ಉಡುಪಿ ಕೋವಿಡ್ 19 ಸೋಂಕು ತಾಗಿ ಆಸ್ಪತ್ರೆಯಲ್ಲಿದ್ದಾಗ, ತನ್ನೊಂದಿಗೆ ಆಸ್ಪತ್ರೆಯಲ್ಲಿದ್ದ ಅಜ್ಜಿಯನ್ನೂ ಪ್ರೀತಿ ಯಿಂದ ಆರೈಕೆ ಮಾಡಿ, ಮಾನಸಿಕ ಸ್ಥೈರ್ಯ ತುಂಬಿದ ಕಾಪು ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಸುಧಾಕರ ಭಂಡಾರಿ ಅವರನ್ನು ಸ್ವತಃ ಅಜ್ಜಿಯೇ ಕರೆದು, ಮೊಮ್ಮಗನ ಮದುವೆ ಮಂಟಪದಲ್ಲಿ ಅಭಿನಂದಿಸಿದ ಅಜ್ಜಮ್ಮ.
ಕಾಪು ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಸುಧಾಕರ ಭಂಡಾರಿ ಅವರು ಕೋವಿಡ್ ಪಾಸಿಟಿವ್ ಬಂದು ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಸಂದರ್ಭದಲ್ಲಿ ಸಾಸ್ತಾನದ ಎಡಬೆಟ್ಟು ಚೇಂಪಿಯ ನಿವಾಸಿ, ನಿವೃತ್ತ ಗ್ರಾಮ ಕರಣಿಕ ಜನಾರ್ದನ ಆಚಾರ್ಯ ಮತ್ತವರ ಮನೆಯವರೂ ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕುಟುಂಬ ಸದಸ್ಯರೆಲ್ಲಾ ಗುಣಮುಖರಾಗಿ ಮನೆಗೆ ತೆರಳಿದ್ದು, ಜನಾರ್ದನ ಆಚಾರ್ಯ ಅವರ ತಾಯಿ 87 ವರ್ಷದ ಜಾನಕಿ ಆಚಾರ್ಯ ಅವರು ಮತ್ತೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯುವ ಅನಿವಾರ್ಯತೆಗೆ ಸಿಲುಕಿದ್ದರು.
ಮನೆಯವರಿಗೆ ಅತ್ತ ಮನೆಗೂ ಹೋಗಲಾಗದೇ, ತಾಯಿಯೊಂದಿಗೆ ಕುಳಿತುಕೊಳ್ಳಲಾರದ ಪರಿಸ್ಥಿತಿ ಬಂದಾಗ ಪೊಲೀಸ್ ಸುಧಾ ಕರ್ ಅವರು ಜಾನಕಿ ಆಚಾರ್ಯ ಅವರಿಗೆ ನೆರವಿಗೆ ಧಾವಿಸಿದ್ದರು. ಆಸ್ಪತ್ರೆಯಲ್ಲಿ ಇರುವಷ್ಟು ದಿನಗಳ ಕಾಲ ಸುಧಾಕರ್ ಅವರು ಅವರನ್ನು ನೋಡಿಕೊಂಡಿದ್ದು, ಮನೆಯವರ ಒಡನಾಟವಿಲ್ಲದೇ ಮಾನಸಿಕವಾಗಿ ನೊಂದಿದ್ದ ಅಜ್ಜಿಗೆ ಧೈರ್ಯ ತುಂಬಿದ್ದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಸ್ವತಃ ಸುಧಾಕರ್ ಅವರೇ ಜಾನಕಿ ಆಚಾರ್ಯ ಅವನ್ನು ಆಸ್ಪತ್ರೆಯ ನಾಲ್ಕು ಮಹಡಿಯ ಮೇಲಿನ ಕೋಣೆಯಿಂದ ಕೆಳಗಿನವರೆಗೆ ತಂದು ಬಿಟ್ಟು, ಮನೆಯವರಿಗೆ ಒಪ್ಪಿಸಿದ್ದರು. ಪೊಲೀಸ್ ಅಧಿಕಾರಿಯ ಸೇವೆಯು ಅಜ್ಜಿ ಮತ್ತು ಅಜ್ಜಿಯ ಮನೆಯವರ ಮೆಚ್ಚುಗೆಗೆ ಪಾತ್ರವಾಗಿತ್ತು.
ಮೊಮ್ಮಗನ ಮಾಡುವೆ ಸಂದರ್ಭ: ಪೀತಿಯಿಂದ ಅಜ್ಜಿ ಸುಧಾಕರ್ ಭಂಡಾರಿ ಅವರಿಗೆ ಸ್ವತಃ ದೂರವಾಣಿ ಕರೆ ಮಾಡಿ, ತನ್ನ ಮೊಮ್ಮಗನ ಮದುವೆಗೆ ಆಮಂತ್ರಿಸಿದ್ದರು. ಅಜ್ಜಿಯ ಪ್ರೀತಿಯ ಕರೆಗೆ ಸಂತೋಷದಿಂದ ಮದುವೆಗೆ ಆಗಮಿಸಿದ ಸುಧಾಕರ್ ಭಂಡಾರಿ ಅವರನ್ನು ಮದುವೆ ಮನೆಯಲ್ಲಿ ಎಲ್ಲರಿಗೆ ಪರಿಚಯಿಸಿ ಕೊಟ್ಟು ಸಮ್ಮಾನಿಸುವ ಮೂಲಕ ಉಪಕಾರ ಸ್ಮರಣೆ ಅಜ್ಜಮ್ಮ ಮಾಡಿ ಕೊಂಡಿದ್ದಾರೆ.
~ಹಿರಿಯರಿಗೆ ಉಪಕಾರ ಮಾಡುವುದು ನಮ್ಮ ಕರ್ತವ್ಯ. ನಾನು ಸಹಾಯ ಮಾಡಿದ್ದನ್ನು ಮರೆಯದೆ ಮೂರು ತಿಂಗಳ ಬಳಿಕ ಅಜ್ಜಮ್ಮನನ್ನನ್ನು ಕರೆದು ಗೌರವಿಸಿರುವುದು ತುಂಬಾ ಸಂತೋಷವಾಗಿದೆ. ಇಂತಹ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ನಮ್ಮ ಪೊಲೀಸ್ ಇಲಾಖೆ, ಕೋವಿಡ್ ಆಸ್ಪತ್ರೆಯ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
ಸುಧಾಕರ ಭಂಡಾರಿ, ಹೆಡ್ ಕಾನ್ಸ್ಟೇಬಲ್ , ಕಾಪು ಪೊಲೀಸ್ ಠಾಣೆ