿರಿಗೆ ಮಹಾಮಾತೆಯಾಗಿ………..
“ಅಮ್ಮಾ” ನೀನು ಜೀವನಾಧಾರಳು, ಜಗಜ್ಜನನಿ. ಸೃಷ್ಟಿ ,ಸ್ಥಿತಿ ,ಲಯ ಸ್ವರೂಪಳಾಗಿ, ಗುಣಾಶ್ರಯೆಯಾಗಿ, ಗುಣಮಯಿಯಾಗಿ
ಜನಮಾನಸದ ಮನೋವಿಕಾರಗಳೆಂಬ ಆಸುರೀ ಶಕ್ತಿಯನ್ನು ಲಯಗೊಳಿಸಿ ಮಂದಸ್ಮಿತಳಾಗಿ ಮನೋಹರಿ ಎನಿಸಿಕೊಂಡು ಆಸ್ತಿಕರ ಮನೋಭೀಷ್ಟ ಸಿದ್ಧಿಯಾಗುವಂತೆ ಅನುಗ್ರಹಿಸು.
ಶರನ್ನವರಾತ್ರಿ – ಅಧಿಕ ಮಾಸದಲ್ಲಿ ಸನ್ನಿಹಿತವಾದರೂ ‘ಅಮ್ಮ’ನ ಆರಾಧನೆಗೆ ಒದಗಿದ ನವರಾತ್ರಿ ಪರ್ವಕಾಲದಲ್ಲಿ ಭವಾನಿಯಾಗಿ ಭದ್ರಮಂಟಪದಲ್ಲಿ ಉಪಸ್ಥಿತಳಾಗಿರುವ, ಲೋಕಮಾತೆಯಾಗಿ ಪೂಜೆಗೊಳ್ಳುವ ‘ಜಗದವ್ವೆ’..ಭವವನ್ನು ಉದ್ಧರಿಸು, ಶಾಂತಿಯನ್ನು ಅನುಗ್ರಹಿಸು. ವ್ಯಗ್ರ ಪ್ರಕೃತಿಯಾಗಿ, ಮಹಾವ್ಯಾಧಿಗಳಾಗಿ ಮನುಕುಲವನ್ನು ಮುನಿಯಬೇಡ. ಅಪರಾಧ ಮತ್ತು ಅಭಿಯೋಗಗಳು ಸಹಸ್ರವಿದ್ದರೂ ‘ಅಮ್ಮ’ನಾಗಿ ಕ್ಷಮಿಸಿ ಸಂರಕ್ಷಿಸು. “ಬಹುಶಃ ಈ ವರ್ಷದ ಮೊದಲ ನವರಾತ್ರಿಗೆ ಹೀಗೆ ಪ್ರಾರ್ಥನೆ ಸೂಕ್ತವಲ್ಲವೆ” .
|ಭೂಮಿ – ತಾಯಿ ; ಆಕಾಶ – ತಂದೆ|
ಋಗ್ವೇದ ಕಾಲದ ಕಲ್ಪನೆಯಂತೆ ಆಕಾಶವೇ ತಂದೆ, ಭೂಮಿಯೇ ತಾಯಿ.ಇವರಿಬ್ಬರನ್ನು ವರ್ಷಧಾರೆ – ಮಳೆ ಮುಖಾಮುಖಿ ಅಥವಾ ಸಮಾಗಮಕ್ಕೆ ಕಾರಣವಾಗುತ್ತದೆ, ಭೂಮಿಯು ಗರ್ಭವತಿಯಾಗಿ, ಫಲವತಿಯಾಗುತ್ತಾಳೆ, ಜೀವರಾಶಿಯನ್ನು ಸಹಜ ಮಾತೃಭಾವದಿಂದ ಪೊರೆಯುತ್ತಾಳೆ. ವಿಗ್ರಹರೂಪಿ ಭೂಮಾತೆ “ಕುಂಭಧಾರಿಣೆ” ಎಂದು ಪೂಜೆಗೊಂಡದ್ದು ಆಶ್ಚರ್ಯವಲ್ಲ .
ಪ್ರಾಗೈತಿಹಾಸಿಕ ಕಾಲದಲ್ಲೆಲ್ಲ ಕುಂಭಕರ್ಮವು ಹೆಣ್ಣುಮಕ್ಕಳ ಕೆಲಸವಾಗಿತ್ತು. ಈ ವಿವರಣೆಗೆ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕೆಯ ಕಥೆಯಲ್ಲಿ ಆಕೆ ಪ್ರತಿನಿತ್ಯ ನೀರು ತರಲು ಹಸಿ ಮಣ್ಣಿನಿಂದ ಕುಂಭ ನಿರ್ಮಿಸುತ್ತಿದ್ದಳೆಂಬ ಉಲ್ಲೇಖವನ್ನು ಆಧಾರವಾಗಿ ನೀಡಬಹುದು.
ಶಕ್ತಿಪೂಜೆಗೆ ಪ್ರಾಧಾನ್ಯವಿರುವ ನವರಾತ್ರಿಯು ‘ಘಟಸ್ಥಾಪನೆ’ಯೊಂದಿಗೆ ಆರಂಭವಾಗುತ್ತದೆ. ತಾಯಿಯು ರಕ್ಷಣೆಯ ಹೊಣೆ ಹೊತ್ತವಳೂ ಹೌದು ತಾನೆ ? ಆದುದರಿಂದಲೇ ರಕ್ಷೆಗಾಗಿ ಮಾತೃ ದೇವತೆಯ ಆರಾಧನೆಗೆ ಪ್ರೇರಣೆ ನೀಡಿರಬೇಕು. ಕಷ್ಟ ಪರಂಪರೆ ಗಳು ಎದುರಾದಾಗ ತಾಯಿಗೆ ಶರಣಾಗದೆ ಅನ್ಯದಾರಿ ಇಲ್ಲ. ಹೊತ್ತು,ಹೆತ್ತು, ಸಾಕಿ ಸಲಹುವ ಅಮ್ಮನನ್ನು ಸಹಜವಾಗಿ ರಕ್ಷಣೆಗೆ ಆಶ್ರಯಿಸುವಂತೆ ಮಾತೃರೂಪಿ ಭಾವವನ್ನು-ಚೈತನ್ಯವನ್ನು ಅಂದರೆ ಶಕ್ತಿರೂಪಿಣಿಯನ್ನು ದುರ್ಗಮವಾದುದರ ಪರಿಹಾರ ಕ್ಕಾಗಿ ಪ್ರಾರ್ಥಿಸುವುದು ರೂಢಿಗೆ ಬಂತು.
ಶರದೃತು : ಶರದೃತು ಆರಂಭವು ಮಳೆಗಾಲದ ಅಂತ್ಯ. ಪೈರು ಬೆಳೆದು ತೆನೆಗಳು ತೊನೆದಾಡುವ ಸಂಭ್ರಮ. ರೈತನ ದುಡಿಮೆಗೆ ಭೂಮಿತಾಯಿ ನೀಡಿದ ಸತ್ಫಲ, ಜೀವನಾಧಾರವಾದ ‘ಅನ್ನಬ್ರಹ್ಮ’ ಗದ್ದೆಯಿಂದ ಮನೆಯಂಗಳಕ್ಕೆ ಬರುವ ಸಮೃದ್ಧಿ ಪ್ರಾಪ್ತಿಯಾಗುವ ಸಂದರ್ಭ . “ನವರಾತ್ರಿ ರಮೋತ್ಸವ”.