ರಾಜ್ಯಮಟ್ಟದ ಸ್ಪರ್ಧೆಗೆ ಸರಕಾರಿ ಪ್ರೌಢಶಾಲೆ ಹಕ್ಲಾಡಿ ಆಯ್ಕೆ 

ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸುಮನಸಾ ಕೊಡವೂರು-ಉಡುಪಿ ಆಯೋಜಿಸಿದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಬೈಂದೂರು ವಲಯದ ಸರಕಾರಿ ಪ್ರೌಢ ಶಾಲೆ ಹಕ್ಲಾಡಿ ಶಾಲೆಯ ಪಂಚವಟಿ ನಾಟಕವು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ರಾಜ್ಯಮಟ್ಟದ ನಾಟಕ ಸ್ಫರ್ಧೆಗೆ ಆಯ್ಕೆಯಾಯಿತು. ದ್ವಿತೀಯವನ್ನು ಜ್ಞಾನಸುಧಾ ಅಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಕಳ, ತಂಡದ ಇದು ಸತ್ಯ, ತೃತೀಯ ಸ್ಥಾನವನ್ನು ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ಮಲ್ಪೆ ತಂಡದ ಸ್ವಾತಂತ್ರö್ಯದ ನಕ್ಷತ್ರಗಳು ಪಡೆದುಕೊಂಡಿತು. ಸ್ಫರ್ಧೆಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದವು.

ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಮಾತನಾಡಿ ಸೂಕ್ತವಾದ ವೇದಿಕೆ, ಅವಕಾಶ ದೊರೆತಾಗ ಹಲವಾರು ಚಿಗುರು ಪ್ರತಿಭೆಗಳು ವಿಕಸನಗೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳು ನಿರಂತರ ಜರಗುವಂತಾಗಬೇಕು. ಅವರಲ್ಲಿನ ಕ್ರಿಯಾಶೀಲತೆಗೆ ನಾಟಕ ಕೈಗನ್ನಡಿ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಪ್ರದೀಪ್‌ಚಂದ್ರ ಕುತ್ಪಾಡಿಯವರನ್ನು ಸುಮನಸಾ ವತಿಯಿಂದ ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಲ್ಪೆ ಸರ್ಕಾರಿ ಪ್ರೌಢ ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲ ಸಿ ಬಂಗೇರ, ಉದ್ಯಮಿ ಸತೀಶ್ ಕೋಟ್ಯಾನ್, ಕೊಡವೂರು, ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವರ್ಗೀಸ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ರಂಗನಟ ಎಂಎಸ್ ಭಟ್, ಸಾಹಿತಿ ಪೂರ್ಣಿಮಾ ಸುರೇಶ್, ರಂಗಕರ್ಮಿ ಲಕ್ಷ್ಮೀನಾರಾಯಣ ಭಟ್ ಸಹಕರಿಸಿದರು.

ಸುಮನಸಾ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು, ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಧನ್ಯವಾದ ಸಲ್ಲಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು.

ಪ್ರಥಮ ಬಹುಮಾನ ವಿಜೇತ ತಂಡವು ಅಕ್ಟೋಬರ್ 10 ಮತ್ತು 11ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ನಾಟಕ ಸ್ಪರ್ಧೆಗೆ ಜಿಲ್ಲೆಯಿಂದ ಆಯ್ಕೆಗೊಂಡಿತು.

 
 
 
 
 
 
 
 
 
 
 

Leave a Reply