ಕಾಳಿಕಾ ದೇವಿಯ ರೂಪದಲ್ಲಿ ತನ್ಮಯಳಾದ ತನ್ಮಯೀ ಅಡಿಗ~ಪೂರ್ಣಿಮಾ ಜನಾರ್ದನ್ 

ಒಂದು ಮಗು ಬೆಳೆದು ಬಂದ ರೀತಿ,​ ​ಅದರ ತಂದೆ ತಾಯಿ,​ ​ಅಲ್ಲಿರುವ ಮನೆ ಮಂದಿ,​ ​ಮನೆಯ ಹಿರಿಯರ ವೃತ್ತಾಂತ ಇವೆಲ್ಲವೂ ಆ ಮಗುವಿನ‌ ಮನಸ್ಸಿನ‌ ಮೇಲೆ ಅಗಾಧ ಪರಿಣಾಮವನ್ನು ಬೀರುತ್ತದೆ. ಜನನಿಬಿಡ ಬೆಂಗಳರನ್ನು ಬಿಟ್ಟು ಸಾಂಸ್ಕ್ರತಿಕವಾಗಿ ಶ್ರೀಮಂತ ವಾಗಿರುವ  ಕೊಡವೂರು ಲಕ್ಷ್ಮೀನಗರದಲ್ಲಿ ವಾಸಿಸುತ್ತಿರುವ ತನ್ಮಯೀ ಎಂಬ ಪುಟ್ಟ ಹುಡುಗಿ ತನ್ನ ಓದಿನೊಂದಿಗೆ ತನಗಿಷ್ಟದ ಭರತನಾಟ್ಯ, ಯಕ್ಷಗಾನಕ್ಕೂ ಸಮಯ ಹೊಂದಾಣಿಸಿ ಛಧ್ಮ ವೇಷ ಸ್ಪರ್ಧೆಗಳಲ್ಲಿ ತನ್ನನ್ನು ನಿರಂತರ ತೊಡಗಿಸಿ​ ​ಕೊಂಡಿರುವವಳು.
ಪುಟ್ಟ ಹುಡುಗಿಯಾಗಿದ್ದಾಗಿಂದಲೂ ಪುರಾಣ ಕಥೆಗಳಲ್ಲಿ ಅತೀವ ಆಸಕ್ತಿ ಹೊಂದಿ ಪ್ರತೀ ರಾತ್ರಿ ಮಲಗುವ ಮೊದಲು ತನ್ನ ತಾಯಿಗೆ ಕಥೆ ಹೇಳಲು ಪೀಡಿಸುತ್ತ ಕೇಳಿದ ಕಥೆಗಳನ್ನು ಕರಾರುವಾಕ್ಕಾಗಿ ನೆನಪಿನಲ್ಲಿಟ್ಟುಕೊಳ್ಳುವ ಜಾಣೆ.​ ​ಶಾಲೆಯಲ್ಲಿ ಪಠ್ಯಕ್ಕಿಂತ ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ತನ್ಮಯೀಗೆ ಕೃಷ್ಣ ಜನ್ಮಾಷ್ಟಮೀ, ನವರಾತ್ರಿ ಮುಂತಾದ ಹಬ್ಬ ಹರಿದಿನಗಳು ಬಂದಾಗಲೆಲ್ಲ ತುಂಬ ಖುಷಿ.​ ​ತಾನು ಕೇಳಿದ ಕಥೆಗಳಲ್ಲಿ ಕೆಟ್ಟವರನ್ನು ಶಿಕ್ಷಿಸಿ ಒಳ್ಳೆಯವರನ್ನು ರಕ್ಷಿಸಲು ಬರುವ ದೇವರನ್ನು ತುಂಬ ಇಷ್ಟ ಪಡುವ ಆಕೆಗೆ ತಾನೂ ದೇವರಂತೆ ನಟನೆ ಮಾಡುವುದು ವೇಷ ತೊಡುವುದೆಂದರೆ ಬಲು ಇಷ್ಟ. 
ನವರಾತ್ರಿಯ ಆರಂಭದಲ್ಲಿ  ಒಂದು ವಾಟ್ಸಾಪ್ ಗ್ರೂಪ್ ಬಣ್ಣ ಬಣ್ಣದ ವೇಷಗಳ ಆನ್ ಲೈನ್ ಸ್ಪರ್ಧೆ ಏರ್ಪಡಿಸಿದ್ದು ಅದರ ಛಾಯಾಚಿತ್ರಗಳನ್ನು ಆಹ್ವಾನಿಸಿತ್ತು.​ ​ರಾಕ್ಷಸ ವೇಷ ಇಲ್ವೇ​. ​ ಪೂತನಿ​,​ ಶೂರ್ಪಣಕಿ ವೇಷ ಸುಲಭದಲ್ಲಿ ಹಾಕಿ ಮುಗಿಸೋಣ ಎಂಬ ಅಮ್ಮನ ಗಡಿಬಿಡಿಗೆ ಈ ಹುಡುಗಿ ಸುತಾರಾಮ್ ಒಪ್ಪಲಿಲ್ಲ.​ ​ಆಕೆಗೆ ಕಥೆಯಲ್ಲಿ ಬರುವ ರಕ್ಕಸರನ್ನು ವಧಿಸುವ ದೇವತೆಗಳವೇಷದಲ್ಲೇ ಆಸಕ್ತಿ.​ ​ಅದರಲ್ಲೂ  ಆಕೆಗೆ ತಾನು ದುಷ್ಟ ಸಂಹಾರಿ ಕಾಳಿಯಾಗ ಬೇಕೆಂಬ ಹಂಬಲ‌.
 
ಪ್ರಸಿದ್ಧ ಹರಿಕಥಾ  ಕೀರ್ತನಕಾರರು,​ ​ಯಕ್ಷಗಾನ ಕಲಾವಿದರೂ ಆದ ಕೀರ್ತಿಶೇಷ ಶಂಕರನಾರಾಯಣ ಸಾಮಗರ ಮೊಮ್ಮಗಳು ಅನುಪಮಾ ಅಡಿಗ ಭಾರತೀಯ ಸಂಸ್ಕೃತಿ,​ ​ಸಂಪ್ರದಾಯ, ಪುರಾಣಗಳ ಪರಿಚಯ  ತನ್ನ ಮಗಳಿಗೆ ಆಗಬೇಕೆಂಬ ಮಹದಾಸೆ ಹೊತ್ತವರು.​ ​ತನ್ನ ಮಾವನ ಮನೆಯಲ್ಲೂ ಸಾಹಿತ್ಯಕ್ಕೆ ಪೂರಕವಾಗಿದ್ದ ಪರಿಸರವನ್ನು ಬಳಸಿಕೊಂಡು ತಮ್ಮೆರಡು ಮಕ್ಕಳ ಸಾಹಿತ್ಯಾಸಕ್ತಿ ಬೆಳೆಸಲು ನಿರಂತರ ಶ್ರಮಿಸುತ್ತಿರುವವರು.
ಈ ರೀತಿ ಮಗಳ ಆಸೆ,​ ​ತಾಯಿಯ ಒತ್ತಾಸೆ,​ ​ಸೇರಿ ನವರಾತ್ರಿಯಲ್ಲಿ  ಕಾಳರಾತ್ರಿಯ ವೇಷ ಭೂಷಣ ರೂಪು ಗೊಂಡಿತು.​ ​ತನ್ನದೇ ಆಸಕ್ತಿಯ ವೇಷ ತಾಳಿದಾಗ ಮಗುವಿಗೋ ಬಹಳ ಖುಷಿ. ಮನೆಯಲ್ಲಿದ್ದ ಪರಿಕರಗಳನ್ನು,​ ​ಸುಲಭ ಲಭ್ಯ ವಸ್ತುಗಳನ್ನು ದೊಡ್ಡಮ್ಮನ ಮಗ ಹೇಮಂತ ಮಾತೋಡ್ ನ  ಸಹಾಯದಿಂದ ಅಣ್ಣ ಚಿನ್ಮಯೀ ಅಡಿಗ ಹಾಗು ತಂದೆ ಜನಾರ್ದನ ಅಡಿಗರ ಸಹಕಾರ,​ ​ಪ್ರೋತ್ಸಾಹದಿಂದ ಅಲ್ಲೊಂದು ವಿಶೇಷ ಕಾಳಿಯ ರೂಪ ಪ್ರತ್ಯಕ್ಷ​.​
 
ಅದಕ್ಕೆ ಪೂರಕವಾಗಿ ಎಂಟು ವರುಷದ ಬಾಲೆಯಾದರೂ ಮನಸೆಳೆವ ಆಕೆಯ ಗಡಸು ಸ್ವರದಿಂದ ಒಂದೆರಡು ನಿಮಿಷಗಳ ಸಂಭಾಷಣೆಯೊಂದಿಗೆ ಒಂದಷ್ಟು ನಟನೆಯ ಚಿತ್ರೀಕರಣವನ್ನು ಯುವ ಛಾಯಾಗ್ರಾಹಕ ಸುಕುಮಾರ್ ನಿರ್ವಹಿಸಿದರು.​ ​ನವರಾತ್ರಿಯ ಪರ್ವ ಕಾಲದಲ್ಲಿ  ಅಲ್ಲೊಂದು ಕಾಳಿಕಾ ಮಾತೆಯ ಪ್ರಸ್ತುತಿ  ಮನೆಮಂದಿ ಹಾಗು ಆಸ್ತಿಕ ಜನರ, ಕಲಾಸಕ್ತರ ಗಮನ ಸೆಳೆದದ್ದು  ಸುಳ್ಳಲ್ಲ.

​​

 
 
 
 
 
 
 
 
 

1 COMMENT

Leave a Reply