ಹೆಬ್ರಿಯ ಗಿಲ್ಲಾಳಿಯಲ್ಲಿ ಪೇಜಾವರ ಮಠದ ನಾಲ್ಕನೇ ಗೋಶಾಲೆಗೆ ಸಿದ್ಧತೆ

60 ನೇ ಜನ್ಮವರ್ಧಂತಿಗೆ 6 ಗೋಶಾಲೆ : ಪೇಜಾವರ ಶ್ರೀ ಕನಸು . ​​ ಗೋರಕ್ಷಣೆಯ ಮೌನಕ್ರಾಂತಿಯನ್ನು ನಡೆಸುತ್ತಿರುವ ಶ್ರೀ ಪೇಜಾವರ ಮಠವು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಗಿಲ್ಲಾಳಿಯಲ್ಲಿ ತನ್ನ ನಾಲ್ಕನೇ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸಿದೆ​. 
ಹೆಬ್ರಿಯ ಪ್ರಸಿದ್ಧ ವೈದಿಕ ಮನೆತನವಾಗಿರುವ ರಾಘವೇಂದ್ರ ಆಚಾರ್ಯ ಮತ್ತು ಕುಟುಂಬಸ್ಥರು ದಾನವಾಗಿ ನೀಡಿರುವ 7 ಎಕರೆ ಮತ್ತು ರಾಮಕೃಷ್ಣ ಆಚಾರ್ಯ  ಎಂಬವರು ನೀಡಿರುವ 2 ಎಕ್ರೆ ಹೀಗೆ 9 ಎಕ್ರೆ ಅತ್ಯಂತ ಸುಂದರ ಪ್ರಾಕೃತಿಕ ಸೊಬಗಿನ ಭೂಮಿಯಲ್ಲಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯನ್ನು ಆರಂಭಿಸಲು ಸಕಲ ಸಿದ್ಧತೆ ನಡೆದಿದೆ . 
 
ಈ ಸಂಬಂಧ ಶನಿವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಮುಂದಿನ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿದರು​. 
ಶ್ರೀ ಮಠದ ಗೋವರ್ಧನಗಿರಿ ಟ್ರಸ್ಟ್ ನೇತೃತ್ವದಲ್ಲಿ ಈಗಾಗಲೇ ಉಡುಪಿಯ ನೀಲಾವರ, ಕೊಡವೂರು, ಹೆಬ್ರಿಯ ಕಬ್ಬಿನಾಲೆ ಸಮೀಪದಲ್ಲಿ ಹೀಗೆ ಮೂರು ಗೋಶಾಲೆಗಳು ಅತ್ಯಂತ ಯಶಸ್ವಿಯಾಗಿ ಸಮಾಜದ ಸಹೃದಯರ ಹಾಗೂ ಗೋಪ್ರೇಮಿಗಳ ಸಹಕಾರದೊಂದಿಗೆ ನಡೆಸಲ್ಪಡುತ್ತಿವೆ .

ಈಗ 56 ರ ಹರೆಯದ ಶ್ರೀಗಳು ತನ್ನ 60 ನೇ ಜನ್ಮವರ್ಧಂತಿಯ ವೇಳೆಗೆ ಒಟ್ಟು  6  ಗೋಶಾಲೆಗಳನ್ನು   ಸ್ಥಾಪಿಸಿ ಸಾವಿರಾರು ಗೋವುಗಳಿಗೆ ನೆಮ್ಮದಿಯ ಆಶ್ರಯ ಒದಗಿಸುವ ಕನಸು ಹೊಂದಿದ್ದಾರೆ​. ಇಂದು ( ಭಾನುವಾರ) ಹೆಬ್ರಿ ಗಿಲ್ಲಾಳಿಯ ಗೋಶಾಲೆ ಪ್ರಾರಂಭವಾಗುವ ಸ್ಥಳದಲ್ಲಿ ಹಿಂದೂ ಸಂಘಟನೆಗಳ ಸಹಯೋಗ ದೊಂದಿಗೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು  ನಡೆಯಲಿದೆ​. ​

 
 
 
 
 
 
 
 
 

Leave a Reply