ಶಹಾಪುರ: ಕಳೆದ 20 ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆ, ಶಹಾಪುರ-ಇವರು ಎಳವೆಯಲ್ಲೆ ಕಣ್ಮರೆ ಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ ಮಕ್ಕಳಿಗಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನೀಡುತ್ತ ಬರುತ್ತಿರುವ “ವಿದ್ಯಾಸಾಗರ ಬಾಲ ಪುರಸ್ಕಾರ” ಕ್ಕೆ ಈ ಬಾರಿ “ಮೊಬೈಲ್ ಮೈಥಿಲಿ ಮತ್ತು ಮುಗ್ಧ ಕತೆಗಳು” ಕೃತಿಯ ಕರ್ತೃ ಉಡುಪಿಯ ಬಹುಮುಖ ಪ್ರತಿಭೆ ಕುಮಾರಿ ಕೆ. ಸುರಭಿ ಕೊಡವೂರು ಆಯ್ಕೆ ಯಾಗಿದ್ದಾಳೆ.
ಉಡುಪಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿರುವ ಸುರಭಿ ಸಂಗೀತ, ನಾಟಕ, ಕೊಳಲು ವಾದನದಲ್ಲಿ ಆಸಕ್ತಿ ಹೊಂದಿದ್ದಾಳೆ. ಪುರಸ್ಕಾರವು ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ರೋಹಿಣಾಕ್ಷ ಶಿರ್ಲಾಲು ಅವರು ಈ ಸಲದ ನಿರ್ಣಾಯಕರಾಗಿದ್ದರು ಮತ್ತು ಸುಮಾರು ಮೂವತ್ತು ಕೃತಿಗಳು ಆಯ್ಕೆಗಾಗಿ ಬಂದಿದ್ದವು ಎಂದು ವೇದಿಕೆ ಅಧ್ಯಕ್ಷ ರವಿ ಹಿರೇಮಠ ತಿಳಿಸಿದ್ದಾರೆ.