ಪುತ್ತೂರು ತಾಲೂಕಿನ ರಾಮಕುಂಜ ಎಂಬ ಪುಟ್ಟ ಊರಿನ ಮುಗ್ಧ ಬಾಲಕ ವೆಂಕಟ್ರಮಣ. ಅವನು ತನ್ನ ಹೆತ್ತವರ ಜೊತೆಗೆ ತನ್ನ ಏಳನೇ ವರ್ಷಕ್ಕೆ ಉಡುಪಿಗೆ ಶ್ರೀ ಕೃಷ್ಣ ದೇವರ ಪರ್ಯಾಯ ನೋಡಲು ಬಂದದ್ದು, ಸ್ವಾಮೀಜಿಯವರು ಶ್ರೀ ಕೃಷ್ಣ ದೇವರ ಪೂಜೆಯನ್ನು ಮಾಡುವುದನ್ನು ಕಂಡು ರೋಮಾಂಚನಪಟ್ಟದ್ದು, ತನ್ನ ಹೆತ್ತವರ ಬಳಿ ಹೋಗಿ ನಿಂತು
“ನಾನೂ ಕೃಷ್ಣನ ಪೂಜೆಯನ್ನು ಮಾಡಬಹುದೇ?”ಎಂದು ಕೇಳಿದ್ದು, ಹೆತ್ತವರು ಮಗನನ್ನು ಸ್ವಾಮೀಜಿಯವರ ಎದುರು ಕರೆದುಕೊಂಡು ಹೋದದ್ದು, ಅದೇ ಪ್ರಶ್ನೆಯನ್ನು ಹುಡುಗ ಸ್ವಾಮಿಗೆ ಕೇಳಿದ್ದು, ಸ್ವಾಮೀಜಿ.
“ನೀನು ನನ್ನ ಹಾಗೆ ಸನ್ಯಾಸಿ ಆಗುತ್ತೀಯ ಮಗು?” ಎಂದು ಕೇಳಿದಾಗ ಹುಡುಗ ಹಿಂದೆ ಮುಂದೆ ಯೋಚನೆ ಮಾಡದೆ ಆಯ್ತು ಎಂದದ್ದು, ಅದೇ ವರ್ಷ ವೆಂಕಟರಮಣ ಸನ್ಯಾಸ ದೀಕ್ಷೆ ಸ್ವೀಕರಿಸಿ ಪೇಜಾವರ ಶ್ರೀ ಆದದ್ದು…. ಎಲ್ಲವೂ ಶ್ರೀ ಕೃಷ್ಣ ದೇವರ ಸಂಕಲ್ಪವೆ ಆಗಿದೆ. ಎಂಬುದು ನಮಗೆ ಅರ್ಥ ಆಗುತ್ತದೆ.
ಬಾಲಸನ್ಯಾಸವು ಹಳಿ ತಪ್ಪಿ ಹೋದ ಉದಾಹರಣೆಗಳು ಬಹಳ ನಮ್ಮ ಕಣ್ಣ ಮುಂದೆ ಇರುವಾಗ ನಮ್ಮ ಪೇಜಾವರ ಶ್ರೀಗಳು 81 ವರ್ಷಗಳ ಅಖಂಡ ಸನ್ಯಾಸ ವೃತವನ್ನು ಪಾಲನೆ ಮಾಡಿದ್ದು, ಅತ್ಯಂತ ಸರಳವಾಗಿ ಬದುಕಿದ್ದು, ಐದು ಪರ್ಯಾಯಗಳನ್ನು ಯಶಸ್ವೀ ಆಗಿ ಪೂರೈಸಿದ್ದು ವಾದಿರಾಜರ ನಂತರದ ‘ಆಧ್ಯಾತ್ಮದ ಶಿಖರ’ ಎಂದು ಕರೆಸಿ ಕೊಂಡದ್ದು ಕೂಡ ಅದ್ಭುತವೇ ಸರಿ! ಅವರಿಗೆ ಅವರೇ ಸಾಟಿ.
ತನ್ನ ಸನ್ಯಾಸ ಜೀವನದಲ್ಲಿ 38 ನ್ಯಾಯ ಸುಧಾ ಮಂಗಳ ಆಚರಣೆ ಕೂಡ ಶ್ರೇಷ್ಟವಾದ ಸಾಧನೆ. ದಿನಕ್ಕೆ ಕೇವಲ ನಾಲ್ಕು ಘಂಟೆ ಮಲಗುತ್ತಿದ್ದ (ಇಳಿ ವಯಸ್ಸಿನಲ್ಲಿ ಕೂಡ) ಅವರದ್ದು ಅತ್ಯಂತ ನಿಬಿಡ ಚಟುವಟಿಕೆ. ಪಾದಯಾತ್ರೆ, ಧರ್ಮ ಬೋಧೆ, ಧರ್ಮ ಜಾಗೃತಿ, ಗೋ ರಕ್ಷಾ ಕಾರ್ಯಕ್ರಮಗಳು, ನಿರಂತರ ಸಂಚಾರ, ಆಧ್ಯಾತ್ಮ ಸಾಧನೆ… ಇಷ್ಟೆಲ್ಲಾ ಅವರಿಗೆ ಹೇಗೆ ಸಾಧ್ಯ ಆಯಿತು? ಪ್ರಯಾಣದ ಅವಧಿಯಲ್ಲಿ ಕೂಡ ತನ್ನ ಕನ್ನಡಕವನ್ನು ಕಣ್ಣಿಗೆ ಏರಿಸಿ ಕೊಂಡು ನಿರಂತರ ಓದುವುದು ಮತ್ತು ಬರೆಯುವುದು ಮಾಡುತ್ತಿದ್ದರು.
ಆ ಉಪನ್ಯಾಸಗಳ ಸಾರ ಸಂಗ್ರಹ ಆದ ಬೃಹತ್ ಗ್ರಂಥವೆ ‘ಗೀತಾ ಸಾರೋದ್ಧಾರ’. ಪ್ರತೀ ಒಬ್ಬರೂ ಓದಬೇಕಾದ ಪುಸ್ತಕ ಅದು. ಅದರ ಜೊತೆಗೆ ಅವರು ಬೆಂಗಳೂರು, ಮುಂಬೈ ಮೊದಲಾದ ಕಡೆ ಪೇಜಾವರ ಮಠದ ಶಾಖೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶ್ರಯ – ಅಶನ – ವಸನ -ಶಿಕ್ಷಣಕ್ಕೆ ಅವಕಾಶ ನೀಡಿದ್ದು ಕೂಡ ಶ್ರೇಷ್ಟವಾದ ಮೇಲ್ಪಂಕ್ತಿ.
ಕೇವಲ ಆತ್ಮಸಾಕ್ಷಿಗೆ ಸರಿಯಾಗಿ ನಡೆದರು. ದಲಿತರ ಕೇರಿಯ ಅಭಿವೃದ್ಧಿ, ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ, ಗೋರಕ್ಷ ಅಭಿಯಾನ, ರಾಮಮಂದಿರ ನಿರ್ಮಾಣ, ಮತಾಂತರದ ವಿರುದ್ಧ ಜಾಗೃತಿ… ಮೊದಲಾದ ಕೆಲಸಗಳಲ್ಲಿ ಮುಳುಗಿದರು. ಮುಸ್ಲಿಂ ಸಹೋದರರಿಗೆ ಇಫ್ತಾರ್ ಕೂಟ ಆಯೋಜನೆ ಮಾಡಿದರು. ವಿಶ್ವಹಿಂದೂ ಪರಿಷತ್ತಿನ ಬಹು ದೊಡ್ಡ ಮಾರ್ಗದರ್ಶಕರಾಗಿ ನಿಂತರು.