ದೇವರ ಬಗೆಗಿನ ಜ್ಞಾನ ಕಡಿಮೆಯಾಗಿದೆ: ಪಂಡಿತ ಅನಿರುದ್ಧಾಚಾರ್ಯ ಪಾಂಡುರ೦ಗಿ ಮಾತನಾಡಿ, ದೇವರಲ್ಲಿ ಏನೇನೋ ಲೌಕಿಕ ವಸ್ತು, ವಿಷಯಗಳನ್ನು ಕೇಳುತ್ತೇವೆ. ಇದಕ್ಕೆ ಮಿತಿಗಳೇ ಇರುವುದಿಲ್ಲ. ಆದರೆ ಸಂಚಿತ ಕರ್ಮಗಳನ್ನು ಕಳೆದುಕೊಳ್ಳಲು ನಿನ್ನ ಬಗೆಗಿನ ಜ್ಞಾನವನ್ನು ಕೊಡು ಎಂದು ಬೇಡಬೇಕು ಎಂದರು. ವರ್ತಮಾನದ ಸಂದರ್ಭದಲ್ಲಿ ಒಂದು ಕುಟುಂಬದಲ್ಲೇ ಸಾಮರಸ್ಯ ಇಲ್ಲವಾಗಿದೆ. ಪತಿ, ಪತ್ನಿ, ಮಕ್ಕಳು ಒಂದೊ೦ದು ವಿಚಿತ್ರ ಮನೋಸ್ಥಿತಿ ಹೊಂದಿರುತ್ತಾರೆ. ಹಾಗಾಗಿ ನಿತ್ಯವೂ ಮನೆಯಲ್ಲಿ ವೈಮನಸ್ಯ ಜೀವಂತವಾಗಿರುತ್ತದೆ. ದೇವರ ಬಗೆಗಿನ ಜ್ಞಾನ ಮತ್ತು ಭಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದರು.
ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ರೋಗಮೋಚನ ಶ್ರೀ ಧನ್ವಂತರಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಲೋಕವನ್ನೇ ಕಾಡಿದ ಕರೊನಾ ಮಹಾಮಾರಿ ಅಬ್ಬರ ಕಡಿಮೆಯಾಗತೊಡಗಿತು. ಗುರುಗಳ ಸಂಕಲ್ಪ ಮತ್ತು ತಪಸ್ಸು ನಾಡಿನ ಜನತೆಗೆ ಭಯಮುಕ್ತರನ್ನಾಗಿಸಿತು ಎಂದರು.
ವಿವಿಧ ಕಾರ್ಯಕ್ರಮ: ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾದಿ ಮಠದಲ್ಲಿ ಶ್ರೀ ಧನ್ವಂತರಿ ದೇವರಿಗೆ ಪ್ರತಿಷ್ಠಾಪನಾ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಪ್ರತಿಷ್ಠಾಪನಾ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಧನ್ವಂತರಿ ಸನ್ನಿಧಿಯಲ್ಲಿ ಬೆಳಗಿನಿಂದ ಶ್ರೀ ವಿಷ್ಣು ಸಹಸ್ರನಾಮ ಮಹಾಯಾಗ, ಶ್ರೀ ಧನ್ವಂತರಿ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕಾರ ನೆರವೇರಿತು. ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯ ಸಂತುಷ್ಟ ತೀರ್ಥರ ಬೃಂದಾವನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.