ಮಲ್ಪೆ: ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ಪ್ರತಿವರ್ಷದಂತೆ ಈ ಸಲವೂ ಮಲ್ಪೆ ಪಡುಕರೆ ಸಮೀಪ ಸಮುದ್ರ ಮಧ್ಯೆ ಇರುವ ಮಾಲ್ದಿ ದ್ವೀಪದಲ್ಲಿ ಮಕರ ಸಂಕ್ರಮಣದ ವಿಶೇಷ ಪೂಜೆ ನಡೆಯಿತು.
ಪ್ರಾತಃ ಕಾಲ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮೀನುಗಾರರು ದೇವಳದಲ್ಲಿ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಮಲ್ಪೆ ಬಂದರು ಸಮೀಪದ ರಾಜರಾಜೇಶ್ವರಿ ಟೂರಿಸ್ಟ್ ಬೋಟಿನಲ್ಲಿ ಮಾಲ್ದಿ ದೀಪಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರಗಿದವು. ಬಳಿಕ ಸಮುದ್ರರಾಜನಿಗೆ ಪುಷ್ಪ, ಕ್ಷೀರ ಮತ್ತು ಸಿಯಾಳವನ್ನು ಸಮರ್ಪಿಸಿ ಮತ್ಸ್ಯ ಸಂಪತ್ತಿಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್ ಜಿ, ಸದಸ್ಯರಾದ ಜನಾರ್ದನ್ ಕೊಡವೂರು, ರಾಜ ಎ. ಸೇರಿಗಾರ, ಭಾಸ್ಕರ್ ಪಾಲನ್ ಬಾಚನಬೈಲು, ಚಂದ್ರಕಾಂತ್ ಪುತ್ರನ್, ಹರೀಶ್ ಕೋಟ್ಯಾನ್, ಶ್ಯಾಮಸುಂದರ್ ಭಟ್, ಅನಂತ ಪದ್ಮನಾಭ್ ಭಟ್, ದೇವಳದ ಭಕ್ತವೃಂದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ, ಸಂಧ್ಯಾ ಪ್ರಕಾಶ್, ಪೂರ್ಣಿಮಾ ಜನಾರ್ದನ್, ವಿಜಯಾ ಭಾಸ್ಕರ್, ಸುರೇಶ್ ಕೆ., ಉಮೇಶ್ ಕಾಂಚನ್, ರಾಮ ಸೇರಿಗಾರ ಹಾಗೂ ಪ್ರಮುಖ ಮೀನುಗಾರು ಪಾಲ್ಗೊಂಡಿದ್ದರು.
ಶಂಕರನಾರಾಯಣ ದೇವಸ್ಥಾನದ ಜೀರ್ಣೋದ್ದಾರದ ಪೂರ್ವದಲ್ಲಿ ನಡೆಸಲಾದ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಂತೆ ದೇವಳಕ್ಕೂ ಮಾಲ್ದಿ ದ್ವೀಪದಲ್ಲಿರುವ ದೈವಿಶಕ್ತಿಗೂ ವಿಶೇಷ ನಂಟಿದೆ. ವರ್ಷಕೊಮ್ಮೆ ಮಕರ ಸಂಕ್ರಮಣದ ದಿನ ಅಲ್ಲಿ ಪೂಜೆ ಸಲ್ಲಿಸಿ ಬರಬೇಕೆಂದು ಕಂಡು ಬಂದಿತ್ತು.