ಕೃಷ್ಣ ಮಠದ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಕ ಕುಶಲಕರ್ಮಿಗಳಿಗೆ ಸಿಗಲಿದೆ ಪ್ರೋತ್ಸಾಹ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸೋದೆ ಶ್ರೀ ವಾದಿರಾಜ ಯತಿಗಳಿಂದ ಪ್ರಾರಂಭಿಸಲ್ಪಟ್ಟ ದ್ವೈವಾರ್ಷಿಕ ಪರ್ಯಾಯಕ್ಕೆ 500 ವರ್ಷಗಳಾಗಿದ್ದು, ಈ ಹಿನ್ನೆಲೆ ಪಂಚಶತಮಾನೋತ್ಸವ ಕಾರ್ಯಕ್ರಮವು ಜನವರಿ 16ರಿಂದ 23 ರವರೆಗೆ ನಡೆಯಲಿದೆ. ಅನೇಕ ಧಾರ್ಮಿಕ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದ್ ರಾಜ್ ಹೇಳಿದರು.

ಶ್ರೀ ಅದಮಾರು ಮಠದ ಆನಂದ ಪ್ರಕಾಶನದಿಂದ “ದಿನಕ್ಕೊಂದು ಭಾಗವತಾಮೃತ ಬಿಂದುಗಳು” ಪ್ರಕಟಣೆಗೊಳ್ಳಲಿದ್ದು, ಇದು ಪಲಿಮಾರು ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥರ ಭಾಗವತ ಪ್ರವಚನಗಳ ಸಂಗ್ರಹ ಕೃತಿಯಾಗಿದೆ. ಜನವರಿ 16ರಂದು ಅನಾವರಣಗೊಳ್ಳಲಿದೆ.

ಹಾಗೆ ಪರ್ಯಾಯ ಶ್ರೀಗಳ ಆಶಯದಂತೆ ಗ್ರಾಮೀಣ ಭಾಗದ ಶ್ರಮಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ 8 ದಿನಗಳ ಕಾಲ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ, ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಪಶ್ಚಿಮ ಬಂಗಾಲ, ಒರಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದ ಮಧುಬನಿ ಕಲಾ ಪ್ರಕಾರಗಳು, ಮಿಥಿಲಾ ಚಿತ್ರ, ಮಂಜುಷಾ ಚಿತ್ರ, ಗೋದ್ನ ಚಿತ್ರ, ಕಾಲಿಘಟ್ ಪೈಂಟಿಂಗ್,

ಪಟಚಿತ್ರ, ಲೋಹಶಿಲ್ಪ, ಎರಕಶಿಲ್ಪ, ಗೋಂಡು ಕಲಾಕೃತಿ, ಮಣ್ಣಿನ, ಹುಲ್ಲಿನ ಕಲಾಕೃತಿಗಳು ಹಾಗೆಯೇ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಧಾರವಾಡ, ಶಿರಸಿ, ಕುಂದಾಪುರ, ಬೆಂಗಳೂರು, ಉಡುಪಿ ಭಾಗದ ಗ್ರಾಮೀಣ ಉತ್ಪನ್ನಗಳಾದ ಸೀರೆ, ಮಣ್ಣಿನ, ಹುಲ್ಲಿನ, ಮರದ ಕಲಾಕೃತಿಗಳು, ಸಾವಯವ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ವಿವಿಧ ಕಲಾ ಪ್ರಕಾರಗಳಾದ ಮಣ್ಣಿನ ಕಲಾಕೃತಿ ರಚನೆ, ಬುಟ್ಟಿ ರಚನೆ, ಸಹಜ ಬಣ್ಣದಲ್ಲಿ ಚಿತ್ರ ರಚನೆ ಮುಂತಾದ ಕಲಾ ಪ್ರಾತ್ಯಕ್ಷಿಕೆಗಳು ನಡೆಯಲಿವೆ.

ಅದರೊಂದಿಗೆ ಜನವರಿ 16ರಂದು ಶನಿವಾರ ನಡೆಯುವ ಪರ್ಯಾಯ ಪಂಚಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಪ್ರದರ್ಶನ ಮತ್ತು ಮಾರಾಟ ಹಾಗೂ ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನದ ಉದ್ಘಾಟನೆಯು ನಡೆಯಲಿದೆ.

ಆಸಕ್ತರಿಗೆ ಮುಕ್ತ ಅವಕಾಶವೂ ಇದೆ. ಸ್ಥಳೀಯ ಶ್ರಮಜೀವಿಗಳು ತಯಾರಿಸಿದ/ಬೆಳೆಸಿದ ವಸ್ತುಗಳ ಮಾರಾಟದ ಮಳಿಗೆಯನ್ನು ಆರಂಭಿಸಿ, ಮಧ್ಯವರ್ತಿಗಳಿಲ್ಲದೆ ಸ್ಥಳೀಯರಿಗೆ ಪೂರ್ಣ ಲಾಭ ದೊರೆಯುವಂತೆ ಮಾಡುವುದು ಶ್ರೀಪಾದರ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯು ಕಾರ್ಯರೂಪ ಪಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಯಗಳ ಅಂಗವಾಗಿ, ಶ್ರೀ ವಿಟ್ಠಲ ನಾಯಕ್, ಕಲ್ಲಡ್ಕ ಮತ್ತು ಬಳಗದ ವರಿಂದ ತುಳು ಸಂಸ್ಕೃತಿ ಸಂಭ್ರಮ, ವಿ| ಕೃಷ್ಣ ಕುಮಾರ್ ಆಚಾರ್ಯ ಮೈಸೂರು ಮತ್ತು ಬಳಗದವರಿಂದ ತಾಳಮದ್ದಲೆ, ಶ್ರೀ ಸುಚೇತನ್ ರಂಗಸ್ವಾಮಿಯವರಿಂದ ಭಕ್ತಿ ಸಂಗೀತ, ಬೆಂಗಳೂರಿನ ಶ್ರೀ ರಾಜ್ಕಮಲ್ ಮತ್ತು ವೃಂದದವರಿಂದ ವೇಣು ನಿನಾದ, ನಾಡಿನ ಪ್ರಖ್ಯಾತ ಕಲಾವಿದರಿಂದ ಬಡಗುತಿಟ್ಟು ಯಕ್ಷಗಾನ,

ಚೆನ್ನೈನ ಶ್ರೀ ಅಭಿಷೇಕ್ ರಘುರಾಮ್ ಅವರಿಂದ ಸಂಗೀತ, ಶ್ರೀಮತಿ ಜಯಂತಿ ಕುಮರೇಶ್ ಮತ್ತು ಬಳಗದವರಿಂದ ವೀಣಾ ವಾದನ, ಮೂಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ, ಪಂಡಿತ್ ವೆಂಕಟೇಶ ಕುಮಾರ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಹೀಗೆ ಮುಂತಾದ ಅಂತರಾಷ್ಟ್ರೀಯ ಮಟ್ಟದ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ.

ಇನ್ನು ವಿಶೇಷವಾಗಿ ಜನವರಿ 18ರಂದು ಸೋಮವಾರ ಜೋಡುಕಟ್ಟೆಯಿಂದ ಮೇನೆಯಲ್ಲಿ ಶ್ರೀಮನ್ಮಧ್ವಾಚಾರ್ಯ ಹಾಗೂ ಶ್ರೀ ವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ರಥಬೀದಿವರೆಗೆ ಮೆರವಣಿಗೆ ನಡೆಯಲಿದ್ದು, ಜನವರಿ 22 ರಂದು ಶುಕ್ರವಾರ ಸೌರಮಧ್ವನವಮಿಯಂದು ತುಳುಗೋಷ್ಠಿ ಹಾಗೂ ತುಳುಲಿಪಿ ಕಲಿಕೆಯ ಉದ್ಘಾಟನೆಯು ನಡೆಯಲಿದೆ.

 
 
 
 
 
 
 
 
 
 
 

Leave a Reply