ಆಗಸ್ಟ್ 15ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನೋತ್ಸವವನ್ನು ಕೂಡಾ ಆಚರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಸ್ವಾತಂತ್ರ್ಯ ದಿನೋತ್ಸವದ ದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನೋತ್ಸವವನ್ನು ಸರಕಾರಿ ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಆಚರಿಸುವ ಕುರಿತು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ರವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. 
ಪ್ರಥಮ ಸ್ವಾತಂತ್ರ್ಯ ಹೋರಾಟದ ರುವಾರಿಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಗಸ್ಟ್ 15,1796ರಲ್ಲಿ ಜನಿಸಿ ಜನವರಿ26,1831ರಂದು ಗಲ್ಲು ಶಿಕ್ಷೆಗೆ ಗುರಿಯಾದ ಕೆಚ್ಚದೆಯ ಹೋರಾಟಗಾರ ರಾಯಣ್ಣ. ಈ ಎರಡು ದಿನಗಳು ಭಾರತದ ಇತಿಹಾಸ ಪುಟದಲ್ಲಿ ಪ್ರಮುಖ ದಿನಗಳು. ಒಂದು ಸ್ವಾತಂತ್ರ್ಯ ದಿನಾಚರಣೆಯಾದರೆ ಮತ್ತೊಂದು ಗಣ ರಾಜ್ಯೋತ್ಸವ ದಿನ. 
ಇಂತಹ ಅಪ್ರತಿಮ ಹೋರಾಟಗಾರನನ್ನು ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ನೆನಯದೇ ಸ್ವಾತಂತ್ರ್ಯ ಹೋರಾಟಗಾರನಿಗೆ ಅಪಮಾನ ವೆಸಗುತ್ತಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವಾದ ಅಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಹಾಗೂ ರಾಯಣ್ಣ ಜನ್ಮದಿನೋತ್ಸವವನ್ನಾಗಿ ಸರಕಾರಿ ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಆಚರಿಸಿ ರಾಯಣ್ಣನ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮೂಲಕ ಬೇಡಿಕೆ ಇಡಲಾಗಿದೆ.  
ಈ ಸಂದರ್ಭದಲ್ಲಿ ಮಲ್ಪೆ ಸರ್ಕಲ್ ಇನ್ಸ್ಪೆಕ್ಟರ್ ಶರಣ್ ಗೌಡ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅಭಿಮಾನಿ ಬಳಗದ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ಕುಮಾರ್ ಪ್ರಸಾದ್, ಸಿದ್ದು ಪೂಜಾರಿ ಹಾಗು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನೋಟಗಾರ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply