ಸಹಕಾರ ರತ್ನ ಪ್ರಶಸ್ತಿ ರಾಷ್ಟ್ರೀಯವಾದಿ ಚಿಂತನೆಯ ಯಶ್‌ಪಾಲ್ ಸುವರ್ಣ ಸಾಧನೆಗೆ ಸಂದ ಗೌರವ :  ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ

ರಾಷ್ಟ್ರೀಯವಾದಿ    ಚಿಂತನೆಯೊ೦ದಿಗೆ ಹಿಂದೂತ್ವದ ವಿಚಾರದಲ್ಲಿ ಗಟ್ಟಿ ಧ್ವನಿಯಾಗಿ ಸಹಕಾರ, ಮೀನುಗಾರಿಕೆ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮ ದಿಟ್ಟ ನಿರ್ಧಾರ, ನಾಯಕತ್ವ ಗುಣಗಳಿಂದ ಬೆಳದು ಬಂದ ಯಶ್‌ಪಾಲ್ ಸುವರ್ಣರವರನ್ನು ಅರಸಿ ಬಂದ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಅವರ ಸಾಧನೆಗೆ ಸಂದ ಗೌರವವಾಗಿದ್ದು, ಮುಂದಿನ ದಿನದಲ್ಲಿ ಓರ್ವ ಜನಪ್ರತಿನಿಧಿಯಾಗಿ ಜನ ಸಾಮಾನ್ಯರ ಸೇವೆಗೆ ಅವಕಾಶ ಒದಗಿ ಬರಲಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಹೇಳಿದರು.

ಸಹಕಾರ ರತ್ನ ಯಶ್‌ಪಾಲ್ ಸುವರ್ಣ ಅಭಿನಂದನಾ ಸಮಿತಿ ಹಿರಿಯಡ್ಕ ವತಿಯಿಂದ ಆಯೋಜಿಸಿದ್ದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಶ್‌ಪಾಲ್ ಸುವರ್ಣ ರವರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ರಾದ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಹಕಾರ ಕ್ಷೇತ್ರದ ಸಾಧನೆಗೆ ಅರ್ಹವಾಗಿಯೇ ಸಹಕಾರ ರತ್ನ ಗೌರವಕ್ಕೆ ಯಶ್‌ಪಾಲ್ ಸುವರ್ಣ ಭಾಜನರಾಗಿದ್ದಾರೆ, ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೂ ಉನ್ನತ ಸ್ಥಾನಮಾನ ಒಲಿದು ಬರಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ್ ನಾಯಕ್ ಕುಯಿಲಾಡಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಯಶ್‌ಪಾಲ್ ಸುವರ್ಣ ಸಾಧನೆ ಸರ್ವರಿಗೂ ಸ್ಪೂರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲೂ ಬಿಜೆಪಿ ಪಕ್ಷವನ್ನು ಸಂಘಟಿಸುವ ನೇತೃತ್ವ ಯಶ್‌ಪಾಲ್ ಸುವರ್ಣ ವಹಿಸಲಿ ಎಂದರು.

ಅಭಿನ೦ದನೆ ಸ್ವೀಕರಿಸಿದ ಯಶ್‌ಪಾಲ್ ಸುವರ್ಣ ಮಾತನಾಡಿ ಸಹಕಾರ ರತ್ನ ಪ್ರಶಸ್ತಿ ನನ್ನ ವೈಯುಕ್ತಿಕ ಸಾಧನೆಗಿಂತ ನನ್ನ ಅಧ್ಯಕ್ಷತೆಯ ಮೀನು ಮಾರಾಟ ಫೆಡರೇಶನ್ ಮತ್ತು ಮಹಾಲಕ್ಷ್ಮೀ  ಬ್ಯಾಂಕಿನ ಆಡಳಿತ ಮಂಡಳಿ, ಸದಸ್ಯರು, ಗ್ರಾಹಕರು, ಮಾರ್ಗದರ್ಶಕರು ಹಾಗೂ ಸಿಬ್ಬಂದಿಗಳ ಸಹಕಾರ ಸಂದ ಗೌರವವಾಗಿದೆ. ಈ ಸನ್ಮಾನ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡಿದೆ ಎಂದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಹಿರಿಯಡ್ಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಅಮರನಾಥ ಶೆಟ್ಟಿ, ಹೆಬ್ರಿ ಕೋಮಲ್ ಫೀಡ್ಸ್ನ ಆಡಳಿತ ನಿರ್ದೇಶಕರಾದ ಸಿದ್ಧಿ ಪ್ರಸಾದ್ ಎಂ. ಶೆಣೈ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮರಾಠಿ ಕಲಾ ಸಂಘ, ರಾಜರಾಜೇಶ್ವರಿ ಕ್ರಿಕೆಟರ್ಸ್ ಅಂಜಾರ್, ಹಿಂದೂ ಯುವಸೇನೆ ಹಿರಿಯಡ್ಕ ಮತ್ತು ಭೈರಂಪಳ್ಳಿ ಶಾಖೆ, ಕೋಮಲ್ ಫೀಡ್ಸ್ ವತಿಯಿಂದ ಯಶ್‌ಪಾಲ್ ಸುವರ್ಣರವರನ್ನು ಸನ್ಮಾನಿಸಿ ಅಭಿನಂದಿಸಿದರು.

ಅಭಿನ೦ದನಾ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಸ್ವಾಗತಿಸಿದರು. ಸಮಿತಿಯ ಸಂಚಾಲಕರಾದ ಶೇಖರ್ ಶೆಟ್ಟಿ ಹಿರಿಯಡ್ಕ, ಶುಭಕರ ಶೆಟ್ಟಿ ಕಬಿಯಾಡಿ, ಸಂದೀಪ್ ಶೆಟ್ಟಿ ಬಡಗಬೆಟ್ಟು, ರೋಹಿತ್ ಶೆಟ್ಟಿ ಬೆಳ್ಳರ್ಪಾಡಿ, ಪ್ರದೀಪ್ ಶೆಟ್ಟಿ ಭೈರಂಪಳ್ಳಿ, ಸನತ್ ಶೆಟ್ಟಿ ಹಿರಿಯಡ್ಕ, ಅಶೋಕ್ ಶೆಟ್ಟಿ, ನಿತಿನ್ ಶೆಟ್ಟಿ, ವಿನಯ್ ಪೂಜಾರಿ, ಪ್ರಶಾಂತ್ ನಾಯ್ಕ್ ಅಂಜಾರು ಉಪಸ್ಥಿತರಿದ್ದರು, ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply