ಪೇಜಾವರ ಅಜರಾಮರ​~ ​ರಾಜೇಂದ್ರ ಭಟ್ ಕೆ.​​ 

ರಾಷ್ಟ್ರಸಂತ ಪೇಜಾವರ ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವೆ ಪೂರ್ತಿ( ಡಿಸೆಂಬರ್ 29) ಆಯ್ತು. ಅವರ 88 ವರ್ಷಗಳ ಸುದೀರ್ಘ ಮತ್ತು ಶುದ್ಧವಾದ  ಪರಿವ್ರಾಜಕ ಜೀವನದ  ಪುಟಗಳನ್ನು ತಿರುವಿದರೆ ವಿಸ್ಮಯವೇ ಕಣ್ಣು ಮುಂದೆ ಬರುತ್ತದೆ. ಒಬ್ಬ ಸಂತ ತನ್ನ ಮಡಿ, ಮೈಲಿಗೆಗಳ ಕೋಟೆಯನ್ನು ದಾಟಿ ನಿಂತು ಇಷ್ಟೊಂದು ಸಮಾಜ ಸುಧಾರಣೆ ಮಾಡಲು ಹೇಗೆ ಸಾಧ್ಯವಾಯಿತು? ಎಲ್ಲವೂ ಕೃಷ್ಣನ ಅನುಗ್ರಹ ಎಂದು ಅವರು ಹೇಳಿದ್ದರು. 

ಪುತ್ತೂರು ತಾಲೂಕಿನ ರಾಮಕುಂಜ ಎಂಬ ಪುಟ್ಟ ಊರಿನ ಮುಗ್ಧ ಬಾಲಕ ವೆಂಕಟ್ರಮಣ. ಅವನು ತನ್ನ ಹೆತ್ತವರ ಜೊತೆಗೆ ತನ್ನ ಏಳನೇ ವರ್ಷಕ್ಕೆ ಉಡುಪಿಗೆ ಶ್ರೀ ಕೃಷ್ಣ ದೇವರ ಪರ್ಯಾಯ ನೋಡಲು ಬಂದದ್ದು, ಸ್ವಾಮೀಜಿಯವರು ಶ್ರೀ ಕೃಷ್ಣ ದೇವರ ಪೂಜೆಯನ್ನು ಮಾಡುವುದನ್ನು ಕಂಡು ರೋಮಾಂಚನಪಟ್ಟದ್ದು, ತನ್ನ ಹೆತ್ತವರ ಬಳಿ  ಹೋಗಿ ನಿಂತು
“ನಾನೂ ಕೃಷ್ಣನ ಪೂಜೆಯನ್ನು ಮಾಡಬಹುದೇ?”ಎಂದು ಕೇಳಿದ್ದು, ಹೆತ್ತವರು ಮಗನನ್ನು ಸ್ವಾಮೀಜಿಯವರ ಎದುರು ಕರೆದುಕೊಂಡು ಹೋದದ್ದು, ಅದೇ ಪ್ರಶ್ನೆಯನ್ನು ಹುಡುಗ  ಸ್ವಾಮಿಗೆ ಕೇಳಿದ್ದು, ಸ್ವಾಮೀಜಿ​. 

“ನೀನು ನನ್ನ ಹಾಗೆ ಸನ್ಯಾಸಿ ಆಗುತ್ತೀಯ ಮಗು?” ಎಂದು ಕೇಳಿದಾಗ ಹುಡುಗ ಹಿಂದೆ ಮುಂದೆ ಯೋಚನೆ ಮಾಡದೆ ಆಯ್ತು ಎಂದದ್ದು, ಅದೇ ವರ್ಷ ವೆಂಕಟರಮಣ ಸನ್ಯಾಸ ದೀಕ್ಷೆ  ಸ್ವೀಕರಿಸಿ ಪೇಜಾವರ ಶ್ರೀ  ಆದದ್ದು…. ಎಲ್ಲವೂ ಶ್ರೀ ಕೃಷ್ಣ ದೇವರ ಸಂಕಲ್ಪವೆ ಆಗಿದೆ​. ಎಂಬುದು ನಮಗೆ ಅರ್ಥ ಆಗುತ್ತದೆ. 

ಬಾಲಸನ್ಯಾಸವು ಹಳಿ ತಪ್ಪಿ ಹೋದ ಉದಾಹರಣೆಗಳು ಬಹಳ ನಮ್ಮ ಕಣ್ಣ ಮುಂದೆ ಇರುವಾಗ ನಮ್ಮ ಪೇಜಾವರ ಶ್ರೀಗಳು 81 ವರ್ಷಗಳ ಅಖಂಡ ಸನ್ಯಾಸ ವೃತವನ್ನು ಪಾಲನೆ ಮಾಡಿದ್ದು, ಅತ್ಯಂತ ಸರಳವಾಗಿ ಬದುಕಿದ್ದು, ಐದು  ಪರ್ಯಾಯಗಳನ್ನು ಯಶಸ್ವೀ ಆಗಿ ಪೂರೈಸಿದ್ದು ವಾದಿರಾಜರ ನಂತರದ  ‘ಆಧ್ಯಾತ್ಮದ ಶಿಖರ’ ಎಂದು ಕರೆಸಿ ಕೊಂಡದ್ದು ಕೂಡ ಅದ್ಭುತವೇ ಸರಿ! ಅವರಿಗೆ ಅವರೇ ಸಾಟಿ. 

ತನ್ನ ಸನ್ಯಾಸ ಜೀವನದಲ್ಲಿ 38 ನ್ಯಾಯ ಸುಧಾ ಮಂಗಳ ಆಚರಣೆ ಕೂಡ ಶ್ರೇಷ್ಟವಾದ ಸಾಧನೆ. ದಿನಕ್ಕೆ ಕೇವಲ ನಾಲ್ಕು ಘಂಟೆ ಮಲಗುತ್ತಿದ್ದ (ಇಳಿ ವಯಸ್ಸಿನಲ್ಲಿ ಕೂಡ) ಅವರದ್ದು  ಅತ್ಯಂತ ನಿಬಿಡ ಚಟುವಟಿಕೆ.  ಪಾದಯಾತ್ರೆ, ಧರ್ಮ ಬೋಧೆ, ಧರ್ಮ ಜಾಗೃತಿ, ಗೋ ರಕ್ಷಾ ಕಾರ್ಯಕ್ರಮಗಳು, ನಿರಂತರ ಸಂಚಾರ, ಆಧ್ಯಾತ್ಮ ಸಾಧನೆ… ಇಷ್ಟೆಲ್ಲಾ ಅವರಿಗೆ ಹೇಗೆ ಸಾಧ್ಯ ಆಯಿತು? ಪ್ರಯಾಣದ ಅವಧಿಯಲ್ಲಿ ಕೂಡ ತನ್ನ ಕನ್ನಡಕವನ್ನು ಕಣ್ಣಿಗೆ  ಏರಿಸಿ ಕೊಂಡು ನಿರಂತರ ಓದುವುದು ಮತ್ತು ಬರೆಯುವುದು ಮಾಡುತ್ತಿದ್ದರು.
 
ವಿಶ್ರಾಂತಿ ಇಲ್ಲವೇ ಇಲ್ಲ. 30-35 ಕೆಜಿ ತೂಕದ ಆ ದೇಹದಲ್ಲಿ ಹರಿಯುತ್ತಿದ್ದ ಆಧ್ಯಾತ್ಮ ಶಕ್ತಿ ಯಾವುದದು? ತಮ್ಮ ವಿದ್ಯಾ ಗುರುಗಳಾದ ಪಂಡಿತ ವಿದ್ಯಾಮಾನ್ಯರ ತಪಸ್ಸಿನ ಶಕ್ತಿಯನ್ನು ಈ ಶಿಷ್ಯ ಆಪೋಶನ ಮಾಡಿಕೊಂಡದ್ದು ಹೇಗೆ? ನಾನು ಇಂದು ಅವರ ಆಧ್ಯಾತ್ಮ ಶಕ್ತಿಯ ಬಗ್ಗೆ ಹೆಚ್ಚಿಗೆ  ಬರೆಯಲು ಹೋಗುವುದಿಲ್ಲ. ಅದು ಬರೆದು ಮುಗಿಯುವುದು ಕೂಡ ಇಲ್ಲ! ಭಗವದ್ಗೀತೆಯ ಕುರಿತು ಅವರು ಮಾಡಿದ ಸಾವಿರ ಸಾವಿರ ಉಪನ್ಯಾಸ ಅಮೋಘ ಆದವುಗಳು. ಅತ್ಯಂತ ಕ್ಲಿಷ್ಟವಾದ ಮತ್ತು  ಜಟಿಲವಾದ ತತ್ವಗಳನ್ನು  ಸುಲಭವಾಗಿ ಎಲ್ಲರಿಗೂ ಅರ್ಥ ಆಗುವಂತೆ ಕಥೆ ಮತ್ತು ಉಪಕಥೆಗಳ ಮೂಲಕ ಅವರು ಬಿಡಿಸಿ ಬಿಡಿಸಿ ಹೇಳುವುದು ನಿಜಕ್ಕೂ ಅದ್ಭುತ! 

ಆ ಉಪನ್ಯಾಸಗಳ ಸಾರ  ಸಂಗ್ರಹ ಆದ ಬೃಹತ್ ಗ್ರಂಥವೆ ‘ಗೀತಾ ಸಾರೋದ್ಧಾರ’. ಪ್ರತೀ ಒಬ್ಬರೂ ಓದಬೇಕಾದ ಪುಸ್ತಕ ಅದು. ಅದರ ಜೊತೆಗೆ ಅವರು ಬೆಂಗಳೂರು, ಮುಂಬೈ ಮೊದಲಾದ ಕಡೆ ಪೇಜಾವರ ಮಠದ ಶಾಖೆಗಳನ್ನು ಸ್ಥಾಪನೆ ಮಾಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶ್ರಯ – ಅಶನ – ವಸನ -ಶಿಕ್ಷಣಕ್ಕೆ  ಅವಕಾಶ ನೀಡಿದ್ದು ಕೂಡ ಶ್ರೇಷ್ಟವಾದ ಮೇಲ್ಪಂಕ್ತಿ. 
 
ನಾನು ಅವರಲ್ಲಿ ತುಂಬಾ ಇಷ್ಟ ಪಟ್ಟದ್ದು ಓರ್ವ ಸಮಾಜ ಸುಧಾರಕರ ಮುಖ. ಸಮಾಜಕ್ಕೆ ಶಾಪವಾಗಿರುವ ಅಸ್ಪೃಶ್ಯತೆಯ ಬಗ್ಗೆ ಯೋಚನೆ ಮಾಡಿ ಅದಕ್ಕೆ ಪರಿಹಾರ ಹುಡುಕಲು ಪ್ರಯತ್ನ ಪಟ್ಟವರು ಅವರು. ಓರ್ವ ಕಾವಿ ತೊಟ್ಟ ಸ್ವಾಮೀಜಿ ಹರಿಜನರ ಕೇರಿಗಳಿಗೆ ಕಾಲ್ನಡಿಗೆಯಲ್ಲಿ  ಹೊರಟದ್ದು, ಅವರೊಂದಿಗೆ ಬೆರೆತದ್ದು, ಅವರನ್ನು ಆಶೀರ್ವಾದ ಮಾಡಿದ್ದು  ಕೆಲವರಿಗೆ ಪಥ್ಯ ಆಗಲಿಲ್ಲ. ಆಗ ಅವರ ಟೀಕೆಗೆ ಒಮ್ಮೆ ಬೇಸರ ಮಾಡಿಕೊಂಡು “ನಾನು ಪೀಠ ತ್ಯಾಗ ಮಾಡಿ ಹರಿದ್ವಾರಕ್ಕೆ ಹೋಗಿ ಗುಡಿಸಲು ಕಟ್ಟಿಕೊಂಡು ಬದುಕುತ್ತೇನೆ!” ಎಂದು ಅವರು ಹೇಳಿದ್ದುಂಟು. ಕ್ರಮೇಣ ಸ್ವಾಮೀಜಿ ಟೀಕೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟರು.

ಕೇವಲ ಆತ್ಮಸಾಕ್ಷಿಗೆ ಸರಿಯಾಗಿ ನಡೆದರು. ದಲಿತರ ಕೇರಿಯ ಅಭಿವೃದ್ಧಿ, ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ, ಗೋರಕ್ಷ ಅಭಿಯಾನ, ರಾಮಮಂದಿರ ನಿರ್ಮಾಣ, ಮತಾಂತರದ ವಿರುದ್ಧ ಜಾಗೃತಿ…​ ​ಮೊದಲಾದ ಕೆಲಸಗಳಲ್ಲಿ ಮುಳುಗಿದರು. ಮುಸ್ಲಿಂ ಸಹೋದರರಿಗೆ ಇಫ್ತಾರ್ ಕೂಟ ಆಯೋಜನೆ ಮಾಡಿದರು. ವಿಶ್ವಹಿಂದೂ ಪರಿಷತ್ತಿನ ಬಹು ದೊಡ್ಡ ಮಾರ್ಗದರ್ಶಕರಾಗಿ ನಿಂತರು. 
 
ತಪ್ಪು ದಾರಿ ಹಿಡಿದ  ರಾಜಕಾರಣಿಗಳ ಕಿವಿ ಹಿಡಿದು  ಬುದ್ದಿ ಹೇಳಿದರು. ಹಿಂದೂ ಸಾಮ್ರಾಜ್ಯದ ಬಲವರ್ಧನೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಮಾಡಿದರು. ಪೇಜಾವರ ಅಜರಾಮರ ಎಂಬ ಘೋಷಣೆಗೆ ಕಾರಣ ಆದರು.ಸನ್ಯಾಸ ವೃತವನ್ನು ತನ್ನ ಕೊನೆಯ ಉಸಿರಿನವರೆಗೂ ಅತ್ಯಂತ  ಸಂಭ್ರಮದಿಂದ  ಆಚರಿಸಿದರು ಮತ್ತು ತನ್ನ ಧೀಶಕ್ತಿಯನ್ನು ಸಮಾಜದ ಅಭಿವೃದ್ಧಿಗೆ ಧಾರೆ ಎರೆದರು. ಅವರ ಆಶೀರ್ವಾದ ನಮಗೆಲ್ಲರಿಗೂ ಸಿಗಲಿ.
 
 
 
 
 
 
 
 
 
 
 

Leave a Reply