ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ

ನೂರು ವರ್ಷಗಳ ನಂತರ ದೇಶದಲ್ಲಿ ಪ್ರಕಟವಾಗಿರುವ  ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ  (ಸಂಸ್ಕೃತ , 24 ಸಂಪುಟ ಗಳು) ಒಂದು ಪ್ರತಿಯನ್ನು ಭಾರತದ ಶಕ್ತಿ ಕೇಂದ್ರ ಸಂಸತ್ತಿನ ಗ್ರಂಥಾಲಯಕ್ಕಾಗಿ ಸಲ್ಲಿಸಲಾಗಿದೆ​. ಶ್ರೀ ಪಲಿಮಾರು ಮಠದ ತತ್ವ ಸಂಶೋಧನ ಸಂಸತ್ ನ ವತಿಯಿಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರಕಟಗೊಂಡು ಶ್ರೀ ವಿಶ್ವೇಶತೀರ್ಥ ಶ್ರೀಪಾದರೂ ಸೇರಿದಂತೆ ಅನೇಕ‌ಮಾಧ್ವ ಮಠಾಧೀಶರ ಉಪಸ್ಥಿತಿಯಲ್ಲಿ  ಪಲಿಮಾರು ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ವೈಭವದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತ್ತು .
ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಿ ಪ್ರಹ್ಲಾದ್ ಜೋಷಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು  ಗ್ರಂಥ ಪ್ರತಿಯನ್ನು ಹಸ್ತಾಂತರಿಸಿದರು​. ವಾಸುದೇವ ಭಟ್ ಪೆರಂಪಳ್ಳಿ ಇದನ್ನು ಸಂಯೋಜಿಸಿದ್ದರು.​​ 
ಪೇಜಾವರ ಮಠದ ಪರವಾಗಿ ವಿಷ್ಣುಮೂರ್ತಿ ಆಚಾರ್ಯ ಅನಂತ ಜಿಎ . ಕೃಷ್ಣ ಭಟ್ , ಪೇಜಾವರ ಮಠದ ದೆಹಲಿ ಶಾಖೆಯ ವ್ಯವಸ್ಥಾಪಕ ದೇವೀಪ್ರಸಾದ್ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ಸಚಿವರೊಂದಿಗೆ ಅನೇಕ ವಿಷಯಗಳ ಚರ್ಚೆ ನಡೆಸಿದರು​. ಸಚಿವರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು ಭಕ್ತಿ ಗೌರವ ಅರ್ಪಿಸಿದರು . ಶ್ರೀಗಳೂ ಸಚಿವರಿಗೆ ಶಾಲು,​ ​ಫಲ, ಶ್ರೀಕೃಷ್ಣ ಪ್ರಸಾದ, ಮಂತ್ರಾಕ್ಷತೆ ನೀಡಿ ಅಭಿನಂದಿಸಿದರು​. 
 

ತುಳು ಲಿಪಿಯೂ ಸಂಸತ್ ಗ್ರಂಥಾಲಯಕ್ಕೆ: ಈ ಮಹಾಭಾರತ ಗ್ರಂಥಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತುಳು ಹಸ್ತಾಕ್ಷರವನ್ನೂ ಹಾಕಿರುವುದರಿಂದ ಸಂಸತ್ ಗ್ರಂಥಾಲಯಕ್ಕೆ ತುಳು ಲಿಪಿಗೂ ಪ್ರವೇಶ ದೊರೆತಂತಾಗಿದೆ​​​.

 
 
 
 
 
 
 
 
 
 
 

Leave a Reply